ಲೇಖಕ ಎ.ಆರ್.ಮಣಿಕಾಂತ್ ಅವರ ‘ಅಪ್ಪ ಅಂದ್ರೆ ಆಕಾಶ’ ಲೇಖನಗಳ ಸಂಕಲನವಾಗಿದೆ. ಈ ಕೃತಿಯಲ್ಲಿ ಲೇಖಕನ ಮಾತು, ‘ಹೌದಲ್ವಾ.. ಮನೆಮನೆಯಲ್ಲೂ ಮಕ್ಕಳಿಂದ ತಾತ್ಸಾರಕ್ಕೆ ಒಳಗಾಗುವ ಜೀವದ ಹೆಸರು- ಅಪ್ಪ!. ಸ್ವಾರಸ್ಯವೇನು ಗೊತ್ತೆ? ಮಕ್ಕಳು ಜನಿಸಿದ ಸಂದರ್ಭದಲ್ಲಿ ವಿಪರೀತ ಮಾಡುವ ವ್ಯಕ್ತಿ- ಅಪ್ಪ, ಮಕ್ಕಳು ಹುಷಾರು ತಪ್ಪಿದಾಗ ಕಂಗಾಲಾಗುವ, ಚೆನ್ನಾಗಿ ಓದಿಸಿ ಸಾರ್ ಎನ್ನುತ್ತಾ ಶಿಕ್ಷಕರಿಗೆ ಕೈಮುಗಿಯುವ, ನನ್ನ ಮಕ್ಕಳಿಗೆ ಒಳ್ಳೆಯದು ಮಾಡಪ್ಪಾ ಎಂದು ದೇವರನ್ನು ಪ್ರಾರ್ಥಿಸುವ, ಮಕ್ಕಳ ಭವಿಷ್ಯ ಕುರಿತು ನೂರೆಂಟು ಕನಸು ಕಾಣುವ ವ್ಯಕ್ತಿ-ಅಪ್ಪ ವಿಪರ್ಯಾಸವೇನು ಗೊತ್ತೆ? ಮಕ್ಕಳ ಒಳಿತಿಗಾಗಿ ಜೀವ ತೇಯುವ ಅಪ್ಪಂದಿರನ್ನು ಬಹುಪಾಲು ಮಕ್ಕಳು ತಾತ್ಕಾರದಿಂದ ನೋಡುತ್ತಿದ್ದಾರೆ.
ಅಮ್ಮ ಜೀವ ಕೊಡುತ್ತಾಳೆ, ಅಪ್ಪ ಬಾಳು ಕೊಡುತ್ತಾನೆ ಎಂಬ ಮಾತಿದೆ. ಬಾಳು ಕೊಡುವ ಅಪ್ಪನನ್ನು ಮಕ್ಕಳು ಕೆಲವೊಮ್ಮೆ ಗೋಳಾಡಿಸುವುದೇಕೆ ಎಂಬ ಪ್ರಶ್ನೆಗೆ ಬಹುಶಃ ಯಾರಲ್ಲೂ ನನ್ನ ಉತ್ತರವಿಲ್ಲ. ಆದರೆ ಅಪ್ಪಂದಿರ ವಿಷಯವಾಗಿ ಎಲ್ಲ ಮಕ್ಕಳಿಗೂ ಹೀಗೊಂದು ನಂಬಿಕೆಯಿದೆ. ಅವನಿಗೆ ಅಪ್ಪನೇ ಸಾಟಿ. ಅವನಿಗೆ ಅಪಾಯವಿಲ್ಲ, ಸಾವಿರ ಮಂದಿ ವಿರೋಧಿಗಳ ಮುಂದೆಯೂ ಅಪ್ಪ ಗುಡುಗಬಲ್ಲ. ಸಿಡಿಯಬಲ್ಲ. ಪ್ರವಾಹಕ್ಕೆ ಎದುರಾಗಿ ಈಜಬಲ್ಲ, ನಕ್ಷತ್ರವನ್ನೇ ತಂದುಕೊಡುವ ಮಾತಾಡಬಲ್ಲ, ಕೆಲವು ಸಂದರ್ಭಗಳಲ್ಲಿ ಅಪ್ಪ ಅಮ್ಮನೂ ಆಗಿಬಿಡಬಲ್ಲ. ಎಲ್ಲರೂ ಬಲ್ಲವೆ ಆಕಾಶದಲ್ಲಿ-ಗುಡುಗು, ಮಿಂಚು, ಸಿಡಿಲು, ಮಳೆ, ತಾರೆ, ಚಂದ್ರ, ನಕ್ಷತ್ರ ಸೂರ… ಈ ಎಲ್ಲವು ಈ ಇದೆ. ಆಕಾಶದಲ್ಲಿರುವ ಈ ಎಲ್ಲ ಗುಣವಿಶೇಷಗಳೂ ಅಪ್ಪನ ವ್ಯಕ್ತಿತ್ವದಲ್ಲಿವೆ. ಆ ಕಾರಣದಿಂದಲೇ ಅಪ್ಪ ಅಂದ್ರೆ ಆಕಾಶ !. ಈ ಸರಳ – ಸತ್ಯವನ್ನು ಎಲ್ಲ ಮಕ್ಕಳೂ ಅರ್ಥ ಮಾಡಿಕೊಳ್ಳಲಿ. ಅಮ್ಮನ ವಿಷಯದಲ್ಲಿ ತೋರುವ ಕಾಳಜಿಯನ್ನೇ ಅಪ್ಪಂದಿರ ವಿಷಯದಲ್ಲೂ ತೋರಲಿ ಎಂಬ ಹೃದ್ಯ ಪ್ರಾರ್ಥನೆ ನನ್ನದು ಎಂದಿದ್ದಾರೆ.
ಅವಕಾಶ ವಂಚಿತರ, ಅಸಹಾಯಕ ಕಂಗಾಲರ, ವಿಕಲಚೇತನರ ಎದೆಗುಂದದ ನಿರಂತರ ಪರಿಶ್ರಮ ಹಾಗೂ ಅಕ್ಷತ ಆಶಾಭಾವನೆಯ ಪ್ರೇರಣೆಯಿಂದ ಅವರು ಮುಟ್ಟಿದ ಮೇಲ್ನೆಲೆ, ರೂಢಿಸಿಕೊಂಡ ವಿನಯಶಾಲೀನತೆ, ಎಸಗಿದ ಲೋಕೋಪಕಾರ ಮತ್ತಿತ್ತರ ಸಕಾರಾತ್ಮಕ ವಿವರಗಳು ಈ ಕೃತಿಯಲ್ಲಿ ಪರಿಣಾಮಕಾರಿಯಾಗಿ ರೇಖಿತವಾಗಿವೆ.
ಒಳಪುಟಗಳಲ್ಲಿ 30 ಲೇಖನಗಳಿದ್ದು, ಪ್ರಾರ್ಥನೆ, ಎಮ್ಮೆ ಕಾಯುತ್ತಿದ್ದ ಹುಡುಗ ಎಂ.ಎ ಮಾಡಿದವರನ್ನೂ ಮೀರಿಸಿದ, ಅಮ್ಮ ಮತ್ತು ಒಂದು ರುಪಾಯಿ, ಮೂರು ಮಕ್ಕಳನ್ನು ಕಳೆದುಕೊಂಡವರು ಮೂವತ್ತು ಮಕ್ಕಳ ಪೋಷಕರಾದರು, ಒಂದು ಮಾವಿನ ಮರ, ಒಬ್ಬ ಹುಡುಗ ಮತ್ತು ನಾವು-ನೀವು.., ಅಪ್ಪನಿಂದ ಅನಿಷ್ಟ ಅನ್ನಿಸಿಕೊಂಡವರು ಮಿಸ್ ಇಂಡಿಯಾ ಆದಳು, ವೀರಮಣಿ ಕಥಾ, ಅಪ್ಪ ಅಂದ್ರೆ ಆಕಾಶ, ಅಧಿಕಾರದ ಮದದಲ್ಲಿ ತೇಲಬೇಡ, ಅಪ್ಪಾ,ಯು ಆರ್ ಗ್ರೇಟ್.. ಹೀಗೆ ಅನೇಕ ಶೀರ್ಷಿಕೆಗಳನ್ನು ಹೊಂದಿದೆ. 2012ರಲ್ಲಿ ಮೊದಲ ಮುದ್ರಣ ಕಂಡ ಈ ಕೃತಿ, 2014ರಲ್ಲಿ ಇಪ್ಪತ್ತೈದನೆಯ ಮುದ್ರಣ ಕಂಡಿದೆ.