ದೇಹಕ್ಕೆ ಏನಾದರು ತೊಂದರೆಯಾದರೆ, ಕಾಯಿಲೆ ಕಾಣಿಸಿಕೊಂಡರೆ ಅದಕ್ಕೆ ಚಿಕಿತ್ಸೆ ನೀಡಿ ವಾಸಿ ಮಾಡಿಕೊಳ್ಳಬಹುದು. ಆದರೆ ನಾವೇನಾದರೂ ತಿಳಿದೋ ತಿಳಿಯದೆಯೋ ಮಾಡಿಕೊಳ್ಳುವ ಎಡವಟ್ಟುಗಳು ಬದುಕಿನಲ್ಲಿ ಇನ್ನಿಲ್ಲದಂತೆ ಕಾಡಿಬಿಡುತ್ತದೆ. ದೇಹಕ್ಕೆ ಕಾಯಿಲೆ ಬಂದು ಸಾಯುವವರು ಒಂದೆಡೆಯಾದರೆ, ತಾವೇ ತಂದುಕೊಂಡ ತೊಂದರೆಯಿಂದ ತಮ್ಮ ಬದುಕಿಗೆ ಅಂತ್ಯ ಕಂಡು ಕೊಳ್ಳುವವರು ಇನ್ನೊಂದು ಕಡೆಯಿದ್ದಾರೆ.
ಮಾನವ ಜೀವನ ಪವಿತ್ರವಾದದು. ಅದನ್ನು ಒಳ್ಳೆಯ ರೀತಿಯಲ್ಲಿ ಸಾಗಿಸಿಕೊಂಡು ಹೋದರೆ ಯಾವುದೇ ತೊಂದರೆಯಾಗದಂತೆ ಖುಷಿಯಾಗಿ ಬದುಕಬಹುದು. ಆದರೆ ನಮ್ಮಲ್ಲಿನ ಮಾನವ ಸಹಜಗುಣಗಳನ್ನು ಒಳ್ಳೆಯದಕ್ಕೆ ಬಳಸದೆ ಇರುವುದರಿಂದಾಗಿ ನಾವು ದೈಹಿಕವಾಗಿ ಎಷ್ಟೇ ಆರೋಗ್ಯವಂತರಾಗಿ, ಸ್ಥಿತಿವಂತರಂತೆ ಕಂಡರೂ ಮಾನಸಿಕ ಆರೋಗ್ಯದಿಂದ ವಂಚಿತರಾಗಿ ಹೇಗೇಗೋ ಬದುಕುತ್ತಿರುತ್ತೇವೆ.
ನಾವು ಅನುಭವಿಸುವ ಬಹಳಷ್ಟು ತೊಂದರೆಗಳಲ್ಲಿ ದುರ್ಜನರ ಸಂಗವೂ ಒಂದಾಗಿದೆ. ಇದೊಂದು ರೀತಿಯಲ್ಲಿ ಆಶ್ರಯಕೊಟ್ಟ ಮರವನ್ನು ತಿನ್ನುವ ಗೆದ್ದಲಿನಂತೆ. ಹೀಗಾಗಿಯೇ ಹಿರಿಯರು ದುರ್ಜನರ ಸಂಗ ಬಿಡು, ಸಜ್ಜನರ ಸಹವಾಸ ಮಾಡು ಎಂದು ಹೇಳಿದ್ದಾರೆ. ಇದು ಎಷ್ಟೊಂದು ಮಹತ್ವ ಪಡೆದಿದೆ ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ. ನಾವು ಸಜ್ಜನರ ಸಂಗದಿಂದ ಪಡೆದದ್ದು, ದುರ್ಜನರಿಂದ ಕಳೆದುಕೊಂಡಿದ್ದು ಒಂದು ಕ್ಷಣ ಯೋಚಿಸಿದಾಗ ಗೊತ್ತಾಗಿ ಬಿಡುತ್ತದೆ. ಕೆಲವೊಮ್ಮೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ದುರ್ಜನರ ಸಹವಾಸ ಮಾಡಿರುತ್ತೇವೆ. ಅವರೊಂದಿಗೆ ಸೇರಿ ಮಾಡಬಾರದ್ದನೆಲ್ಲಾ ಮಾಡಿ ಬಿಡುತ್ತೇವೆ. ಕ್ರಮೇಣ ನಾವು ಮಾಡಿದ ಪಾಪಕ್ಕೆ ಪ್ರತಿಫಲ ಅನುಭವಿಸುವಾಗ ನಾವು ಮಾಡಿದ ಪಾಪದ ಕಾರ್ಯಗಳು ನೆನಪಿಗೆ ಬರುತ್ತವೆ. ನಾನು ಅವನ ಸಹವಾಸ ಮಾಡಿ ಹಾಳಾದೆ ಎಂಬುವುದು ಮನದಟ್ಟಾಗುತ್ತದೆ. ಆದರೆ ಏನು ಪ್ರಯೋಜನ ಕಾಲ ಮಿಂಚಿ ಹೋಗಿರುತ್ತದೆ.
