ಬೆಂಗಳೂರು: ಮತದಾನ ಮಾಡುವ ಕುರಿತು ಜನರಿಗೆ ಸಂದೇಶ ನೀಡುವ ಅಗತ್ಯವಿಲ್ಲ. ಅವರಿಗೆ ತಮ್ಮ ಜವಾಬ್ದಾರಿಯ ಅರಿವಿದೆ ಎಂದು ಸೂಪರ್ ಸ್ಟಾರ್ ಯಶ್ ಹೇಳಿದ್ದಾರೆ. ಬುಧವಾರ ಮತಚಲಾವಣೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
“ನಾನು ನನ್ನ ಕರ್ತವ್ಯ ಮಾಡಿದ್ದೇನೆ, ಪ್ರತಿಯೊಬ್ಬ ಮತದಾರರು ಮತ ಚಲಾಯಿಸಬೇಕು ಎಂದು ಅವರು ಹೇಳಿದರು. ಪ್ರಚಾರದಲ್ಲಿ ಏಕೆ ಭಾಗವಹಿಸಲಿಲ್ಲ ಎಂಬ ಪ್ರಶ್ನೆಗೆ, ನನಗೆ ಆಸಕ್ತಿಯಿಲ್ಲ, ಆ ಕಾರಣಕ್ಕಾಗಿ ಈ ಬಾರಿ ರಾಜಕೀಯ ಪಕ್ಷಗಳ ಪ್ರಚಾರಕ್ಕೆ ಮುಂದಾಗಿಲ್ಲ ಎಂದು ಯಶ್ ಹೇಳಿದರು.
“ಕಳೆದ ಬಾರಿ ಕೆಲ ಕಾರಣಕ್ಕೆ ಪ್ರಚಾರದಲ್ಲಿ ಪಾಲ್ಗೊಂಡಿದ್ದೆ. ಅಲ್ಲದೆ ನಾನು ‘ಯಶೋಮಾರ್ಗ’ ಸಂಘಟನೆಯ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಮತದಾನ ಮೂಲಭೂತ ಹಕ್ಕು ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಆರೋಗ್ಯ, ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳನ್ನು ಜನರಿಗೆ ರಾಜಕೀಯ ಪಕ್ಷಗಳು ಒದಗಿಸಿಕೊಡಬೇಕು ಎಂದು ಯಶ್ ಹೇಳಿದರು. 2019ರ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಪರ ಯಶ್ ಪ್ರಚಾರ ಮಾಡಿದ್ದರು.