News Kannada
Thursday, March 30 2023

ನುಡಿಚಿತ್ರ

ಈ ಜಲಪಾತ ಮಂಡ್ಯದ ನಯಾಗರಾ…

Photo Credit :

ಈ ಜಲಪಾತ ಮಂಡ್ಯದ ನಯಾಗರಾ...

ಎಲ್ಲೆಡೆ ಉತ್ತಮವಾಗಿ ಮಳೆ ಸುರಿದಿದ್ದರಿಂದ ಮಲೆನಾಡು ಮಾತ್ರವಲ್ಲ ಬಯಲು ಸೀಮೆಯಲ್ಲಿ ಹರಿವ ನದಿಗಳಲ್ಲಿಯೂ ಜೀವ ಕಳೆ ಬಂದಿದ್ದು, ಅಪರೂಪಕ್ಕೆ ಕೆಲವು ನದಿಗಳು ಭೋರ್ಗರೆದು ಹರಿಯುವ ಮೂಲಕ ಹೆಬ್ಬಂಡೆಗಳ ಮೇಲಿನಿಂದ ಧುಮುಕಿ ಜಲಪಾತಗಳನ್ನು ಸೃಷ್ಠಿ ಮಾಡಿವೆ.

ಈ ಸುಂದರ ದೃಶ್ಯಗಳು ಕೆಲವೇ ದಿನಗಳಿಗಷ್ಟೆ ಸೀಮಿತವಾಗಿರುವುದರಿಂದ ಅದರತ್ತ ಯಾರು ಹೋಗುತ್ತಾರೋ ಅವರಿಗೆ ಮಾತ್ರ ಜಲಧಾರೆಯ ಸೊಬಗು ಸವಿಯುವ ಅವಕಾಶ ದೊರೆಯಲಿದೆ. ಈ ಪೈಕಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಬಳಿ ಶಿಂಷಾನದಿಯಿಂದ ಜಲಪಾತವೊಂದು ಸೃಷ್ಠಿಯಾಗಿದ್ದು ನಿಸರ್ಗ ಪ್ರೇಮಿಗಳ ಮನಸೆಳೆಯುತ್ತಿದೆ.

ಹಾಗೆ ನೋಡಿದರೆ ಈ ತಾಣ ಹೆಬ್ಬಂಡೆಗಳಿಂದ ಕೂಡಿದ್ದು, ಇದುವರೆಗೆ ಶಿಂಷಾ ನದಿಯಲ್ಲಿ ನೀರು ತುಂಬಿ ಹರಿಯದಿದ್ದ ಕಾರಣದಿಂದ ಜಲಪಾತವನ್ನು ನೋಡುವ ಭಾಗ್ಯ ಕೂಡಿ ಬಂದಿರಲಿಲ್ಲ. ಆದರೆ ಈ ಬಾರಿ ಸುರಿದ ಮಳೆ ಶಿಂಷಾ ನದಿ ತುಂಬಿ ಹರಿಯುವಂತೆ ಮಾಡಿದ್ದು, ಹೀಗೆ ಹರಿಯುವ ನದಿ ಹಲಗೂರು ಬಳಿ ಹರಿಯುವಾಗ ಹೆಬ್ಬಂಡೆಗಳ ಮೇಲಿಂದ  ಬೆಳ್ನೊರೆಯುಕ್ಕಿಸುತ್ತಾ ಧುಮುಕುತ್ತಿದ್ದು, ಈ ಸುಂದರ ದೃಶ್ಯ ಕಣ್ಮನ ಸೆಳೆಯುತ್ತಿದೆ. ಬಹಳಷ್ಟು ವರ್ಷಗಳಿಂದ ಇಂತಹದೊಂದು ಸುಂದರ ದೃಶ್ಯವನ್ನು ನೋಡುತ್ತಿದ್ದ ಜನ ತಮ್ಮ ಕಣ್ಣಮುಂದೆ ಸೃಷ್ಠಿಯಾಗಿರುವ ಜಲಧಾರೆಯನ್ನು ಕಂಡು ಸಂಭ್ರಮಿಸುತ್ತಿದ್ದಾರೆ.