ಕೆಟ್ಟವರ ಸಹವಾಸದಲ್ಲಿರುವವರಿಗೆ ನಾವು ಪರಿಶುದ್ಧರಾಗಿರಲು ಸಾಧ್ಯವಿಲ್ಲ. ದಾನ ಶೂರ ಕರ್ಣನೇ ದುರ್ಜನರ ಸಹವಾಸದಿಂದ ಹಾಳಾದನು. ದೈಹಿಕ ಬಲ ಮತ್ತು ಬುದ್ದಿಬಲ ಇದ್ದರೂ ಏನು ಪ್ರಯೋಜನವಾಯಿತು? ದುರ್ಯೋದನ, ದುಶ್ಯಾಸನ, ಶಕುನಿಯರ ಸಹವಾಸದಲ್ಲಿ ಬೆರೆತು ದುಷ್ಟ ಚತುಷ್ಟಯ ಎಂದು ಕುಖ್ಯಾತಿ ಪಡೆದನು. ದುಷ್ಟರ ಸಹವಾಸದಿಂದ ಸಜ್ಜನರು ಹೇಗೆ ಹಾಳಾಗುತ್ತಾರೆ ಎಂಬುದಕ್ಕೆ ಕರ್ಣ ಒಳ್ಳೆಯ ಉದಾಹರಣೆಯಾಗುತ್ತಾನೆ. ದುಷ್ಟರ ಸಂಗದಿಂದ ಸಜ್ಜನರ ಮೇಲೆ ಪರಿಣಾಮ ಬೀರುತ್ತದೆ. ಅವರ ಸಂಗದಿಂದಾಗಿ ಸದ್ಗುಣಗಳು ನಾಶವಾಗಿ ದುರ್ಗುಣಗಳು ಹುಟ್ಟುತ್ತವೆ. ಆದುದರಿಂದ ನಾವು ಅಂತಹವರಿಂದ ಆದಷ್ಟು ದೂರವಿರುವಂತೆ ಎಚ್ಚರವಹಿಸಬೇಕು.
ಸರ್ಪ ಒಮ್ಮೆ ಕಚ್ಚಿ ತೃಪ್ತಿಪಟ್ಟುಕೊಳ್ಳುತ್ತದೆ. ಆದರೆ ದುರ್ಜನರು ಆಹೋರಾತ್ರಿ ಮಾತು ಕೃತಿಯಿಂದ ಚುಚ್ಚಿ ನೋವು ನೀಡುತ್ತಾರೆ. ವಿಶ್ರಾಂತಿಯಿಲ್ಲದೆ, ವಿರಾಮವಿಲ್ಲದೆ, ತೊಂದರೆ ನೀಡುತ್ತಾರೆ. ನಾವು ನೆಮ್ಮದಿಯಿಂದ ಬದುಕಬೇಕಾದರೆ ದುರ್ಜನರಿಂದ ದೂರ ಇರುವುದನ್ನು ಕಲಿಯಬೇಕು. ಭಜ ಸಾಧು ಸಮಾಗಮಂ ಅಂದರೆ ಸಜ್ಜನರ ಸಹವಾಸದಲಿರು ಎಂದರ್ಥ. ನಾವು ದುಷ್ಟರಿಂದ ದೂರವಿದ್ದರೆ ಸಾಲದು, ಸಜ್ಜನರ ಸಂಗ ಮಾಡಬೇಕು. ಸತ್ಸಂಗದಲ್ಲಿರಬೇಕು ಎಂದು ವೇದವ್ಯಾಸರು ಹೇಳಿದ್ದಾರೆ. ಪರೋಪಕಾರವೇ ಪುಣ್ಯ. ಪರಪೀಡನೆಯೇ ಪಾಪ ಎಂಬುದನ್ನು ಮರೆಯಬಾರದು.
ದುಷ್ಟ ಜನರ ಸಂಗವನ್ನು ತ್ಯಜಿಸುವುದು ಒಂದೆಡೆಯಾದರೆ, ಮತ್ತೊಂದೆಡೆ ನಮ್ಮಲ್ಲಿ ಒಳ್ಳೆತನ ಬೆಳೆಸಿಕೊಳ್ಳುವುದು, ಜತೆಗೆ ಇಂದ್ರಿಯಗಳನ್ನು ಹಿತಮಿತವಾಗಿ ಬಳಸಿ ಜೀವನ ನರಕದೃಶ್ಯವಾಗದಂತೆ ನೋಡಿಕೊಳ್ಳಬೇಕು. ಬಾಹ್ಯದಿಂದ ದೃಷ್ಟಿಯನ್ನು ಕಿತ್ತು ಅಂತರ್ಮುಖ ಮಾಡಿಕೊಳ್ಳಬೇಕು. ಇದಕ್ಕಿಂತ ಮಿಗಿಲಾದ ಸಾಧನೆ ಬೇರೊಂದಿಲ್ಲ.
ಪಶುಪಕ್ಷಿಗಳು ತಮ್ಮ ರೀತಿ ನೀತಿ ಪಾಲಿಸುತ್ತವೆ. ದುರದೃಷ್ಟವೆಂದರೆ ಮಾನವನು ಮಾನವ ಧರ್ಮದಿಂದ ದೂರ ಸರಿಯುತ್ತಾನೆ. ಪಶುಪಕ್ಷಿಗಳಿಗೆ ಕಾಲ ಹಾಗೂ ಕಾರಣವಿದೆ. ಅವುಗಳನ್ನು ಅನುಸರಿಸಿ ವರ್ತಿಸುತ್ತವೆ. ಆದರೆ ಮನುಷ್ಯ ಹಾಗಲ್ಲ ಅವನಿಗೆ ಬುದ್ದಿಯಿದೆ. ಅದನ್ನು ಆತ್ಮತತ್ವ ಅರಿಯಲು ಬಳಸಬೇಕು. ಹಾಗಾದಾಗ ನಮ್ಮಿಂದ ಮತ್ತೊಬ್ಬರಿಗೆ ಕೆಡಕಾಗುವುದಿಲ್ಲ. ನಮ್ಮಿಂದ ಬೇರೆಯವರಿಗೆ ಕೆಡಕು ಉಂಟಾಗದಿದ್ದರೆ ಅದಕ್ಕಿಂತ ಒಳ್ಳೆಯದು ಇನ್ನೇನಿದೆ? ಎಲ್ಲರೂ ನೆಮ್ಮದಿಯಾಗಿ ಬದುಕಿದರೆ ಅಲ್ಲೊಂದು ಸುಂದರ, ನೆಮ್ಮದಿಯ ಸಮಾಜ ರೂಪುಗೊಳ್ಳಲು ಸಾಧ್ಯವಾಗುತ್ತದೆ.