ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಸರ್ವ ಕಾಲಕ್ಕೂ ಪ್ರಸ್ತುತವಾಗಿದೆ. ನಾವು ಸೇವಿಸುವ ಆಹಾರದ ಮೇಲೆ ನಮ್ಮ ಆರೋಗ್ಯದ ಸ್ಥಿತಿಗತಿ ನಿರ್ಧರಿತವಾಗಿರುತ್ತದೆ. ದಿನನಿತ್ಯ ನಾವು ಯಾವುದಾದರು ಹಣ್ಣನ್ನು ಸೇವಿಸಬೇಕೆಂಬ ಸಲಹೆಯನ್ನು ವೈದ್ಯರು ನೀಡುತ್ತಾರೆ. ಆದರೆ ಇಂದಿನ ಗಗನಕ್ಕೇರಿದ ಹಣ್ಣುಗಳ ಬೆಲೆಯಲ್ಲಿ ತಮಗೆ ಬೇಕಾದ ಹಣ್ಣನ್ನು ಖರೀದಿಸಿ ತಿನ್ನುವುದು ಎಲ್ಲರಿಗೂ ಸಾಧ್ಯವಾಗದ ಮಾತಾಗಿದೆ. ಈ ಸಂದರ್ಭ ಕೈಗೆಟಕುವ ಬೆಲೆಯಲ್ಲಿ ಸಿಗುವ ಒಂದೇ ಒಂದು ಹಣ್ಣೆಂದರೆ ಅದು ಬಾಳೆಹಣ್ಣು ಮಾತ್ರ.
ಹಾಗೆ ನೋಡಿದರೆ ಬಾಳೆಹಣ್ಣನ್ನು ಹಗುರವಾಗಿ ಪರಿಗಣಸುವಂತಿಲ್ಲ. ಇದರಲ್ಲಿ ಹಲವು ರೀತಿಯ ಆರೋಗ್ಯಕಾರಿ, ಶಕ್ತಿವರ್ಧಕಗಳು ಇರುವುದರಿಂದ ನಮ್ಮ ಶರೀರದ ಹಿತವನ್ನು ಸದಾ ಕಾಪಾಡುತ್ತದೆ. ಹೇರಳವಾದ ವಿಟಮಿನ್ಗಳು, ಕಾಬರ್ೋಹೈಡ್ರೇಟ್ಸ್, ನಾರಿನಾಂಶ, ಕ್ಯಾಲ್ಸಿಯಂ, ಪ್ರೋಟೀನ್, ಎಲ್ಲದಕ್ಕಿಂತಲೂ ಮುಖ್ಯವಾಗಿ ಪೊಟ್ಯಾಶಿಯಂ ಗುಣಗಳಿದ್ದು, ಇದು ಹೃದ್ರೋಗ ಹಾಗೂ ರಕ್ತದೊತ್ತಡದ ತೊಂದರೆಯುಳ್ಳವರಿಗೆ ಉಪಕಾರಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಬಾಳೆಹಣ್ಣನ್ನು ಕಿತ್ತಳೆ ಹಣ್ಣಿನೊಂದಿಗೆ ಸೇರಿಸಿ ತಿಂದರೆ ದೇಹದಲ್ಲಿ ರಕ್ತದ ಉತ್ಪಾದನೆ ಹೆಚ್ಚಾಗಿ ರಕ್ತಹೀನತೆಗೆ ಪರಿಹಾರ ಸಿಗಲಿದೆ.. ನರಗಳಿಗೆ ಬೇಕಾದ ರಂಜಕಾಂಶವನ್ನು ಬಾಳೆಹಣ್ಣು ಒದಗಿಸಿಕೊಡುವುದರಿಂದ ಸ್ನಾಯುಗಳು ಬಲವಾಗುತ್ತದೆ. ಹೆಚ್ಚಿನ ಪೊಟ್ಯಾಷಿಯಂ ಅಂಶ ಇದರಲ್ಲಿ ಇರುವುದರಿಂದ ಮೂಳೆಗಳಿಗೆ ಬಲ ನೀಡುತ್ತದೆ. ಆದ್ದರಿಂದ ಸದಾ ವ್ಯಾಯಾಮ ಮಾಡುವವರು ಆಟಗಾರರು, ಬಾಳೆಹಣ್ಣನ್ನು ಸೇವಿಸುತ್ತಿರಬೇಕು. ಮತ್ತೊಂದು ವಿಚಾರ ಏನೆಂದರೆ ಬಾಳೆಹಣ್ಣು ಸೇವಿಸುವುದರಿಂದ ಮಾರಕ ಕ್ಯಾನ್ಸರ್ ರೋಗದಿಂದ ದೂವಿರಬಹುದು ಎಂದು ಕೆಲ ಸಂಶೋಧನೆಗಳು ಸಾಬೀತುಪಡಿಸಿವೆ.