ಈ ಜಲಪಾತಕ್ಕೆ ನಿರ್ದಿಷ್ಟ ಯಾವುದೇ ಹೆಸರು ಇಲ್ಲದ ಕಾರಣ ಜನ ಅವರಿಷ್ಟ ಬಂದ ಹೆಸರಿನಲ್ಲಿ ಕರೆಯುತ್ತಿದ್ದು ಅದು ಏನೆಂದರೆ, ಶಿಂಷಾ ಜಲಪಾತ, ಕೊಂಡ ಜಲಪಾತ, ಮಂಡ್ಯ ನಯಾಗರಾ, ಬೆಂಕಿಜಲಪಾತ ಹೀಗೆ ಮುಂದುವರೆಯುತ್ತಾ ಹೋಗುತ್ತದೆ. ಒಂದು ವೇಳೆ ಸದಾ ಈ ಜಲಪಾತದಲ್ಲಿ ನೀರಿದ್ದು ಅದು ಧುಮುಕುವಂತಿದ್ದರೆ, ಮಂಡ್ಯದ ನಯಾಗರವಾಗುತ್ತಿದ್ದುದರಲ್ಲಿ ಎರಡು ಮಾತಿಲ್ಲ.

ಇಷ್ಟಕ್ಕೂ ಈ ಜಲಪಾತವನ್ನು ನೋಡಲು ಹೋಗುವುದು ಅಷ್ಟು ಸುಲಭವೇನಲ್ಲ. ಏಕೆಂದರೆ ಜಲಪಾತ ಸೃಷ್ಠಿಯಾಗಿರುವ ಸ್ಥಳಕ್ಕೆ ಸಮರ್ಪಕವಾದ ರಸ್ತೆಯಿಲ್ಲ. ಜತೆಗೆ ಇಲ್ಲೊಂದು ಜಲಪಾತವಿದೆ ಎಂದು ಹೇಳಲು ಯಾವುದೇ ನಾಮಫಲಕಗಳಿಲ್ಲ. ಇನ್ನು ಕಾಲ್ನಡಿಗೆಯಲ್ಲಿ ನಡೆಯುವ ಧೈರ್ಯವೂ ಬೇಕು. ಇದೆಲ್ಲ ಇದ್ದರೂ ಹತ್ತಿರದಿಂದ ನಿಂತು ಜಲಪಾತವನ್ನು ವೀಕ್ಷಿಸಲು ಅನುಕೂಲವಾದ ವ್ಯವಸ್ಥೆಯೂ ಇಲ್ಲ. ಆದ್ದರಿಂದ ಜಲಪಾತ ವೀಕ್ಷಣೆ ಮಾಡುವುದು ಒಂದು ಸಾಹಸ ಎಂದರೆ ತಪ್ಪಾಗಲಾರದು. ಆದರೂ ಇಷ್ಟೆಲ್ಲ ಕಷ್ಟಪಟ್ಟು ಹತ್ತಿರ ಹೋದರೆ ಅದರ ಚೆಲುವಿಗೆ ಮೈಮನಸೋಲದಿರಲಾರರು.

ಏಕೆಂದರೆ ಸುಮಾರು ನೂರು ಅಡಿಗಳಷ್ಟು ಎತ್ತರದಿಂದ ಧುಮ್ಮಿಕ್ಕುವ ಜಲಪಾತ ಬಳಿಕ ಚಿಕ್ಕಾತಿ ಚಿಕ್ಕ ಜಲಧಾರೆಗಳಾಗಿ ಹರಿದು ಹೋಗುವ ದೃಶ್ಯ ಸುಂದರ ಸುರಸುಂದರವಾಗಿದ್ದು, ಶ್ವೇತಧಾರೆಗಳು ಸೃಷ್ಠಿಸುವ ಮಂಜಿನ ಮಳೆಯ ಜತೆಗೆ ನೀರ ಹಾಡು  ಮನಸ್ಸಿಗೆ ಖುಷಿಕೊಡುವುದರೊಂದಿಗೆ ನಮ್ಮಲ್ಲಿ ಉಲ್ಲಾಸ ನೀಡುತ್ತದೆ.

