ಈಗಾಗಲೇ ಕೊಡಗಿನ ನಾಪೋಕ್ಲುನಲ್ಲಿ ಕಾಮಾಲೆ ರೋಗ ಹರಡಿದ್ದರಿಂದ ಹಲವರು ಚಿಕಿತ್ಸೆ ಪಡೆದಿದ್ದಾರೆ. ಎಚ್ಚೆತ್ತ ಆರೋಗ್ಯ ಇಲಾಖೆ ಚಿಕಿತ್ಸಾ ಕ್ರಮ ಕೈಗೊಂಡಿದೆಯಲ್ಲದೆ, ಮುಂಜಾಗ್ರತೆ ವಹಿಸುತ್ತಿದೆ. ಇವತ್ತು ನಾಪೋಕ್ಲುನಲ್ಲಿ ಕಂಡು ಬಂದ ಕಾಮಾಲೆ ರೋಗ ಎಲ್ಲ ಊರಿಗೂ ಕಾಲಿಡಬಹುದು. ಆದ್ದರಿಂದ ಈಗಿನಿಂದಲೇ ಈ ರೋಗದತ್ತ ಎಚ್ಚರವಾಗಿರುವುದು ಒಳ್ಳೆಯದು.
ಇಷ್ಟಕ್ಕೂ ಈ ರೋಗ ಹೇಗೆ ಬರುತ್ತದೆ ಎಂಬುದನ್ನು ನೋಡಿದರೆ ವೈದ್ಯರ ಪ್ರಕಾರ ಯಕೃತಿನ (ಲಿವರ್) ಸೋಂಕಿನಿಂದ ಬರುತ್ತದೆಯಂತೆ. ರೋಗದ ಸೋಂಕಿಗೆ ಹಲವಾರು ವೈರಾಣುಗಳು ಕಾರಣವಾಗಿದ್ದು, ಆ ಪೈಕಿ ಸೌಮ್ಯ ಸ್ವರೂಪದ ಎ ವೈರಾಣುವಿನಿಂದ ಹಿಡಿದು ತೀವ್ರ ಸ್ವರೂಪದ ಬಿ ವೈರಾಣು ಹಾಗೂ ಸಿ, ಡಿ, ಇ ಮತ್ತು ಜಿ ವೈರಾಣುವಿನಿಂದ ರೋಗಕ್ಕೆ ತುತ್ತಾಗಬಹುದು. ಕಾಮಾಲೆ ರೋಗವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಜನಸಾಂದ್ರತೆ ಜಾಸ್ತಿ ಇರುವಲ್ಲಿ ಮತ್ತು ವೈಯಕ್ತಿಕ ಹಾಗೂ ಪರಿಸರ ನೈರ್ಮಲ್ಯ ಕೊರತೆ ಇರುವ ಕಡೆ ಸಾಂಕ್ರಾಮಿಕ ರೋಗವಾಗಿ ಕಾಣಿಸಿಕೊಳ್ಳುತ್ತಿರುವುದು ಇತ್ತೀಚಿಗಿನ ದಿನಗಳಲ್ಲಿ ಕಂಡು ಬರುತ್ತಿದೆ.
ರೋಗದ ಲಕ್ಷಣಗಳೇನು?