ಇನ್ನು ಬಾಳೆಹಣ್ಣು ಖಿನ್ನತೆಗೂ ರಾಮಬಾಣವಂತೆ ಇದರಲ್ಲಿರುವ ಟ್ರಿಪ್ರೋಪ್ಯಾನ್ ಎಂಬ ಪ್ರೊಟೀನ್ ಮನಸ್ಸನ್ನು ಉಲ್ಲಸಿತವಾಗಿಡಲು ಸಹಕರಿಸುತ್ತದೆಯಂತೆ. ಜತೆಗೆ ಹೀಮೋಗ್ಲೋಬಿನ್ ಉತ್ಪಾದನೆಯನ್ನು ಹೆಚ್ಚಿಸುವುದಲ್ಲದೆ, ಮೆದುಳಿಗೆ ಆಮ್ಲಜನಕದ ಪೂರೈಕೆ ಮಾಡಿ ಮೆದುಳು ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳುತ್ತದೆ. ಬಾಳೆಹಣ್ಣಿನಲ್ಲಿ ವಿಟಮಿನ್ ಎ ಹೇರಳವಾಗಿರುವುದರಿಂದ ಕಣ್ಣಿನ ಆರೋಗ್ಯ ಜತೆಗೆ ರೋಗನಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ.
ಬಾಳೆಹಣ್ಣಿನ ಸೇವನೆಯಿಂದ ಪಾಶ್ರ್ವವಾಯು ರೋಗವು ಹತ್ತಿರ ಸುಳಿಯದಂತೆ ನೋಡಿಕೊಳ್ಳಬಹುದು ಎಂಬುದನ್ನು ಸಂಶೋಧನೆ ಹೇಳಿದೆ. ಹಣ್ಣಿನ ಜತೆಗೆ ಸಿಪ್ಪೆಯಲ್ಲಿ ವಿಟಮಿನ್ ಎ. ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಅಷ್ಟೇ ಅಲ್ಲದೆ, ದೇಹದಲ್ಲಿ ರೋಗ ಪ್ರತಿರೋಧ ಶಕ್ತಿ ಹೆಚ್ಚಿಸುವ ಸಾಮಥ್ರ್ಯ ಇರುವ ಆಂಟ್ಯಿ ಓಕ್ಷಿಡೆಂಟ್ ಇದ್ದು ವಿಟಮಿನ್ ಬಿ, ಬಿ6 ಹೇರಳವಾಗಿದೆ. ಕಣ್ಣಿನ ಆರೋಗ್ಯ ಕಾಪಾಡುವ ಲುಟೈನ್ ಎಂಬ ಪದಾರ್ಥವೂ ಇದೆ. (ಆದರೆ ಬಾಳೆಹಣ್ಣಿನ ಸಿಪ್ಪೆಯನ್ನು ಉಪಯೋಗಿಸುವ ಮುನ್ನ ಎಚ್ಚರವಾಗಿರುವುದು ಒಳಿತು ಕಾರಣ ಇತ್ತೀಚೆಗೆ ಕಾಯಿಯನ್ನು ಹಣ್ಣು ಮಾಡಲು ರಾಸಾಯನಿಕವನ್ನು ಬಳಸುವುದರಿಂದ ಅದು ಸಿಪ್ಪೆಯಲ್ಲಿ ಉಳಿದುಕೊಂಡು ಮಾರಕವಾಗಿ ಪರಿಣಮಿಸುವ ಸಾಧ್ಯತೆಯೂ ಇದೆ.)