ಇನ್ನು ಜಲಪಾತ ಮಳವಳ್ಳಿ ತಾಲೂಕಿನ ಹಲಗೂರಿನಿಂದ ಸುಮಾರು 15 ಕಿ.ಮೀ. ದೂರದಲ್ಲಿದೆ. ಇದನ್ನು ನೋಡಲು ತೆರಳುವವರು ಮಳವಳ್ಳಿ ತಾಲೂಕಿನ ಹಲಗೂರಿನಿಂದ ಮುತ್ತತ್ತಿಗೆ ಹೋಗುವ ಮಾರ್ಗದಲ್ಲಿ ಅಂದರೆ ಹಲಗೂರಿನಿಂದ 5 ಕಿ.ಮೀ. ತೆರಳಿದರೆ ಅಲ್ಲಿ ರಸ್ತೆ ಇಬ್ಭಾಗವಾಗುತ್ತದೆ. ಇಲ್ಲಿ ಬಲಕ್ಕೆ  ಬೀರೋಟ ಗ್ರಾಮದ ಕಡೆಗೆ ಹೋಗುವ ಮಾರ್ಗದಲ್ಲಿ ತೆರಳಿ ಕರಲಕಟ್ಟೆ, ಗಾಣಾಳು ಮೂಲಕ ಕೆಂಚಬೋವಿದೊಡ್ಡಿ ಗ್ರಾಮಕ್ಕೆ ತೆರಳಿದರೆ ಅಲ್ಲಿಂದ  ಸುಮಾರು 200 ಮೀಟರ್ ದೂರದಲ್ಲಿ ಮುಖ್ಯರಸ್ತೆಯಿಂದ ಬಲಕ್ಕೆ ತಿರುಗಿ ತೆರಳಿದರೆ ಜಲಪಾತದ ಬಳಿಗೆ ಸಾಗಬಹುದಾಗಿದೆ.

See also  ಕ್ರಿಸ್ಮಸ್ ಬಂದಿದೆ.. ಸಡಗರ ತಂದಿದೆ...

ಮೊದಲಿಗೆ ತೆರಳುವವರು ಇಲ್ಲಿನ ಸ್ಥಳೀಯರನ್ನು ಜತೆಗೆ ಮಾರ್ಗದರ್ಶಕರನ್ನಾಗಿ ಕರೆದೊಯ್ಯುವುದು ಒಳ್ಳೆಯದು. ಇಲ್ಲದೆ ಹೋದರೆ ರಸ್ತೆ ಹುಡುಕಿಕೊಂಡು ಹೋಗುವುದೇ ದೊಡ್ಡದೊಂದು ಕೆಲಸವಾಗಿ ಬಿಡುತ್ತದೆ. ಮಳೆಯಿಂದ ಸೃಷ್ಠಿಯಾಗಿರುವ ಈ ಜಲಪಾತ ಅಲ್ಪಾಯುಷಿಯಾಗಿರುವುದರಿಂದ ದಿನ ಕಳೆದಂತೆ ಅದರ ವೈಭವ ಕ್ಷೀಣಿಸುತ್ತಾ ಹೋಗುವುದರಿಂದ ಯಾರು ಬೇಗ ಅದರತ್ತ ತೆರಳುತ್ತಾರೋ ಅವರಿಗೆ ಮಾತ್ರ ಚೆಲುವನ್ನು ನೋಡುವ ಅವಕಾಶ ದೊರೆಯಲಿದೆ. ಇನ್ನೇಕೆ ತಡ ಹೊರಟು ಬಿಡಿ…

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು