ಸ್ಯಾಂಡಲ್ ವುಡ್ ನಲ್ಲೀಗ ಕ್ರಿಯಾಶೀಲತೆಯ ಸುಗ್ಗಿ ಶುರುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾದ ಬಹುತೇಕ ಸಿನೆಮಾಗಳ ಟ್ರೇಲರ್ ಗಳು ನಿರೀಕ್ಷೆಯ ಬೆಟ್ಟವನ್ನೇ ಸೃಷ್ಟಿಮಾಡಿವೆ. ಲಾಂಗು, ಮಚ್ಚು, ತಲೆಬುಡವಿಲ್ಲದ ಕಥೆಗಳಿಂದ ವ್ಯಥೆಗೊಳಗಾಗಿದ್ದ ಕನ್ನಡ ಪ್ರೇಕ್ಷಕ ಹೊಸಬರ ಕ್ರೀಯಾಶೀಲ ಯೋಚನೆಗಳಿಂದ ಮತ್ತೆ ಥಿಯೇಟರಿನ ದಾರಿ ಹಿಡಿದಿದ್ದಾನೆ. ಈ ವಾರವೂ ಅಂತಹ ಬೃಹತ್ ನಿರೀಕ್ಷೆಯ “ಗೋಧಿ ಬಣ್ಣ, ಸಾಧಾರಣ ಮೈಕಟ್ಟು” ಬಿಡುಗಡೆಯಾಗುತ್ತಿದೆ. ತಂದೆ-ಮಗನ ಭಾಂದವ್ಯವಿರುವ ಫ್ಯಾಮಿಲಿ ಸಿನೆಮಾ ಗೋಧಿ ಬಣ್ಣದಲ್ಲಿ ಅನಂತ್ ನಾಗ್ ಅವರು ಅಲ್ಝೀಮರ್ಸ್ ಪೀಡಿತ ತಂದೆಯಾಗಿ ಅಭಿನಯಿಸಿದರೆ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕಾಣೆಯಾದ ತಂದೆಯನ್ನು ಹುಡುಕಾಡುವ ಮಗನ ಪಾತ್ರದಲ್ಲಿ ಮತ್ತು ನಾಯಕಿ ಶ್ರುತಿ ಹರಿಹರನ್ ಕಾಣೆಯಾದ ರೋಗಿಯನ್ನು ಹುಡುಕುವ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಹೇಮಂತ್ ಕುಮಾರ್ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ “ಗೋಧಿ ಬಣ್ಣ, ಸಾಧಾರಣ ಮೈಕಟ್ಟು” ನಾಳೆ ಜೂನ್ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚರಣ್ ರಾಜ್ ಸಂಗೀತವಿರುವ ಎಲ್ಲಾ ಹಾಡುಗಳು ಈಗಾಗಲೇ ಹೊಸತನದ ಬೆರಕೆಯಿಂದ ಪ್ರೇಕ್ಷಕನಿಗೆ ಆಪ್ತವಾಗಿಬಿಟ್ಟಿವೆ. ಪುಷ್ಕರ್ ಫಿಲಂಸ್ ಲಾಂಛನದಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಚಿತ್ರದಲ್ಲಿ ಅನಂತ್ ನಾಗ್, ರಕ್ಷಿತ್ ಶೆಟ್ಟಿ, ಅಚ್ಯುತ್ ಕುಮಾರ್, ಶ್ರುತಿ ಹರಿಹರನ್, ವಸಿಷ್ಠ ಎನ್ ಸಿಂಹ ಅವರು ತೆರೆಯಲ್ಲಿ ಮ್ಯಾಜಿಕ್ ಮಾಡಿದರೆ, ನಂದಕಿಶೋರ್ ಛಾಯಾಗ್ರಹಣದಲ್ಲಿ, ಶ್ರೀಕಾಂತ್ ಸಂಕಲನದಲ್ಲಿ ತೆರೆಯ ಹಿಂದಿನ ಮಾಂತ್ರಿಕರಾಗಿ ಉಳಿದಿದ್ದಾರೆ.
ಬಿಡುಗಡೆಯ ಮುಂಚೆ ಹವಾ ಕ್ರಿಯೇಟ್ ಮಾಡಿರುವ ಚಿತ್ರ ಪ್ರೇಕ್ಷಕನ ನಿರೀಕ್ಷೆಯ ಮಟ್ಟವನ್ನು ತಲುಪಿ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವುದರೊಂದಿಗೆ ಹೊಸ ನಿರ್ಮಾಪಕರನ್ನು ಉಳಿಸಲು, ಹೊಸ ತಂತ್ರಜ್ಞರನ್ನು ಬೆಳೆಸಲಿ ಎಂಬುದು ನ್ಯೂಸ್ ಕನ್ನಡದ ಆಶಯ.