ಬಹಳಷ್ಟು ಜನಕ್ಕೆ ಕಾಮಾಲೆ ರೋಗದ ಚಿಹ್ನೆಗಳು ಗೊತ್ತಾಗುವುದಿಲ್ಲ ಹೀಗಾಗಿ ಅವರು ಯಾವುದೋ ಒಂದು ಮಾತ್ರೆ ಸೇವಿಸಿ ತೆಪ್ಪಗಾಗುತ್ತಾರೆ. ಉಲ್ಭಣಗೊಂಡಾಗ ಆಸ್ಪತ್ರೆಗೆ ತೆರಳುತ್ತಾರೆ. ಆದ್ದರಿಂದ ಮೊದಲಿಗೆ ರೋಗದ ಲಕ್ಷಣಗಳನ್ನು ತಿಳಿದುಕೊಂಡರೆ ಬಹುಬೇಗ ಚಿಕಿತ್ಸೆ ಪಡೆದು ವಾಸಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಜ್ವರ, ಚಳಿ, ತಲೆನೋವು, ಆಯಾಸ, ದೇಹ ಪೂರ್ಣ ನಿಶ್ಯಕ್ತಿ, ಕೀಲು ನೋವು ಇದರ ಜೊತೆಗೆ ವಾಕರಿಕೆ, ವಾಂತಿ, ಹಸಿವು ಇಲ್ಲದಿರುವುದು, ಹಳದಿ ಬಣ್ಣದ ಮೂತ್ರ ಹೋಗುವುದು. ಕಣ್ಣು, ಚರ್ಮ, ಉಗುರುಗಳು ಹಳದಿಯಾಗಿರುವುದು ಕಂಡು ಬರುತ್ತದೆ. ಇದಿಷ್ಟನ್ನು ಗಮನಿಸಿದರೆ ಅದು ಕಾಮಾಲೆ ರೋಗ ಎಂಬುದು ಮನದಟ್ಟಾಗಿ ಬಿಡುತ್ತೆದೆ.
ಈ ರೋಗ ಹರಡಲು ವಯಸ್ಸಿನ ಮತ್ತು ಲಿಂಗ ತಾರತಮ್ಯವಿಲ್ಲ. ಆದರೆ ಹೆಚ್ಚಾಗಿ ಮಕ್ಕಳು ಹಾಗೂ ವಯಸ್ಕರಲ್ಲಿ ಕಂಡು ಬರುತ್ತದೆ. ಈ ರೋಗದಿಂದ ನರಳುತ್ತಿರುವ ರೋಗಿಗಳು ಕಾಮಾಲೆ ರೋಗ ಲಕ್ಷಣಗಳು ಕಂಡುಬರುವ ಎರಡು ವಾರ ಮೊದಲು, ಕಂಡು ಬಂದ ಒಂದು ವಾರದವರೆಗೂ ರೋಗಾಣುವನ್ನು ಮಲದ ಮೂಲಕ ಹೊರಹಾಕುತ್ತಾರೆ. ಇಂತಹ ರೋಗಿಗಳ ಮಲವು ಕುಡಿಯುವ ನೀರು, ತಿನ್ನುವ ಆಹಾರವನ್ನು ಕಲುಷಿತಗೊಳಿಸಿದರೆ ಇಂತಹ ಆಹಾರವನ್ನು ಸೇವಿಸಿದ ಈ ರೋಗದ ವಿರುದ್ದ ನಿರೋಧಕ ಶಕ್ತಿ ಇಲ್ಲದ ವ್ಯಕ್ತಿಗಳಿಗೆ ಸಾಮಾನ್ಯವಾಗಿ 25 ರಿಂದ 35 ದಿನಗಳ ನಂತರ ರೋಗ ಲಕ್ಷಣಗಳು ಕಂಡು ಬರಬಹುದು. ಅಪರೂಪದಲ್ಲಿ ಕೆಲವೊಮ್ಮೆ ರಕ್ತದ ಮೂಲಕವೂ ಈ ಕಾಮಾಲೆ ರೋಗವು ಹರಡಬಲ್ಲದು. ಒಮ್ಮೆ ಈ ರೋಗದಿಂದ ನರಳಿದವರು ಶೇ. 95 ರಷ್ಟು ನಿರೋಧಕ ಶಕ್ತಿಯನ್ನು ಪಡೆಯುತ್ತಾರೆ. ಶೇ. 5 ರಷ್ಟು ಜನರು ಪುನಃ ಈ ರೋಗಕ್ಕೆ ತುತ್ತಾಗಬಹುದು.
ರೋಗದ ನಿಯಂತ್ರಣ ಹೇಗೆ?
