ದುಬೈ: ತುಂಬಾ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಬಾಲಿವುಡ್ ನಟಿ ಶ್ರೀದೇವಿ ಪಾರ್ಥಿವ ಶರೀರವನ್ನು ಭಾರತಕ್ಕೆ ಕೊಂಡೊಯ್ಯಲು ಬೇಕಿದ್ದ ಅನುಮತಿ ಪತ್ರಗಳನ್ನು ದುಬೈ ಪೊಲೀಸರು ಮಂಗಳವಾರ ನೀಡಿರುವುದಾಗಿ ವರದಿಗಳು ಹೇಳಿವೆ.
ಮೃತದೇಹ ಹಸ್ತಾಂತರ ಸಂಬಂಧ ಬೇಕಿದ್ದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ದುಬೈಯಲ್ಲಿರುವ ಭಾರತದ ರಾಯಭಾರ ಕಚೇರಿ ಅಧಿಕಾರಿ ಹಾಗೂ ಕುಟುಂಬಸ್ಥರಿಗೆ ನೀಡಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಶ್ರೀದೇವಿ ಬಾತ್ ಟಬ್ ನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯವು ಸೋಮವಾರ ವರದಿ ನೀಡಿದ ಬಳಿಕ ಸಾವಿನ ಬಗ್ಗೆ ಅನುಮಾನ ಮೂಡಿತ್ತು. ಆದರೆ ಕುಡಿದ ಮತ್ತಿನಲ್ಲಿ ಜಾರಿ ಬಿದ್ದು ಮೃತಪಟ್ಟಿದ್ದಾರೆ. ರಕ್ತದಲ್ಲಿ ಮದ್ಯದ ಅಂಶ ಪತ್ತೆಯಾಗಿದೆ. ಸಾಯುವಾಗ ಅವರಿಗೆ ಪ್ರಜ್ಞೆ ಇರಲಿಲ್ಲ ಎಂದು ದುಬೈ ಸರ್ಕಾರ ತಿಳಿಸಿದೆ.