ಬೆಳ್ತಂಗಡಿ: ಎಸ್.ಡಿ.ಎಂ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ತಾಂತ್ರಿಕ ಕೌಶಲ್ಯದ ಮೂಲಕ ಜನೋಪಯೋಗಿ ಯಂತ್ರಗಳನ್ನು ಆವಿಷ್ಕರಿಸಿದ್ದಾರೆ. ಅವು ದಕ್ಷಿಣ ಕನ್ನಡ ಭಾಗದ ಅಡಿಕೆ, ತೆಂಗು ಹಾಗೂ ರಬ್ಬರ್ ಕೃಷಿಗೆ ಪೂರಕವಾಗಿದ್ದು, ಕೃಷಿ ಕಾರ್ಮಿಕರ ಕೊರತೆಯಿಂದ ಬಳಲುತ್ತಿರುವ ಈ ಭಾಗದ ಕೃಷಿಕರಿಗೆ ವರದಾನವಾಗುವ ಭರವಸೆ ಮೂಡಿಸಿವೆ ಎಂದು ಕಾಲೇಜಿನ ಪ್ರಾಂಶುಪಾಲ ಕೆ. ವಿ. ಪ್ರಸಾದ್ ಹೇಳಿದ್ದಾರೆ.
ಅವರು ಮಂಗಳವಾರ ಉಜಿರೆ ಎಸ್ಡಿಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿದ್ಯಾರ್ಥಿಗಳ ಸಾಧನೆಯನ್ನು ವಿವರಿಸಿದರು. 2016-17 ರ ಸಾಲಿನಲ್ಲಿ ಡ್ರೋನ್ ಮೂಲಕ ಅಡಿಕೆ ಗೊನೆಯನ್ನು ಕತ್ತರಿಸಿ ಕೊಯ್ಲು ಮಾಡುವ ಹಾಗೂ ಮರಗಳಿಗೆ ಮದ್ದು ಸಿಂಪಡಿಸುವ ಯಂತ್ರ, ಅಡಿಕೆ ಗೊನೆಯಿಂದ ಕಾಯಿಗಳನ್ನು ಬೇರ್ಪಡಿಸುವ ಯಂತ್ರ, ಅಟೋಮ್ಯಾಟಿಕ್ ತೆಂಗಿನಕಾಯಿ ಸಿಪ್ಪೆ ಸುಲಿಯುವ ಹಾಗೂ ಕಾಯಿ ಒಡೆಯುವ ಯಂತ್ರ, ಎಳನೀರು ಕೊಚ್ಚುವ ಯಂತ್ರ, ತೋಟದ ಬದಿಗೆ ನೆಟ್ಟ ಗಿಡಗಳನ್ನು ಸುಂದರವಾಗಿ ಕತ್ತರಿಸುವ ಹೆಡ್ಜ್ ಕಟ್ಟರ್, ರಬ್ಬರ್ ಲ್ಯಾಟೆಕ್ಸ್ ಮಿಶ್ರಣ ಯಂತ್ರ ಹೀಗೆ ಕೃಷಿ ಉಪಯೋಗಿ ಯಂತ್ರಗಳನ್ನು ತಯಾರಿಸಿ ಕಾರ್ಮಿಕರ ಕೊರತೆ ನೀಗಿಸುವ ಪ್ರಯತ್ನ ಮಾಡಿದ್ದಾರೆ. ಇದರ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯರ ಅಗತ್ಯತೆ ಹಾಗೂ ತಾಂತ್ರಿಕವಾಗಿ ಅವುಗಳನ್ನು ಸರಿಗಟ್ಟುವ ಸಾಧ್ಯತೆಗಳನ್ನು ಅಧ್ಯಯನ ಮಾಡಿ ಮತ್ತೊಂದಿಷ್ಟು ಯಂತ್ರಗಳನ್ನು ತಯಾರಿಸಿ ಸೈ ಎನಿಸಿಕೊಂಡಿದ್ದಾರೆ.
