ಕೊರೊನಾ ಎಂಬ ಮಾಹಾಮಾರಿ ಕೆಲವರ ಬದುಕನ್ನೇ ಕಸಿದುಕೊಂಡರೇ ಇನ್ನೂ ಹಲವರು ಹೊಸ ಬದುಕನ್ನು ರೂಪಿಸುಕೊಂಡಿದ್ದಾರೆ. ಇನ್ನೂ ಕೆಲವರು ಸಿಕ್ಕ ಸಮಯವನ್ನು ಸದುಪಯೋಗ ಮಾಡಿಕೊಂಡು ತಮ್ಮ ಹವ್ಯಾಸಕ್ಕೆ ಹೊಸ ಜೀವ ತುಂಬಿದವರು ಹಲವರು.
ಅದಕ್ಕೆ ಸಾಕ್ಷಿ ಕುಡುಪು ಅನಂತ ಪದ್ಮನಾಭ ದೇವಳದ ಪದ್ಮರಾಜ ತಂತ್ರಿ ಕುಡುಪು. ಅವರ ಹಸ್ತ ಪ್ರಾವೀಣ್ಯತೆಯಲ್ಲಿ ಮೂಡಿಬಂದ ತೆಂಗಿನಕಾಯಿಯ ಗೆರಟೆ (ಚಿಪ್ಪಿ)ಯ ಕಲಾಕೃತಿಗಳು ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇವರು ಕುಡುಪು ಅನಂತ ಪದ್ಮನಾಭ ದೇವಳದ ನರಸಿಂಹ ತಂತ್ರಿಗಳ ಕಿರಿಯ ಪುತ್ರ. ಕೊರೊನಾ ಲಾಕ್ಡೌನ್ ಸಂಕಷ್ಟದ ಸಮಯದಲ್ಲಿ ಸರ್ಕಾರದ ಆದೇಶಾನುಸಾರ ಮನೆಯಲ್ಲಿದ್ದಾಗ ಸಿಕ್ಕ ಸಮಯವನ್ನು ಸದುಪಯೋಗ ಮಾಡಿಕೊಂಡು ತಮ್ಮ ಮನಸ್ಸಿನಲ್ಲಿರುವ ಆಲೋಚನೆಯನ್ನು ತಮ್ಮ ಕಲಾ ನೈಪುಣ್ಯತೆಯೊಂದಿಗೆ ಕಾರ್ಯ ರೂಪಕ್ಕೆ ತಂದಿದ್ದಾರೆ. ಈಚೆಗೆ ಇವರ ಈ ಕಲಾ ನೈಪುಣ್ಯತೆಯ ಚಿತ್ರಗಳು ಸಾಮಾಜಿಕ ಜಾಲಾತಾಣದಲ್ಲಿ ಶೇರ್ ಆಗಿದ್ದು, ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.
ಈ ಸಂಬಂಧ ನ್ಯೂಸ್ ಕನ್ನಡ ವೆಬ್ ಸೈಟ್ ಜತೆ ಪದ್ಮರಾಜ ತಂತ್ರಿ ಅವರು ಮಾತುಕತೆ ಸಿಕ್ಕಾಗ, ಬಾಲ್ಯದಲ್ಲೇ ಹುಟ್ಟಿದ ಹವ್ಯಾಸ ನಂತರದ ಒತ್ತಡದ ಬದುಕಿನಲ್ಲಿ ಮರೆಯಾದಾಗ ಅದಕ್ಕೇ ಮರುಜೀವ ಕೊಟ್ಟಿದೆ ಲಾಕ್ಡೌನ್ ಸಮಯ. ವಿರಾಮ ಸಿಕ್ಕಾಗ ನಾನು ತೆಂಗಿನ ಗೆರಟೆಯಿಂದ ಪೆನ್ನಿನ ಸ್ಟಾಂಡ್ ತಯಾರು ಮಾಡಿದೆ. ಅದು ಎಲ್ಲರಿಗೆ ಇಷ್ಟ ಆದಾಗ ಹೊಸ ಕಲಾಕೃತಿಗೆ ರೂಪ ಕೂಡಲು ಪ್ರೇರಣೆಯಾಯಿತು. ಇದೀಗ 30ಕ್ಕೂ ಅಧಿಕ ಕಲಾಕೃತಿಗಳನ್ನು ರಚನೆಗೊಂಡಿದೆ. ಮಾರಾಟದ ಉದ್ದೇಶವಿಲ್ಲ, ಕೆಲವೊಂದನ್ನು ಉಡುಗೊರೆಯಾಗಿ ನೀಡಿದ್ದು, ಇನ್ನುಳಿದವು ನನ್ನ ಬಳಿಯೇ ಇದೆ. ಇದಲ್ಲದೇ ಚಿತ್ರಕಲೆ, ನಾನಾ ರೀತಿಯಲ್ಲಿ ಹೂವಿನ ಮಾಲೆ ತಯಾರಿ ಹಾಗೂ ತೆಂಗಿನ ಗರಿಯಿಂದ ಬುಟ್ಟಿ ಮುಂತಾದ ಹವ್ಯಾಸವಿದೆ. ವೃತ್ತಿಯಲ್ಲಿ ತಂತ್ರಿಯಾಗಿದ್ದು, ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಆಗುವುದಿಲ್ಲ. ನನ್ನ ತೃಪ್ತಿಗೋಸ್ಕರ ಮಾಡುತ್ತಿದ್ದೇನೆ ಎಂದರು.
ಇದೇ ನೈಪುಣ್ಯವನ್ನು ಇವರ ಅಜ್ಜನವರಾದ ಕೇಶವ ತಂತ್ರಿಗಳು ಕೂಡ ಮಾಡುತ್ತಿದ್ದರು. ಅದರ ಬಳುವಳಿಯೋ ಎಂಬಂತೆ ಮುತ್ತಜ್ಜನಿಂದ ಮೊಮ್ಮಗನ ಹಸ್ತ ನೈಪುಣ್ಯತೆಯಲ್ಲಿ ಅರಳಿದ ಕೈ ಬಟ್ಟಲು ಮತ್ತು ಇತರ ಕಲಾಕೃತಿಗಳು ಎಲ್ಲರ ಗಮನ ಸೆಳೆಯುತ್ತಿದೆ.
ಕೇಶವ ತಂತ್ರಿಯವರು ತೆಂಗಿನ ಗೆರಟೆಯಿಂದ ಮಾಡಿದ 90’ವರ್ಷಗಳ ಹಿಂದಿನ ಗಂಧದ ಬಟ್ಟಲು ಇಂದಿಗೂ ತಂತ್ರಿವರೇಣ್ಯರ ನಿವಾಸದಲ್ಲಿ ಇರಿಸಲಾಗಿದ್ದು ಅದಕ್ಕೆ ಬೆಳ್ಳಿಯ ಕವಚವನ್ನು ಹೊದಿಸಿ ಸಂರಕ್ಷಿಸಿಡಲಾಗಿದೆ.