ದುಬೈ: ಯು.ಏ.ಇ. ಯ ಧ್ವನಿ ಪ್ರತಿಷ್ಠಾನ ದ ಮೂವತ್ತೈದನೇ ವಾರ್ಷಿಕೋತ್ಸವದ ಸಮಾರೋಪದ ಅಂಗವಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಅನಿವಾಸಿ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು ವಿಜೇತರ ವಿವರ ಹೀಗಿದೆ:
ಪ್ರಥಮ ಬಹುಮಾನ – ಶ್ರೀ ಕನಕರಾಜ್ ಬಾಲಸುಬ್ರಮಣ್ಯಂ , ಸೌದಿ ಅರೇಬಿಯ(ಕಥೆ: ಅಕಾಶ ಜಿಂಕೆ), ದ್ವಿತೀಯ ಬಹುಮಾನ – ಡಾ. ಪ್ರೇಮಲತ ಬಿ, ಇಂಗ್ಲಂಡ್ (ಕಥೆ: ತರ್ಕ) ಮತ್ತು ಶ್ರೀ ಇರ್ಶಾದ್ ಮೂಡುಬಿದಿರೆ, ದುಬಾಯಿ,( ಕಥೆ: ಅನಾಥ), ತೃತೀಯ/ಸಮಾಧಾನಕರ ಬಹುಮಾನ- ಶ್ರೀಮತಿ ರಜನಿ ಭಟ್, ಅಬುದಾಭಿ, (ಕಥೆ: ತುಕ್ಕು ಹಿಡಿದ ಎಟಿಯಂ), ಡಾ. ಸವಿತಾ ನಟರಾಜ(ಬಸಾಪುರ), ಕುವೈಟ್(ಕಥೆ: ಮರಳುನಾಡಿನಲ್ಲೊಂದು ಮನೆಯ ಮಾಡಿ) ಮತ್ತು ಶ್ರೀಮತಿ ಯಶೋದಾ ಭಟ್. ದುಬಾಯಿ, (ಕಥೆ: ಸುಭದ್ರಾ). ಪ್ರಥಮ ಬಹುಮಾನ ರು.೧೦,೦೦೦/- ಮತ್ತು ಪ್ರಶಸ್ತಿ ಫಲಕ , ದ್ವಿತೀಯ ರೂ. ೫,೦೦೦/- ಮತ್ತು ಸಮಾಧಾನಕರ ರೂ. ೧,೫೦೦/- ನಗದು ಬಹುಮಾನವನ್ನು ನೀಡಲಾಗುವುದು.
ನಾಡಿನ ಸುಪ್ರಸಿದ್ಧ ಸಾಹಿತಿಗಳಾದ ಶ್ರೀಮತಿ ವೈದೇಹಿ, ಶ್ರೀ ಕುಂ. ವೀರಭದ್ರಪ್ಪ, ಶ್ರೀ ಚಿಂತಾಮಣಿ ಕೊಡ್ಲೆಕೆರೆ ಅವರು ತೀರ್ಪುಗಾರರಾಗಿ ಸಹಕರಿಸಿದ್ದರು.
ಸ್ಪರ್ಧೆಯಲ್ಲಿ ಸುಮಾರು ನೂರೈವತ್ತಕ್ಕೂ ಮಿಕ್ಕಿ ಕಥೆಗಾರರು ಭಾಗವಹಿಸಿದ್ದು ಭಾಗವಹಿಸಿದ ಎಲ್ಲರನ್ನೂ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಅಭಿನಂದಿಸಿರುವರು.ಈ ಸ್ಪರ್ಧೆಯಲ್ಲಿ ತೀರ್ಪುಗಾರರು ಆಯ್ಕೆಮಾಡಿದ ಕಥೆಗಳು ಹಾಗೂ ಅಹ್ವಾನಿತ ಅನಿವಾಸಿ ಕಥೆಗಾರರ ಕಥೆಗಳ ಕಥಾಸಂಕಲನವನ್ನು ಮುಂದೆ ಪ್ರಕಟಿಸಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಪ್ರಕಾಶ್ ರಾವ್ ಪಯ್ಯಾರ್ ತಿಳಿಸಿದ್ದಾರೆ.