ಪತ್ತನಾಜೆಯೊಂದಿಗೆ ತುಳುನಾಡಿನ ಗಂಡುಕಲೆ ಯಕ್ಷಗಾನದ ಮೇಳಗಳು ತಮ್ಮ ಪ್ರದರ್ಶನವನ್ನು ಮುಗಿಸಿವೆ. ಇತ್ತೀಚಿನ ದಿನಗಳಲ್ಲಿ ಯಕ್ಷಗಾನದಲ್ಲಿ ಪ್ರಚಲಿತ ವಿದ್ಯಮಾನಗಳನ್ನು, ಚಲನಚಿತ್ರ ಮತ್ತು ರಾಜಕಾರಣದಲ್ಲಿ ವೈರಲ್ ಆಗುವ ಸಂಭಾಷಣೆಗಳನ್ನು ಪಾತ್ರೋಚಿತವಾಗಿ ಅಳವಡಿಸಿಕೊಂಡಿರುವುದನ್ನು ಯಕ್ಷಪ್ರಿಯರು ನೋಡಿದ್ದಾರೆ.
ಈ ಹಿಂದೆ ರಾಷ್ಟ್ರೀಯ ಪಕ್ಷವೊಂದರ ನಾಯಕರ ‘ಇವನರ್ವ..’ ಹೇಳಿಕೆ ಯಕ್ಷಗಾನದಲ್ಲೂ ವೈರಲ್ ಆಗಿ ಒಂದಿಷ್ಟು ವಿವಾದಕ್ಕೂ ಕಾರಣವಾಗಿತ್ತು. ಆ ಬಳಿಕ ಕಾಂತಾರ ಚಿತ್ರದ ಒಂದಷ್ಟು ಫೇಮಸ್ ಸಂಭಾಷಣೆಗಳೂ ಸಹ ಕೆಲವೊಂದು ಪ್ರಸಂಗಗಳಲ್ಲಿ ಯಕ್ಷ ಪಾತ್ರಧಾರಿಗಳು ಅಳವಡಿಸಿಕೊಂಡು ಯಕ್ಷಪ್ರಿಯರ ಶಿಳ್ಳೆ ಮತ್ತು ಚಪ್ಪಾಳೆಗಳನ್ನು ಗಿಟ್ಟಿಸಿಕೊಂಡಿದ್ದರು.
ಇದೀಗ ಅಂತದ್ದೇ ಒಂದು ಸಂಭಾಷಣೆ ಯಕ್ಷಗಾನ ಪ್ರದರ್ಶನವೊಂದರಲ್ಲಿ ಕೇಳಿಬಂದಿದ್ದು ಆ ಸಂಭಾಷಣೆಯ ತುಣುಕು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಪ್ರಮುಖ ರಾಷ್ಟ್ರೀಯ ಪಕ್ಷವೊಂದರ ರಾಜ್ಯಾಧ್ಯಕ್ಷರು ಪಕ್ಷದ ಸಭೆಯೊಂದರಲ್ಲಿ ‘ಎಲ್ಲಾ ಕಡೆ ನೋಡ್ಕೊಂಡು ಬಂದಿದ್ದೇನೆ, ಯಾರಿಗೆ ಹೆಚ್ಚು ಚಪ್ಪಾಳೆ ಬೀಳುತ್ತೋ ಅವರಿಗೆ ಟಿಕೆಟ್ ಇಲ್ಲ.. ನಾನು ಅಧ್ಯಕ್ಷ..’ ಎಂಬ ಮಾತು ಆಮೇಲೆ ಚುನಾವಣಾ ಫಲಿತಾಂಶ ಬಂದ್ಮೇಲೆ ಒಟ್ರಾಶಿ ವೈರಲ್ ಆಗಿತ್ತು. ಅದನ್ನೇ ಕಟೀಲು 3ನೇ ಮೇಳದ ಪ್ರದರ್ಶನವೊಂದರಲ್ಲಿ ಕಲಾವಿದರಿಬ್ಬರ ನಡುವಿನ ಸಂಭಾಷಣೆಯಲ್ಲಿ ಬಂದು ನೆರೆದಿದ್ದ ಪ್ರೇಕ್ಷರನ್ನು ರಂಜಿಸಿದೆ.
ದೇವೇಂದ್ರ ಪಾತ್ರಧಾರಿ, ‘ನಾನು ಯಾರು ಬಲ್ಲೆಯಾ? ನಾನು ಅಧ್ಯಕ್ಷ.. ನಾನು ಒಂದು ಲೋಕಕ್ಕೆ ಮಾತ್ರವಲ್ಲ ಮೂರು ಲೋಕಕ್ಕೂ ಅಧ್ಯಕ್ಷ..’ ಎಂಬ ಮಾತನ್ನು ಹೇಳುವಾಗ ಇದಿರು ಪಾತ್ರಧಾರಿ ‘ಇಂದ್ರ..’ ಎಂದು ಕೈಮುಗಿದು ನಮಸ್ಕರಿಸಿ ಬಳಿಕ, ‘ನಾನು ಅಧ್ಯಕ್ಷ.. ನಾನು ಅಧ್ಯಕ್ಷ.. ಅಂತ ಹೇಳಿಕೊಂಡು ತಿರುಗಾಡಿದ್ರೆ ಸಾಲ್ದು ಅಧ್ಯಕ್ಷ ಪೀಠಕ್ಕೆ ಸರಿಯಾದ ಪ್ರವರ್ತನೆ ಬೇಕು, ಅದಲ್ದೇ ಹೋದ್ರೆ ಬರೇ ಅಧ್ಯಕ್ಷ ಅಂತ ಯಾರೂ ಕೈ ಮುಗಿಯೋದಿಲ್ಲ..’ ಎಂದು ಹೇಳುವಾಗ ಪ್ರೇಕ್ಷಕರಿಂದ ಭರ್ಜರಿ ಶಿಳ್ಳೆ ಬೀಳುತ್ತದೆ. ಇದೀಗ ಈ ವಿಡಿಯೋ ತುಣುಕನ್ನು ಹಲವರು ವಾಟ್ಸ್ಯಾಪ್ ಸ್ಟೇಟಸ್ ಹಾಕಿಕೊಂಡಿರುವುದ ಮಾತ್ರವಲ್ಲದೇ ತಮ್ಮ ಗ್ರೂಪುಗಳಲ್ಲಿ ಶೇರ್ ಮಾಡ್ತಿದ್ದಾರೆ.