News Kannada
Friday, September 29 2023
ವಿಶೇಷ

ರೋಗಿಗಳಿಗೆ ಆಸರೆಯಾದ ಉಪಶಮನ ಆರೈಕೆ ಯೋಜನೆ

A palliative care plan that supports patients
Photo Credit : By Author

ಮೈಸೂರು: ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಆರಂಭಿಸಿರುವ ವಿಶೇಷ ವೈದ್ಯಕೀಯ ಆರೈಕೆಯ ಉಪಶಮನ ಆರೈಕೆ ಯೋಜನೆ ಇವತ್ತು ಬಹಳಷ್ಟು ರೋಗಿಗಳಿಗೆ ಆರೋಗ್ಯ ಸುಧಾರಣೆಗೆ, ಮಾನಸಿಕ ನೆಮ್ಮದಿಗೆ ದಾರಿಯಾಗಿದೆ.

ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್(SVYM) ನ ಉಪಶಮನ ಯೋಜನೆ ಕ್ಯಾನ್ಸರ್, ಹೃದಯ- ಸಂಬಂಧಿ ಕಾಯಿಲೆ, ಪ್ರಮುಖ ಅಂಗ ವೈಫಲ್ಯ, ಔಷಧ-ನಿರೋಧಕ ಕ್ಷಯ, ಕೊನೆಯ ಹಂತದ ದೀರ್ಘಕಾಲದ ಅನಾರೋಗ್ಯ, ತೀವ್ರವಾದ ಆಘಾತ, ವೃದ್ಧಾಪ್ಯದ ತೀವ್ರ ನಿಶ್ಶಕ್ತತೆ ಹೀಗೆ ಹತ್ತು ಹಲವು ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಊರುಗೋಲಾಗಿ ನಿಂತಿದೆ ಅಷ್ಟೇ ಅಲ್ಲದೆ, ಆರೈಕೆಗೆ ಒತ್ತು ನೀಡುವುದರೊಂದಿಗೆ, ಗಂಭೀರವಾದ ಆರೋಗ್ಯ- ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರ ನೋವನ್ನು ನಿವಾರಿಸುವ, ದೈಹಿಕ, ಮಾನಸಿಕ, ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತಿದೆ.

ಈ ಸಂಸ್ಥೆ 2009ರಲ್ಲಿ ಮೈಸೂರು ನಗರದಲ್ಲಿ ಉಪಶಮನ ಆರೈಕೆ ಯೋಜನೆಯನ್ನು ಆರಂಭಿಸಿತು. ಆರಂಭದ ದಿನಗಳಲ್ಲಿ ಮನೆ ಆಧಾರಿತ ಸೇವೆಯಾಗಿತ್ತಾದರೂ ಆ ನಂತರ 2018ರಲ್ಲಿ ಮೈಸೂರು ವೈದ್ಯಕೀಯ ಕಾಲೇಜಿನ ಸಹಯೋಗದೊಂದಿಗೆ 16 ಹಾಸಿಗೆಯುಳ್ಳ ಆರೋಗ್ಯ ಕೇಂದ್ರವನ್ನು ಆರಂಭಿಸಿತು. ಈಗ ಸರಗೂರು, ಹಾಸನ, ಬೆಂಗಳೂರು ಮತ್ತು ಧಾರವಾಡದಲ್ಲೂ ಈ ಯೋಜನೆ ಚಾಲ್ತಿಯಲ್ಲಿದೆ. ಇಲ್ಲಿ ವೈದ್ಯರು, ದಾದಿಯರು ಹಾಗೂ ಸಾಮಾಜಿಕ ಕಾರ್ಯಕರ್ತರ ತಂಡವಿದ್ದು, ಈ ತಂಡವು ರೋಗಿಯ ಮನೆ ಭೇಟಿ ಮಾಡಿ, ಕೂಲಂಕುಶವಾಗಿ ಪರೀಕ್ಷಿಸಿ, ಸೂಕ್ತ ಚಿಕಿತ್ಸೆ ಮತ್ತು ಸಲಹೆಗಳನ್ನು ನೀಡುತ್ತದೆ. ಜತೆಗೆ ಕುಟುಂಬದವರಿಗೆ ರೋಗಿಯ ಸೂಕ್ತ ಆರೈಕೆ ಮಾಡಲು ತರಬೇತಿ ನೀಡಲಾಗುತ್ತದೆ.