ಇಲ್ಲಿನ ದೇವಳದ ಅನ್ನ ಛತ್ರಗಳಲ್ಲಿ, ಸಭೆ-ಸಮಾರಂಭಗಳಲ್ಲಿ ಅನ್ನಸಂತರ್ಪಣೆ ಸಮಯದಲ್ಲಿ ಬಾಳೆ ಎಲೆಯನ್ನು ಬಳಸುವುದು ಸಾಮಾನ್ಯ. ಆದರೆ ಈ ಎಲೆಗಳನ್ನು ತೆಗೆದು ಮತ್ತೊಂದಿಷ್ಟು ಜನರಿಗೆ ಊಟಕ್ಕೆ ಅಣಿಮಾಡುವ ಕೆಲಸ ಬಹಳ ಶ್ರಮವನ್ನು ಬೇಡುತ್ತದೆ. ಅದರಲ್ಲೂ ಜನಜಂಗುಳಿ ಜಾಸ್ತಿ ಇದ್ದ ವೇಳೆ ಸ್ವಚ್ಛತೆಗೆ ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಇಲ್ಲಿನ ವಿದ್ಯಾರ್ಥಿಗಳು ಬಾಳೆಎಲೆ ಎತ್ತುವ ಹಾಗೂ ಆ ಆವರಣವನ್ನು ಶುಚಿಗೊಳಿಸುವ ಯಂತ್ರವನ್ನು ನಿರ್ಮಿಸಿದ್ದಾರೆ. ಈ ಯಂತ್ರ ಸಾವಿರಾರು ಜನ ಉಂಡರೂ ಕ್ಷಣಮಾತ್ರದಲ್ಲಿ ಎಲೆ ಎತ್ತಿ, ಊಟದ ಪಂಕ್ತಿಯನ್ನು ಶುಚಿಗೊಳಿಸುವ ಸಾಮಥ್ರ್ಯ ಹೊಂದಿದೆ ಎಂದರು.
ಇದರೊಂದಿಗೆ ಗಾರೆ ಕೆಲಸಕ್ಕೆ ಸಹಾಯವಾಗುವಂತೆ ಗಾರೆ ಮಾಡುವ ಯಂತ್ರವನ್ನೂ ಆವಿಷ್ಕರಿಸಿದ್ದಾರೆ. ಜೊತೆಗೆ ರಿಕ್ತ ಪವರ್ ವ್ಯಾಕ್ಯುಮ್ ಕ್ಲೀನರ್ ತಯಾರಿಸಿ ರಸ್ತೆ ಬದಿಯಲ್ಲಿ ಶೇಖರಗೊಳ್ಳುವ ಕಸವನ್ನೂ ಸ್ವಚ್ಛಗೊಳಿಸಿ ಸ್ವಚ್ಛ ಭಾರತ್ಗೆ ಸಾಥ್ ನೀಡಿದ್ದಾರೆ. ಇದರೊಂದಿಗೆ ಮೊಬೈಲ್ ಮೂಲಕ ನಿಯಂತ್ರಿಸಲು ಸಾಧ್ಯವಾಗುವ ಜಲ ಶುದ್ಧಿಕರಣ ಘಟಕದ ಮಾದರಿಯನ್ನೂ ತಯಾರಿಸಿದ್ದಾರೆ. ಮನೆ ಬಾಗಿಲಿಗೆ ಹೊಟೇಲ್ ನಿಂದ ಪಾರ್ಸೆಲ್ ತಲುಪಿಸುವ ಆನ್ಲೈನ್ ರೆಸ್ಟ್ರೋ ವ್ಯವಸ್ಥೆ, ದೊಡ್ಡ ಪ್ರಮಾಣದಲ್ಲಿ ಚಪಾತಿ ತಯಾರಿಸುವ ಯಂತ್ರ ಮೊದಲಾದ ಆವಿಷ್ಕಾರಗಳೂ ನಡೆದಿವೆ. ಈ ತಾಂತ್ರಿಕ ಆವಿಷ್ಕಾರಗಳು ಸಮಾಜಮುಖಿಯಾಗಿದ್ದು ಜನರ ಅಗತ್ಯಗಳನ್ನು ಪೂರೈಸುವಂತೆ ನಿರ್ಮಾಣವಾಗಿವೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ನಿರ್ಮಾಣಗೊಳ್ಳುವ ಈ ಯಂತ್ರಗಳು ಕೆಲಸಗಾರರ ಅಲಭ್ಯವಿರುವ ಈ ದಿನಗಳಲ್ಲಿ ವರದಾನವಾಗುವ ಭರವಸೆ ಮೂಡಿಸಿರುವುದು ಮಾತ್ರವಲ್ಲದೆ ಹಲವು ರಾಜ್ಯಮಟ್ಟದ ಪ್ರದರ್ಶನಗಳಲ್ಲಿ ಪಾಲ್ಗೊಂಡು ಬಹುಮಾನಗಳನ್ನೂ ಪಡೆದುಕೊಂಡಿವೆ ಎಂದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಮಾಜಮುಖಿಯಾಗಬೇಕು. ಅವರ ಯೋಜನೆ-ಯೋಚನೆಗಳು ಜನಸಾಮಾನ್ಯರ ಬದುಕಿನ ಮಟ್ಟವನ್ನು ಉನ್ನತೀಕರಿಸಬೇಕು, ತಂತ್ರಜ್ಞಾನದ ಪ್ರಯೋಜನ ಎಲ್ಲರಿಗೂ ದೊರಕುವಂತೆ ಆಗಬೇಕು ಎಂಬ ಧ್ಯೇಯದೊಂದಿಗೆ ಕಾಲೇಜನ್ನು ಆರಂಭಿಸಲಾಗಿದೆ. ರೈತರಿಗೆ ಕೈಗೆಟುಕುವ ದರದಲ್ಲಿ ಸಿಗುವಂತೆ ಯಂತ್ರಗಳನ್ನು ಆವಿಷ್ಕರಿಸಿದ್ದು ಇದನ್ನು ರಿಮೋಟ್ ಮೂಲಕ ನಿಯಂತ್ರಿಸುವ ಸಾಧನೆ ಮಾಡಿದ್ದು ಇದರಿಂದ ವಿದ್ಯಾರ್ಥಿಗಳಿಗೂ ಮುಂದಿನ ದಿನಗಳಲ್ಲಿ ಸ್ವಂತ ಉದ್ಯೋಗ ನಡೆಸಲು ಅವಕಾಶ ಸಿಕ್ಕಿದಂತಾಗಿದೆ. ಇಲ್ಲಿ ವಿದ್ಯಾರ್ಥಿಗಳ ಅಂಕಗಳನ್ನು ಪರಿಗಣಿಸದೆ ಕನಿಷ್ಠ ಅಂಕ ಪಡೆದವರನ್ನು ಸೇರ್ಪಡೆಗೊಳಿಸಿ ನಂತರ ಇಲ್ಲಿನ ನುರಿತ ಉಪನ್ಯಾಸಕರುಗಳ ತಂಡ ಅವರನ್ನು ಸಾಧನಾಶೀಲರನ್ನಾಗಿಸಿದ್ದು ಎಸ್ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ವಿಶೇಷತೆಯಾಗಿದೆ ಮತ್ತು ಸಂಸ್ಥೆಯ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಕಾರ್ಯದರ್ಶಿಗಳಾದ ಡಿ ಹರ್ಷೇಂದ್ರ ಕುಮಾರ್, ಡಾ. ಬಿ ಯಶೋವರ್ಮ, ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್ರವರ ಸಂಪೂರ್ಣ ಸಹಕಾರವೇ ಯಶಸ್ವಿಗೆ ಕಾರಣ ಎಂದರು.
ಗೋಷ್ಠಿಯಲ್ಲಿ ವಿವಿಧ ವಿಭಾಗದ ಮುಖ್ಯಸ್ಥರುಗಳಾದ ದಿನೇಶ್, ಶ್ರೇಯಾಂಕ್ ಜೈನ್, ಅಪರ್ಣ ಭರಾಣ್ಯ, ಅಮರೇಶ್ ಹೆಬ್ಬಾರ್ ಉಪಸ್ಥಿತರಿದ್ದರು.