ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಮಹಾವಿದ್ಯಾಲಯ ಉಜಿರೆಯ ಸಮ್ಯಗ್ದರ್ಶನ ಸಭಾಭವನದಲ್ಲಿ ಮೇ 26 ಮತ್ತು 27ರಂದು 25ನೇ ವರ್ಷದ ಎರಡು ದಿನಗಳ ರಾಜ್ಯ ಮಟ್ಟದ ಸಾಹಿತ್ಯ ಅಧ್ಯಯನದ ‘ಕಲಾನುಸಂಧಾನ’ ಶಿಬಿರ ಆಯೋಜಿಸಲಾಗಿದೆ.
ಶ್ರೀ.ಧ.ಮ ಸ್ವಾಯತ್ತ ಕಾಲೇಜಿನ ಕನ್ನಡ ಸಂಘ ಮತ್ತು ಹೆಗ್ಗೋಡಿನ ನೀನಾಸಂ ಪ್ರತಿಷ್ಠಾನ ಸಹಯೋಗದಲ್ಲಿ ಶಿಬಿರ ನಡೆಯಲಿದೆ. ಪೂರ್ವಾಹ್ನ 10 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಹೇಮಾವತಿ ವಿ.ಹೆಗ್ಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಖ್ಯಾತ ಕಥೆಗಾರ ವಸುಧೇಂದ್ರ ದಿಕ್ಸೂಚಿ ಭಾಷಣ ಮಾಡಲಿದ್ದು, ಶ್ರೀ.ಧ.ಮ. ಸ್ವಾಯತ್ತ ಮಹಾವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ.ಬಿ.ಪಿ ಸಂಪತ್ ಕುಮಾರ್ ರಜತ ಅವಲೋಕನ ಕುರಿತು ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಕನ್ನಡದ ಶ್ರೇಷ್ಠ ಲೇಖಕರು ಬರೆದ ಮೂರರಿಂದ ನಾಲ್ಕು ಕೃತಿಗಳನ್ನು ಶೇಕಡ 50ರ ರಿಯಾಯಿತಿಯಲ್ಲಿ ನೀಡಲಾಗುವುದು.
ನೀನಾಸಂ ಪ್ರತಿಷ್ಠಾನ ನಿರ್ದೇಶಕ ಪ್ರೊ.ಟಿ.ಪಿ ಅಶೋಕ, ಸಾಗರದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಜಸವಂತ್ ಜಾಧವ್, ಯುವ ಚಿಂತಕ ಡಾ. ಮಾಧವ ಚಿಪ್ಪಳ್ಳಿ, ರಂಗಕರ್ಮಿ ವಿದ್ಯಾ ಹೆಗಡೆ ಸೇರಿದಂತೆ ಹಲವು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.