ಇದರೊಂದಿಗೆ ಆಪ್ತಸಮಾಲೋಚನೆ ಮೂಲಕ ರೋಗಿ ಮತ್ತು ಕುಟುಂಬದವರಿಗೆ ಭಾವನಾತ್ಮಕ ಬೆಂಬಲ ಕೊಡಲಾಗುತ್ತದೆ. ಆರ್ಥಿಕ ಸಮಸ್ಯೆಗಳಿದ್ದಲ್ಲಿ, ಸರ್ಕಾರಿ ಯೋಜನೆಗಳ ಶಿಫಾರಸ್ಸು ಮತ್ತು ಸಂಬಂಧಪಟ್ಟ ಇಲಾಖೆಯೊಂದಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ತಂಡದ ದೂರವಾಣಿ ಸಂಖ್ಯೆಯನ್ನು ಎಲ್ಲಾ ನೊಂದಾಯಿತ ರೋಗಿ ಹಾಗೂ ಕುಟುಂಬದವರಿಗೆ ನೀಡಿ ದಿನದ ಯಾವುದೇ ಸಮಯದಲೂ ಅಗತ್ಯ ಬಂದಲ್ಲಿ ಉಪಶಮನ ಆರೈಕೆ ತಂಡವನ್ನು ಸಂಪರ್ಕಿಸುವ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಒಂದು ವೇಳೆ ರೋಗಲಕ್ಷಣಗಳು ತೀವ್ರಗೊಂಡಲ್ಲಿ ಅಥವಾ ಮನೆಯಲ್ಲಿ ಆರೈಕೆ ಮಾಡಲು ಕಷ್ಟವಾದಾಗ, ಉಪಶಮನ ಆರೈಕೆ ಕೇಂದ್ರದ ಒಳರೋಗಿ ವಿಭಾಗದಲ್ಲಿ ದಾಖಲಿಸಿ ಆರೈಕೆ ಮಾಡುವುದು ವಿಶೇಷವಾಗಿದೆ. ಇದರ ಜತೆಗೆ ಸಮುದಾಯದಲ್ಲಿ ಉಪಶಮನ ಆರೈಕೆ ಬಗ್ಗೆ ಅರಿವು ಮೂಡಿಸಲು ಉಪನ್ಯಾಸ ಕಾರ್ಯಕ್ರಮ, ಆರೋಗ್ಯ ಶಿಬಿರ, ಜಾಥಾ, ಕರಪತ್ರದ ಮೂಲಕ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ವಿವಿಧ ಸಂಸ್ಥೆಗಳ ವೈದ್ಯಕೀಯ ಹಾಗೂ ಪ್ಯಾರಮೆಡಿಕಲ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ ಮತ್ತು ಸಂಶೋಧನೆಯಲ್ಲಿ ಭಾಗಿಯಾಗುತ್ತಿದೆ. ಈ ಎಲ್ಲಾ ಸೇವೆಗಳನ್ನು ಎಲ್ಲರಿಗೂ ಸಂಪೂರ್ಣ ಉಚಿತವಾಗಿ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಉಪಶಮನ ಆರೈಕೆ ಯೋಜನೆಯ ಪ್ರಯೋಜನವನ್ನು ಇದುವರೆಗೆ 8400ಕ್ಕೂ ಹೆಚ್ಚು ಕುಟುಂಬಗಳು ಪಡೆದಿದ್ದು, ಈ ಕಾರ್ಯ ಸಾಗುತ್ತಲೇ ಇದೆ. ಮಾಹಿತಿಗೆ 9591407955ನ್ನು ಸಂಪರ್ಕಿಸಬಹುದಾಗಿದೆ.

See also  ಬೆಂಗಳೂರು: ಬಿಜೆಪಿಯವರು ತಪ್ಪು ಮಾಡಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಾರೆ ಎಂದ ಸಿದ್ದರಾಮಯ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು