ಹಾಸನ : ಡಾ.ರಾಜ್ಕುಮಾರ್ ಸಂಘದ ಹಾಸನ ಅಧ್ಯಕ್ಷರಾಗಿದ್ದ ದಿ.ಹಾ.ರಾ.ನಾಗರಾಜ್ ಅವರ ಕಿರಿಯ ಪುತ್ರ ಮಯೂರ ನಾಗರಾಜ್ (34) ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟ ಪುನೀತ್ ರಾಜ್ಕುಮಾರ್ ಅವರ ಅಗಲಿಕೆ ನೋವನ್ನು ತಾಳಲಾರದೆ ಖಿನ್ನತೆಗೆ ಒಳಗಾಗಿ ಮಯೂರ ಸಾವಿನ ಮನೆಯ ಕದತಟ್ಟಿದ್ದಾರೆ ಎನ್ನಲಾಗಿದೆ.
ಪುನೀತ್ ನಿಧನರಾಗಿ 25 ದಿನ ಕಳೆದರೂ ಅಭಿಮಾನಗಳ ದುಃಖ, ನೋವು ಕಿಂಚಿತ್ತೂ ಕಡಿಮೆ ಆಗಿಲ್ಲ. ಇಂತಹ ವಿಷಾದನೀಯ ಸ್ಥಿತಿಯಲ್ಲಿ ಅಭಿಮಾನಿಗಳು ಧೈರ್ಯಗೆಡಬಾರದು, ತಾಳ್ಮೆ ತಂದುಕೊಳ್ಳಬೇಕು. ಪುನೀತ್ ಅವರು ಎಂದೂ ಇಂತಹದ್ದನ್ನು ಸಹಿಸಲ್ಲ ಎಂದು ಸ್ವತಃ ಶಿವರಾಜ್ಕುಮಾರ್ ಮತ್ತು ರಾಘವೇಂದ್ರ ರಾಜ್ಕುಮಾರ್ ಪದೇಪದೆ ಮನವಿ ಮಾಡುತ್ತಿದ್ದರೂ ಅಭಿಮಾನಿಗಳ ಆತ್ಮಹತ್ಯೆ ಪ್ರಕರಣ ಮುಂದುವರಿದಿದೆ.
ಪುನೀತ್ ಪುನೀತ್ ಅಗಲಿದ ದಿನದಿಂದಲೂ ಮಯೂರ ನಾಗರಾಜ್ ಖಿನ್ನತೆಗೆ ಜಾರಿದ್ದರು. ಸರಿಯಾಗಿ ತಿಂಡಿ-ಊಟ ಸಹ ಮಾಡುತ್ತಿರಲಿಲ್ಲ. ಪದೇ ಪದೆ ಅಪ್ಪು ಸಾವಿನ ಬಗ್ಗೆ ನೋವು ವ್ಯಕ್ತಪಡಿಸುತ್ತಲೇ ಇದ್ದರಂತೆ. ಬುಧವಾರ ರಾಜ್ಕುಮಾರ್ ನಗರದ ತನ್ನ ಮನೆಯಲ್ಲಿ ತಾಯಿ ಹಾಗೂ ಪತ್ನಿ ಇದ್ದ ವೇಳೆಯೇ ಕೊಠಡಿಗೆ ಹೋಗಿ ಮಯೂರ ನೇಣು ಬಿಗಿದುಕೊಂಡಿದ್ದಾರೆ. ಕೂಡಲೇ ಕುಟುಂಬಸ್ಥರು ನೆರೆಯವರ ಸಹಕಾರ ಪಡೆದು ಮಯೂರ ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಆ ವೇಳೆಗಾಗಲೇ ಮೃತಪಟ್ಟಿದ್ದರು. ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.