ಮುಂಬಯಿ: ತುಳುನಾಡ ಸೇವಾ ಸಮಾಜ ಮೀರಾ ಭಾಯಂದರ್ ಇದರ ಸಂಸ್ಥಾಪನ ದಿನವು ಮಾ.23ರಂದು ಮೀರಾರೋಡ್ ಪೂರ್ವದ ಜಹಗೀಡ್ ವೃತ್ತದ ನಾರಾಯಣ ಗುರು ಸಭಾಗೃಹದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕಾರ ಮಾಡಿ ಮಾತನಾಡಿದ ಸಂಘಟಕ, ಬಂಟ್ಸ್ ಫೋರಂನ ಮೀರಾ ಭಾಯಂದರ್ ಇದರ ಸ್ಥಾಪಕ ಅಧ್ಯಕ್ಷ ಸಂತೋಷ್ ರೈ ಬೆಳ್ಳಿಪಾಡಿ ಅವರು, ತುಳು ಭಾಷೆಯು ಜಾತಿ, ಮತ, ಪಂಗಡ ಮೀರಿ ಬೆಳೆದಿದೆ. ತುಳು ಸಂಸ್ಕೃತಿಯಲ್ಲಿ ಮಾನವನ ವಿಕಾಸಕ್ಕೆ ಸಹಾಯವಾಗುವ ಗುಣ ಇದೆ. ಪ್ರಕೃತಿ ಮತ್ತು ಇತರ ಜೀವಿಗಳ ಆಚರಣೆ ಮೂಲಕ ತುಳುವರು ಆಧುನಿಕ ಯುಗದಲ್ಲಿ ತಮ್ಮ ಸಂಪದ್ರಾಯ, ಆಚರಣೆಗಳನ್ನು ಉಳಿಸಿಕೊಂಡಿದ್ದಾರೆ ಎಂದರು.
ತುಳುನಾಡ ಸೇವಾ ಸಮಾಜ ಮೀರಾ ಭಾಯಂದರ್ ಇದರ ಸಂಸ್ಥಾಪಕ ದಿನಾಚರಣೆ ಜತೆಗೆ ಮಹಿಳಾ ದಿನಾಚಣೆ, ಅರಶಿನ ಕುಂಕುಮ, ಸಮ್ಮಾನ ಮತ್ತು ಜಾನಪದ ನೃತ್ಯ ಸಭಾ ಕಾರ್ಯಕ್ರಮ ನಡೆಯಿತು.
ಜಾನಪದ ನೃತ್ಯ ಸ್ಪರ್ಧೆಯಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ಮೀರಾ ಭಾಯಂದರ್ ಶಾಖೆ ಪ್ರಥಮ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮೀರಾರೋಡ್ ಸಮಿತಿ ದ್ವಿತೀಯ, ಬಂಟ್ಸ್ ಫೋರಂ ಮೂರನೇ ಸ್ಥಾನ ಪಡೆಯಿತು.
ಕಾರ್ಯಕ್ರಮದಲ್ಲಿ ಡಾ. ಶಂಕರ್ ಕೆ.ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕರ್ನಾಟಕ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ವಸಾಯಿ ಕಾರ್ಯಾಧ್ಯಕ್ಷ ಭಾಸ್ಕರ ಕೆ. ಶೆಟ್ಟಿ, ಗೌರವ ಅತಿಥಿಯಾಗಿ ಮುಂಬಯಿ ಬಿಲ್ಲವರ ಅಸೋಸಿಯೇಶನ್ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶಕುಂತಲಾ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.