ಬೆಂಗಳೂರು: ಮಾಸ್ತಿಗುಡಿ ಸಿನಿಮಾ ಶೂಟಿಂಗ್ ವೇಳೆ ಇಬ್ಬರು ಖಳನಟರು ದುರಂತ ಸಾವಿಗೀಡಾದ ದುರ್ಘಟನೆ ಸಾರ್ವಜನಿಕರ ಮನಸ್ಸಿನಿಂದ ಮಾಸುವ ಮುನ್ನವೇ ಮತ್ತೊಂದು ಸಿನಿಮಾ ಶೂಟಿಂಗ್ ವೇಳೆ ಸಹ ಕಲಾವಿದೆಯೊಬ್ಬರು ಲಿಫ್ಟ್ ನ ಗುಂಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ.
ನಗರದ ಹೊರವಲಯದ ರಾಜಾನುಕುಂಟೆ ಸಮೀಪದ ಅವಲಹಳ್ಳಿಯಲ್ಲಿ ನಿರ್ಮಾಣ ಹಂತದ ಅಪಾರ್ಟ್ಮೆಂಟ್ ಕಟ್ಟಡದಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿದ್ದ ವೇಳೆ 18ನೇ ಮಹಡಿಯಿಂದ ಬಿದ್ದು ಸಹ ಕಲಾವಿದೆ ಪದ್ಮಾವತಿ(44) ಮೃತಪಟ್ಟಿದ್ದಾರೆ. ನಂದ ಕಿಶೋರ್ ನಿರ್ದೇಶನ, ರವಿಚಂದ್ರನ್ ಪುತ್ರ ಮನೋರಂಜನ್ ನಾಯಕ ನಟನಾಗಿರುವ ವಿಐಪಿ ಸಿನಿಮಾ ಶೂಟಿಂಗ್ ವೇಳೆ ಸೋಮವಾರ ಮಧ್ಯಾಹ್ನ 3.30ರ ವೇಳೆ ಕಟ್ಟಡದ ಲಿಫ್ಟ್ ಪ್ಯಾಸೇಜ್ನಿಂದ ಸಹ ಕಲಾವಿದೆ ಬಿದ್ದಿದ್ದಾರೆ. ಆದರೆ, ಶೂಟಿಂಗ್ ಮುಗಿದು ತುಂಬಾ ಹೊತ್ತು ಕಳೆದರೂ ಸಹ ಕಲಾವಿದೆ ನಾಪತ್ತೆಯಾಗಿರುವುದು ಯಾರ ಗಮನಕ್ಕೂ ಬಂದಿರಲಿಲ್ಲ.
ಯಲಹಂಕ ಸಮೀಪ ಹಾಲಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟದಲ್ಲಿ ವಿಐಪಿ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಈ ಚಿತ್ರದಲ್ಲಿ 120 ಜನರು ಹಾಜರಾಗಿದ್ದರು. ಚಿತ್ರೀಕರಣ ಮುಗಿದ ಮೇಲೆ ಸಹ ನಟರ ಎಣಿಕೆ ಕಾರ್ಯ ನಡೆಸಿದ ಬಳಿಕ ಪದ್ಮಾವತಿ ನಾಪತ್ತೆಯಾಗಿರುವುದು ತಿಳಿದು ಬಂದಿತ್ತು. ನಂತರ ಪದ್ಮಾವತಿಗಾಗಿ ಹುಡುಕಿದಾಗ ಅವಳ ಶವ ಲಿಫ್ಟ್ ಅಳವಡಿಸುವ ಜಾಗದಲ್ಲಿ ಪತ್ತೆಯಾಗಿತ್ತು.