ಹಣ್ಣಿನಲ್ಲಿ ಪಾಲಿಕ್ ಆಸಿಡ್ ಹೇರಳವಾಗಿರುವುದರಿಂದ ಗಭರ್ಾಶಯದಲ್ಲಿರುವ ಮಗುವಿನ ಬೆಳವಣಿಗೆಗೆ ಹೆಚ್ಚು ಸಹಾಯ ಮಾಡುವುದರಿಂದ ಗಭರ್ಿಣಿ ಮಹಿಳೆಯರು ಪ್ರತಿದಿನ ಬಾಳೆ ಹಣ್ಣು ಸೇವಿಸುವುದನ್ನು ರೂಢಿ ಮಾಡಿಕೊಳ್ಳುವುದು ಒಳ್ಳೆಯದು.
ಇದೆಲ್ಲದರ ನಡುವೆ ಮತ್ತೊಂದು ಉಪಕಾರವೂ ಇದೆ. ಅದೇನೆಂದರೆ ಸಾಮಾನ್ಯವಾಗಿ ಧೂಮಪಾನ ಚಟ ಹತ್ತಿಸಿಕೊಂಡು ಸಿಗರೇಟ್ ಸೇವನೆ ಮಾಡದೆ ಬದುಕೋದಕ್ಕೆ ಸಾಧ್ಯವಿಲ್ಲ ಎಂಬಂತೆ ಇರುವ ಜನರು ಸಿಗರೇಟ್ನಿಂದ ದೂರವಿರಲು ಬಾಳೆಹಣ್ಣನ್ನು ಉಪಯೋಗಿಸಬಹುದು ಎಂಬುದನ್ನು ಸಂಶೋಧನೆಯೊಂದು ಬೆಳಕಿಗೆ ತಂದಿದೆ.
ಈ ಬಗ್ಗೆ ಸಂಶೋಧನೆ ನಡೆಸಿದ ತಜ್ಞರು ಧೂಮಪಾನ ಮಾಡುವ ವ್ಯಸನಿಗೆ ಆತ ಸಿಗರೇಟು ಸೇದಬೇಕೆನಿಸಿದಾಗಲೆಲ್ಲ ಆತನಿಗೆ ಬಾಳೆಹಣ್ಣು ನೀಡತೊಡಗಿದರಂತೆ. ಹಾಗೆ ಬಾಳೆಹಣ್ಣು ಸೇವಿಸುತ್ತಾ ಬಂದಿದ್ದರಿಂದ ಆತನ ದೇಹದ ಮೇಲೆ ಹಣ್ಣಿನಲ್ಲಿದ್ದ ಬಿ-6, ಬಿ12, ಮ್ಯಾಂಗನೀಸ್ ಅಂಶಗಳು ಪರಿಣಾಮ ಬೀರಲು ಆರಂಭಿಸಿ ಆತನ ಮನಸ್ಸು ಉಲ್ಲಾಸಗೊಂಡು ಚಟ ಮುಕ್ತನಾದನಂತೆ.
ಸಾಮಾನ್ಯವಾಗಿ ನಾವು ಧೂಮಪಾನ ಮಾಡದಿದ್ದರೂ ಬೇರೆಯವರು ಮಾಡುತ್ತಿರುವ ಸಂದರ್ಭ ನಾವಿದ್ದರೆ ಪರೋಕ್ಷವಾಗಿ ನಮಗೂ ತೊಂದರೆ ತಪ್ಪಿದಲ್ಲ ಹೀಗಾಗಿ ಬಾಳೆಹಣ್ಣು ಸರ್ವರಿಗೂ ಸಹಕಾರಿಯಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಾಳೆಯ ಮಹತ್ವ ಅರಿತೇ ಹಿಂದಿನವರು ಸರ್ವ ಕಾರ್ಯಕ್ಕೂ ಶುಭದ ಸಂಕೇತವಾಗಿ ಬಳಸುತ್ತಾ ಬಂದಿದ್ದಾರೆ. ಬಾಳೆ ಎಲೆ, ಬಾಳೆ ದಿಂಡು ಕೂಡ ನಮ್ಮ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