ಬೆಳ್ತಂಗಡಿ: ಗಮಕ ಎಂದರೆ ಸಾಹಿತ್ಯ, ಸಂಗೀತ ಇವೆರಡರ ಸರಸ ಸಾಮರಸ್ಯವನ್ನು ಪ್ರತಿಬಿಂಬಿಸುವ ಪ್ರಾಚೀನ ಋಷಿಗಳಾದ ವಾಲ್ಮೀಕಿ ಮಹರ್ಷಿಪ್ರಣೀತ ಕಲೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಗಮಕಿ ದಿವಾಕರ ಆಚಾರ್ಯ ಧರ್ಮಸ್ಥಳ ಹೇಳಿದರು.
ಅವರು ಶನಿವಾರ ಕರ್ನಾಟಕ ಗಮಕ ಕಲಾ ಪರಿಷತ್, ಬೆಳ್ತಂಗಡಿ ತಾಲೂಕು ಕರ್ನಾಟಕ ಗಮಕ ಕಲಾ ಪರಿಷತ್, ವಾಣಿ ಕಾಲೇಜು ಸಹಯೋಗದಲ್ಲಿ ವಾಣಿ ವಿದ್ಯಾಸಂಸ್ಥೆಯಲ್ಲಿ ನಡೆದ ತಾಲೂಕಿನ ಪ್ರಥಮ ಗಮಕ ತಾಲೂಕು ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿಂದೆ ಕಾವ್ಯ ಗಾಯನ ಎನ್ನುತ್ತಿದ್ದರು. ಅದರ ಅರ್ಥವೇ ಹೇಳಿದಂತೆ ಕಾವ್ಯಗಳನ್ನು ಓದುವುದಲ್ಲ. ಗಾಯನ ಮಾಡಬೇಕು. ಹಾಗಾದರೆ ಮಾತ್ರ ಕಾವ್ಯ ರಚಿಸಿದ ಕವಿಯ ಮನಸ್ಸು, ಕಾವ್ಯದ ಭಾವ, ಹಿನ್ನೆಲೆ ಅರ್ಥವಾಗುತ್ತದೆ. ಓದುವ ವ್ಯಕ್ತಿ ಆಡಿದರೆ ಮಾತ್ರ ಅದು ಕೇಳುಗರಲ್ಲಿ ಅಚ್ಚಳಿಯದೆ ಉಳಿಯಲು ಸಾಧ್ಯ. ಇಲ್ಲದಿದ್ದರೆ ಅದು ಕಾದಂಬರಿ ಓದಿದ ಹಾಗೆ ಆಗುತ್ತದೆ ಎಂದರು.
ತಾಲೂಕು ಗಮಕ ಕಲಾ ಪರಿಷತ್ನ ಕಾರ್ಯದರ್ಶಿ ರಾಮಕೃಷ್ಣ ಭಟ್ ಉಜಿರೆ ಪ್ರಾಸ್ತಾವಿಕವಾಗಿ ಮಾತನಾಡಿ ಗಮಕಗಳಿಗೆ ಹೊಸ ಪ್ರಯೋಗಗಳನ್ನು ಬೆಳ್ತಂಗಡಿ ತಾಲೂಕು ಗಮಕ ಕಲಾಪರಿಷತ್ ಮಾಡುತ್ತಿದ್ದು ಅಲ್ಲದೆ ಇದನ್ನು ಉಳಿಸಿ ಬೆಳೆಸಲು ಸಮುದಾಯದಲ್ಲಿ ಬೆಳೆಯಲು ಸಮ್ಮೇಳನವನ್ನು ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಗಮಕ ಸಮ್ಮೇಳನವನ್ನು ಮಾಡುವ ಚಿಂತನೆ ಇದೆ ಎಂದರು.
ಸಮ್ಮೇಳನವನ್ನು ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಪ.ರಾಮಕೃಷ್ಣ ಶಾಸ್ರ್ತೀ, ದ.ಕ.ಜಿಲ್ಲಾ ಗಮಕ ಪರಿಷತ್ ಅಧ್ಯಕ್ಷ ಪ್ರೊ.ಮಧೂರು ಮೋಹನ ಕಲ್ಲೂರಾಯ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಎಚ್.ಎಸ್. ಕಲಾ ಪೋಷಕ ಶ್ರೀಶ ಮುಚ್ಚಿನ್ನಾಯ, ಯಕ್ಷಭಾರತಿ ಕನ್ಯಾಡಿ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ಗ.ಕ.ಪ. ತಾಲೂಕು ಅಧ್ಯಕ್ಷ ಜಯರಾಮ ಕುದ್ರೆತ್ತಾಯ,ವಾಣಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯ ಶಿಕ್ಷಕ ಲಕ್ಷ್ಮೀ ನಾರಾಯಣ ಕೆ. ಇವರು ಉಪಸ್ಥಿತರಿದ್ದರು.
ಕ.ಸಾ.ಪ ತಾಲೂಕು ಅಧ್ಯಕ್ಷ ಯದುಪತಿ ಗೌಡ ಸ್ವಾಗತಿಸಿದರು. ಗ.ಕ.ಪ. ಕಾರ್ಯದರ್ಶಿ ರಾಮಕೃಷ್ಣ ಭಟ್ ಉಜಿರೆ ಪ್ರಸ್ತಾವಿಕವಾಗಿ ಮಾತನಾಡಿದರು. ರಮೇಶ್ ಮಯ್ಯ ಸಮ್ಮೇಳನದ ಅಧ್ಯಕ್ಷರನ್ನು ಪರಿಚಯಿಸಿದರು. ಗ.ಕ.ಪ. ಕೋಶಾಧಿಕಾರಿ ರಾಮಕೃಷ್ಣ ಭಟ್ ಬೆಳಾಲು ವಂದಿಸಿದರು. ಗಮಕಿ ಸುವರ್ಣ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.