ಚಾಮರಾಜನಗರ: ಒಂದು ಮಾವಿನ ಹಣ್ಣನ್ನು ನೀಡಲು ಹಿಂದು-ಮುಂದು ನೋಡೋ ಈ ಕಾಲದಲ್ಲಿ ವಿದ್ಯಾರ್ಥಿಗಳನ್ನು ತಮ್ಮ ತೋಟಕ್ಕೆ ಕರೆಯಿಸಿ ಅವರಿಗೆ ತಿನ್ನಲು ಸಾಧ್ಯವಾಗುವಷ್ಟು ಸಾವಯವ ಮಾವಿನ ಹಣ್ಣು ನೀಡಿ ಅತಿ ಹೆಚ್ಚು ಸೇವಿಸಿದ ವಿದ್ಯಾರ್ಥಿಗೆ ಬಹುಮಾನ ನೀಡಿ, ಜತೆಗೆ ಸಾವಯವ ಕೃಷಿ ಕುರಿತು ತಿಳುವಳಿಕೆ ನೀಡುವ ಕಾಯಕವನ್ನು ಮಾಡುತ್ತಾ ಬರುತ್ತಿರುವ ವ್ಯಕ್ತಿಯೊಬ್ಬರಿದ್ದಾರೆ. ಅವರೇ ಕೈಲಾಸ್ ಮೂರ್ತಿ.
ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ನಿವಾಸಿ ಪ್ರಗತಿಪರ ರೈತ ಮತ್ತು ನೈಸರ್ಗಿಕ ಕೃಷಿ ತಜ್ಞರಾಗಿರುವ ಕೈಲಾಸ್ ಮೂರ್ತಿ ಅವರು ರಾಸಾಯನಿಕ ಗೊಬ್ಬರವನ್ನು ದೂರವಿಟ್ಟು ನೈಸಗರ್ಿಕ ಕೃಷಿಯ ಮೂಲಕ ಕೃಷಿ ಮಾಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣದ ಕನಸು ಮಾಡುತ್ತಿದ್ದಾರೆ. ರಾಸಾಯನಿಕ ಗೊಬ್ಬರ ಮತ್ತು ಸಿಂಪಡಣೆಯಿಂದಾಗಿ ಮಾನವ ಸೇವಿಸುವ ಆಹಾರ ಪದಾರ್ಥ ವಿಷಯುಕ್ತವಾಗಿದ್ದು, ಅದನ್ನು ತ್ಯಜಿಸಿ ಸಾವಯವದ ಮೂಲಕವೇ ಕೃಷಿ ಮಾಡಲು ರೈತರನ್ನು ಉತ್ತೇಜಿಸುತ್ತಾ ಬರುತ್ತಿರುವ ಕೈಲಾಸ್ ಮೂತರ್ಿ ಅವರು ಸ್ವತಹ ತಾವೇ ನೈಸರ್ಸಿಕ ಕೃಷಿ ಮಾಡುವ ಮೂಲಕ ಎಲ್ಲರ ಗಮನಸೆಳೆಯುತ್ತಿದ್ದಾರೆ. ಅಷ್ಟೇ ಅಲ್ಲ ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ಇಳುವರಿ ಮತ್ತು ಲಾಭದ ಲೆಕ್ಕಾಚಾರದಲ್ಲಿರುವ ಕೃಷಿಕರು ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಬಳಸಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆ ಮೂಲಕ ಲಾಭ ಪಡೆಯುವ ಚಿಂತನೆಯಲ್ಲಿರುತ್ತಾರೆ. ಆದರೆ ರಾಸಾಯನಿಕ ಬಳಸಿ ಬೆಳೆಯುವ ಬೆಳೆಯುವ ಆಹಾರೋತ್ಪನ್ನಗಳು ಮನುಷ್ಯನ ಆರೋಗ್ಯಕ್ಕೆ ಮಾರಕ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಮಕ್ಕಳ ಮೂಲಕ ಅರಿವು ಮೂಡಿಸುವ ಮಾರ್ಗ ಸುಲಭವಾಗಿರುವ ಕಾರಣದಿಂದ ಅವರು ಪ್ರತಿವರ್ಷ ಶಾಲಾ ವಿದ್ಯಾರ್ಥಿಗಳನ್ನು ತಮ್ಮ ತೋಟಕ್ಕೆ ಕರೆಯಿಸಿಕೊಂಡು ಮಾವಿನ ಹಣ್ಣು ತಿನ್ನೋ ಸ್ಪರ್ಧೆ ನಡೆಸುವ ಮೂಲಕ ಮಕ್ಕಳಲ್ಲಿ ನೈಸರ್ಗಿಕ ಕೃಷಿ ಏಕೆ ಮುಖ್ಯ ಎಂಬುದರ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಮನೆಯ ಹಿತ್ತಲ ಜಾಗವನ್ನು ಸದುಪಯೋಗಪಡಿಸಿಕೊಂಡು ತರಕಾರಿ, ಇನ್ನಿತರೆ ಬೆಳೆಯನ್ನು ಬೆಳೆಯಲು ಪ್ರೇರೇಪಿಸುತ್ತಿದ್ದಾರೆ. ತಮಗೆ ಬೇಕಾದ ತರಕಾರಿಗಳನ್ನು ತಮ್ಮ ಮನೆಯ ಸುತ್ತಮುತ್ತಲಿನ ಜಾಗದಲ್ಲಿ ಬೆಳೆದಿದ್ದೇ ಆದರೆ ಉತ್ತಮ ಪೋಷಕಾಂಶವುಳ್ಳ ತರಕಾರಿ ಸೇವನೆ ಸಾಧ್ಯವಾಗುತ್ತದೆ ಎಂಬುದು ಅವರ ಸಲಹೆಯಾಗಿದೆ.