ಜೋಧ್ ಪುರ: ರಾಜಸ್ಥಾನದ ಜೋಧ್ ಪುರ ವಿಶೇಷ ನ್ಯಾಯಾಲಯದಲ್ಲಿ 1998ರ ಕೃಷ್ಣಮೃಗ ಭೇಟೆ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಈ ಸಂಬಂಧ ಇಂದು ನ್ಯಾಯಾಲಯಕ್ಕೆ ಆಗಮಿಸಿದ ನಟ ಸಲ್ಮಾನ್ ಖಾನ್ ತಮ್ಮ ಹೇಳಿಕೆ ನೀಡಿದ್ದು, “ಪ್ರಕರಣದಲ್ಲಿ ನಾನು ನಿರಪರಾಧಿಯಾಗಿದ್ದು, ನನ್ನು ಉದ್ದೇಶಪೂರ್ವಕವಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅಲ್ಲದೆ ನನ್ನ ವಿರುದ್ಧ ಪೊಲೀಸರು ನೀಡಿರುವ ಸಾಕ್ಷ್ಯಗಳು ಸುಳ್ಳು ಎಂದು ಹೇಳಿದ್ದಾರೆ.
ವಿಚಾರಣೆಯಲ್ಲಿ ತಮ್ಮ ವಾದ ಮಂಡಿಸಿದ ಪ್ರಾಸಿಕ್ಯೂಷನ್ ಪರ ವಕೀಲರು, ನಟ ಸಲ್ಮಾನ್ ಖಾನ್, ಸೈಫ್ ಅಲಿಖಾನ್, ನಟಿ ಸೋನಾಲಿ ಬೇಂದ್ರೆ, ಟಬು ಹಾಗೂ ನೀಲಂ ಅವರು ಹಮ್ ಸಾಥ್ ಸಾಥ್ ಹೇ ಚಿತ್ರದ ಚಿತ್ರೀಕರಣಕ್ಕಾಗಿ ಆಗಮಿಸಿದ್ದರು. 1998 ಅಕ್ಟೋಬರ್ 1ರ ರಾತ್ರಿ ಜಿಪ್ಸಿ ವಾಹನದಲ್ಲಿ ಸ್ಥಳೀಯ ಗೈಡ್ ಗಳ ಸಹಾಯದಿಂದ ಅರಣ್ಯ ಪ್ರವೇಶ ಮಾಡಿದ್ದರು. ಜಿಪ್ಸಿಯನ್ನು ನಟ ಸೈಫ್ ಅಲಿಖಾನ್ ಚಲಾಯಿಸುತ್ತಿದ್ದರು. ಕಾರಿನ ಹಿಂಬದಿಯಲ್ಲಿ ಶಾಟ್ ಗನ್ ಗಳಿದ್ದವು. ಸಂರಕ್ಷಿತಾರಣ್ಯವನ್ನು ಅಕ್ರಮವಾಗಿ ಪ್ರವೇಶಿಸಿದ ನಟ ಸಲ್ಮಾನ್ ಕೃಷ್ಣಮೃಗ ಹಾಗೂ ಚಿಂಕಾರಗಳನ್ನು ಭೇಟೆಯಾಡಿದ್ದಾರೆ ಎಂದು ವಾದ ಮಂಡಿಸಿದರು. ಆದರೆ ಪ್ರಾಸಿಕ್ಯೂಷನ್ ವಾದವನ್ನು ತಳ್ಳಿ ಹಾಕಿದ ನಟ ಸಲ್ಮಾನ್ ಖಾನ್ ಚಿತ್ರೀಕರಣದ ಬಳಿಕ ತಾವು ಅರಣ್ಯಕ್ಕೆ ಹೋಗಲೇ ಇಲ್ಲ. ನೇರವಾಗಿ ಹೊಟೆಲ್ ಗೆ ಆಗಮಿಸಿದೆವು ಎಂದು ಆರೋಪವನ್ನು ತಳ್ಳಿ ಹಾಕಿದ್ದಾರೆ.
ಅಂದು ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಸಾವನ್ನಪ್ಪಿದ ಕೃಷ್ಣಮೃಗ ಸತ್ತಿದ್ದು ಸಹಜ ಸಾವಿನಿಂದಾಗಿ. ಆದರೆ ಪ್ರಾಸಿಕ್ಯೂಷನ್ ಹಾಗೂ ಪೊಲೀಸರು ಆ ಪ್ರಾಣಿ ಸಾವಿಗೆ ನಾನೇ ಕಾರಣ ಎಂದು ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ಮುಖ್ಯಸ್ಥೆ ಡಾ.ನೆಪಾಲಿಯಾ ಅವರೇ ಹೇಳಿರುವಂತೆ ಅಂದು ಸಾವನ್ನಪ್ಪಿದ್ದ ಕೃಷ್ಣಮೃಗ ಸಹಜವಾಗಿ ಸಾವನ್ನಪ್ಪಿತ್ತು ಎಂದು ಹೇಳಿದ್ದಾರೆ. ಹೀಗಾಗಿ ಪ್ರಾಣಿಯ ಸಾವಿಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳಿದ್ದಾರೆ.