ಮೈಸೂರು: ವನಮಹೋತ್ಸವ ಸಂದರ್ಭದಲ್ಲಿ ಸಸಿಗಳನ್ನು ನೆಟ್ಟು, ಮುಂದಿನ ವರ್ಷದವರೆಗೆ ಅತ್ತ ಸುಳಿಯದೆ ಒಣಮಹೋತ್ಸವ ಆಗುವುದು ಬೇಡ. ನಾವು ಮಾಡುವ ಈ ಕಾರ್ಯ ನಿಜ ಅರ್ಥದ ವನಮಹೋತ್ಸವ ಅಗಬೇಕು. ವಿಶ್ವ ಪರಿಸರದ ದಿನದಂದು ನೆಟ್ಟ ಗಿಡಗಳು ಹೇಗಿವೆ ಎಂಬುದನ್ನು ಗಮನಿಸಬೇಕು. ಹಾಗೇ ಅವುಗಳ ಜೊತೆಗೊಂದು ಸಂವಹನ ನಡೆಸಬೇಕು ಎಂದು ಜಾನಪದ ವಿದ್ವಾಂಸ ಡಾ. ಎಂ. ಭೈರೇಗೌಡ ಕರೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೂಟಗಲ್ ಹೋಬಳಿ ಘಟಕ ಕ್ಯಾಸಾಪುರ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸಂಯುಕ್ತವಾಗಿ ಹಮ್ಮಿಕೊಂಡಿದ್ದ ವಿಶ್ವಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ನಮ್ಮ ಮತ್ತು ಸಸ್ಯಗಳ ನಡುವೆ ಆಮ್ಲಜನಕ ಮತ್ತು ಇಂಗಾಲದ ಡೈ ಆಕ್ಸೈಡುಗಳ ಕೊಡು-ಕೊಳ್ಳುವಿಕೆ ಇರುವುದನ್ನು ಮರೆಯಬಾರದು. ಮರ-ಗಿಡಗಳು ಮಾತಾಡುತ್ತವೆ; ಅವುಗಳನ್ನು ಮಾತನಾಡಿಸುವ ಛಾತಿ ಮತ್ತು ಮನಸ್ಸು ನಮಗಿರಬೆಕು. ಇದಕ್ಕೆ ಪುರಾಣಕಾಲದ ಕಾವ್ಯಗಳಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತವೆ. ಆಧುನಿಕ ಮತ್ತು ವೈಜ್ಞಾನಿಕ ಯುಗಕ್ಕೂ ಮೊದಲೇ ಕಾಳಿದಾಸನ ಕಾಲದಲ್ಲಿಯೇ ಸಸ್ಯಗಳಿಗೆ ಭಾವನೆಗಳಿವೆ, ಜೀವವಿರುತ್ತದೆ ಎಂಬುದು ತಿಳಿದಿತ್ತು ಎಂದರು. ಸ್ಥಳೀಯ ಮಣ್ಣಿನ ಗುಣಗಳನ್ನು ಅರ್ಥ ಮಾಡಿಕೊಂಡು, ನೈಸರ್ಗಿಕವಾಗಿ ಬೆಳೆದಿರುವ ಉಪಯುಕ್ತ ಗಿಡಮರಗಳನ್ನು ಸಂರಕ್ಷಿಸುವ ಕೆಲಸವಾಗಬೇಕಿದೆ. ಪರಿಸರ ಪಾಠದ ಪಠ್ಯಭಾಗಗಳು ನಮ್ಮ ಶಿಕ್ಷಣ ಪದ್ಧತಿಯಲ್ಲಿ ಮತ್ತಷ್ಟು ಅಳವಡಿಕೆಯಾಗಬೇಕಿದೆ ಎಂದರು.
ರಾಮನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷ ನಂಜುಂಡಿ ಬಾನಂದೂರು ಮಾತನಾಡಿ ಅವೈಜ್ಞಾನಿಕ ಮತ್ತು ಪ್ರಮಾಣ ಬದ್ಧವಲ್ಲದ ರಾಸಾಯನಿಕಗಳ ಬಳಕೆಯಿಂದ ಭೂಮಿ ಬರಡಾಗುತ್ತಿದೆ. ಅಗತ್ಯ ಪ್ರಮಾಣದಲ್ಲಿ ಅದನ್ನು ಬಳಸುವುದು ಅಪಾಯಕಾರಿಯಲ್ಲ. ನಮ್ಮ ಭೂಮಿಯ ಕೊರತೆಯೇನಿದೆ ಅಂತಹ ಪೋಷಕಾಂಶಗಳನ್ನು ಕೊಟ್ಟು ವೈಜ್ಞಾನಿಕವಾಗಿ ಗಿಡಮರಗಳನ್ನು ಬೆಳೆಸಬೇಕಾಗಿದೆ. ನೀರಿನ ನಿರ್ವಹಣೆ, ಪ್ಲಾಸ್ಟಿಕ್ ಕಡಿಮೆ ಬಳಕೆ ಇವೆಲ್ಲ ನಮ್ಮ ಪರಿಸರದ ಉಳಿವಿನ ಮಾರ್ಗಗಳು ಎಂದರು.
ಕ್ಯಾಸಾಪುರ ಗ್ರಾಮಪ್ರವೇಶದಲ್ಲಿರುವ ಸರ್ಕಾರಿ ಜಮೀನಿಗೆ ವಿವಿಧ ಹಣ್ಣಿನ ಗಿಡಗಳನ್ನು ತರಿಸಿ, ಗ್ರಾಮಸ್ಥರು ಮತ್ತು ಶಾಲಾಮಕ್ಕಳ ನೆರವಿನಿಂದ ಸುಂದರ ಸಾರ್ವಜನಿಕ ಹಣ್ಣಿನ ತೋಟ ನಿರ್ಮಾಣದ ಕನಸು ಕಂಡಿದ್ದೇನೆ. ಅದಕ್ಕೆ ಪೂರಕವಾಗಿ ಈಗಾಗಲೇ ಮೂವತ್ತು ವಿವಿಧ ಬಗೆಯ ಸಸಿಗಳನ್ನು ನೆಡಲಾಗಿದ್ದು, ಅವುಗಳ ಪೋಷಣೆ ಮಾಡುವುದಾಗಿ ತಿಳಿಸಿದರು. ಈ ಮೂಲಕ ನಿಜ ಅರ್ಥದ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ಶಾಲಾ ಮುಖ್ಯ ಶಿಕ್ಷಕ ಚಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಲಾವಿದ ಕೃಷ್ಣೇಗೌಡ, ಮುಖಂಡರಾದ ಕುಮಾರ್, ಲೋಕೇಶ್, ಶಿವಮೂರ್ತಿ, ಗಂಗಾಧರ್, ಶಿಕ್ಷಕರುಗಳಾದ ವೆಂಕಟೇಶ್, ಎಸ್. ವೇಣುಗೋಪಾಲ್, ಶಿವರಾಜು, ರಮೇಶ್, ಶ್ವೇತಾ ಮತ್ತು ಶಿವರತ್ನ ಮುಂತಾದವರು ಪಾಲ್ಗೊಂಡಿದ್ದರು.