ಕಾಮಾಲೆ ರೋಗಕ್ಕೆ ತುತ್ತಾದ ರೋಗಿಗಳು ತಜ್ಞ ವೈದ್ಯರಿಂದ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆದು ವೈದ್ಯರ ಸಲಹೆ ಸೂಚನೆಯನ್ನು ಪಾಲಿಸುವುದು ಅಗತ್ಯ. ರೋಗಿಗಳನ್ನು ಪ್ರತ್ಯೇಕವಾಗಿಸುವುದು ಹಾಗೂ ಉಪಯೋಗಿಸುವ ಪಾತ್ರೆ ಬಟ್ಟೆ ಬರೆಗಳನ್ನು ಕ್ರಿಮಿ ನಾಶಕದಿಂದ ಶುದ್ದೀಕರಿಸುವುದು, ಮಲ ಮೂತ್ರವನ್ನು ಕ್ರಿಮಿನಾಶಕ ಹಾಕಿ ವಿಲೇವಾರಿ ಮಾಡುವುದು. ಸುರಕ್ಷಿತ ನೀರಿನ ಸರಬರಾಜು, ಆಹಾರ ಮತ್ತು ಪ್ರತಿಯೊಬ್ಬರೂ ಶೌಚಾಲಯ ವ್ಯವಸ್ಥೆ ಬಳಸುವುದು ಅಗತ್ಯ.
ವೈಯಕ್ತಿಕ ನೈರ್ಮಲ್ಯ ಪಾಲನೆ, ಮಲ ಮೂತ್ರ ವಿಸರ್ಜನೆಗೆ ಹೋಗಿ ಬಂದಾಗ ಸಾಬೂನಿನಿಂದ ಕೈಕಾಲು ತೊಳೆಯುವುದು, ಆಹಾರ ಪಾನೀಯ ಸ್ವೀಕರಿಸುವ ಮೊದಲು ಕೈಕಾಲು ಮುಖ ತೊಳೆಯುವುದನ್ನು ಮಾಡಬೇಕು. ಶುದ್ದೀಕರಿಸಿದ ಸಿರೆಂಜ್ ಸೂಜಿ ಬಳಸುವುದು. ಸಾರ್ವಜನಿಕ ನೈರ್ಮಲ್ಯ ವ್ಯವಸ್ಥೆ ಪಾಲನೆ. ಮನೆಗಳಲ್ಲಿ, ಊಟ ಉಪಹಾರ ಮಂದಿರಗಳಲ್ಲಿ ಚೆನ್ನಾಗಿ ಕುದಿಸಿ ಆರಿಸಿದ ನೀರನ್ನೇ ಉಪಯೋಗಿಸುವುದು. ಸಾರ್ವಜನಿಕ ಸ್ಥಳಗಳಲ್ಲಿ ತೆರೆದಿಟ್ಟ ಪಾನೀಯ ಹಾಗೂ ಹಣ್ಣು ಹಂಪಲು, ತರಕಾರಿಗಳನ್ನು ಉಪಯೋಗಿಸಬಾರದು. ಕೊಳೆತ ಆಹಾರ, ಮೀನು, ಮಾಂಸ, ಐಸ್ಕ್ರೀಂ, ಶೀತಲೀಕರಿಸಿದ ಆಹಾರ ಇತ್ಯಾದಿಗಳನ್ನು ಉಪಯೋಗಿಸಬಾರದು. ಸಾರ್ವಜನಿಕ ನೀರು ಸರಬರಾಜು ವ್ಯವಸ್ಥೆಯಲ್ಲಿ ಸೂಪರ್ ಕ್ಲೋರಿನೇಶನ್ ಮಾಡುವುದು ಅಗತ್ಯವಾಗಿದೆ.
ಕಾಯಿಲೆ ಬಂದ ಬಳಿಕ ಚಿಕಿತ್ಸೆ ಪಡೆದು ವಾಸಿ ಮಾಡಿಕೊಳ್ಳುವುದಕ್ಕಿಂತ ಕಾಯಿಲೆ ಬರದಂತೆ ಎಚ್ಚರ ವಹಿಸುವುದು ಅಗತ್ಯ. ಇಷ್ಟಕ್ಕೂ ಈ ಕಾಯಿಲೆ ಒಬ್ಬರಿಗೆ ಬಂದು ಹೋಗುವಂತಹದಲ್ಲ. ಆದ್ದರಿಂದ ಇದರ ನಿಮರ್ೂಲನೆಗೆ ಸಾಮೂಹಿಕವಾಗಿ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