ಕಾರವಾರ: ಸಾಮಾನ್ಯವಾಗಿ ಎಲ್ಲಡೆ ದೇವರ ಹೆಸರಿನಲ್ಲಿ ಜಾತ್ರೆ-ಉತ್ಸವ ನಡೆಯುವುದು ಸಾಮಾನ್ಯ. ಅಲ್ಲಿ ದೇವರಿಗೆ ಹರಕೆ ಹೂ-ಕಾಯಿ ಸಲ್ಲಿಸುತ್ತಾರೆ. ಉಳಿದಂತೆ ಆಟಿಕೆ ಸಾಮಗ್ರಿ ಹಾಗೂ ಸಿಹಿ ತಿನಿಸುಗಳ ಅಂಗಡಿ ಮಳಿಗೆಗಳು, ನಾಟಕ ಪ್ರದರ್ಶನ ನಡೆಯುತ್ತವೆ. ಆದರೆ ಈ ಜಾತ್ರೆ ವಿಭಿನ್ನ ಹಾಗೂ ವಿಶೇಷವಾಗಿ ನಡೆಯುತ್ತದೆ.
ಕಾರವಾರ ನಗರದಲ್ಲಿ ನಡೆದ ಶ್ರೀ ಮಾರುತಿ ದೇವರ ಜಾತ್ರೆ ಉಳಿದೆಲ್ಲ ಜಾತ್ರೆಗಿಂತ ವಿಭಿನ್ನವಾಗಿದ್ದು ಅದ್ಧೂರಿಯಾಗಿ ನಡೆಯಿತು. ಜಾತ್ರೆಯ ಅಂಗವಾಗಿ ಗುರುವಾರ ರಾತ್ರಿ ನಡೆದ ರಂಗೋಲಿ ಸ್ಪರ್ಧೆ ಹಾಗೂ ಪ್ರದರ್ಶನ ಜನಮನ ಸೆಳೆಯಿತು. ಈ ಜಾತ್ರೆಯು ’ರಂಗೋಲಿಯ ಜಾತ್ರೆ’ ಎಂದೇ ಪ್ರಸಿದ್ಧಿ ಪಡೆದುಕೊಂಡಿದೆ. ದೇವರ ಪೂಜೆ ವಿಧಿವಿಧಾನಗಳು ಉಳಿದ ಜಾತ್ರೆಗಳಂತಿದ್ದರೂ ಇಲ್ಲಿರಂಗೋಲಿಗಳದ್ದೇ ಕಾರುಬಾರು. ಹಾಗಾಗಿ ಚಿಕ್ಕಮಕ್ಕಳಾದಿಯಿಂದ ಹಿಡಿದು ದೊಡ್ಡವರು ಇದನ್ನು ರಂಗೋಲಿ ಜಾತ್ರೆ ಎಂದೇ ಕರೆಯುತ್ತಾರೆ.
ದಶಕಗಳ ಇತಿಹಾಸವಿದೆ:
ಈ ರಂಗೋಲಿಯ ಜಾತ್ರೆ ಇಂದು ನಿನ್ನೆಯದಲ್ಲ. ನಾಲ್ಕು ದಶಕಗಳ ಇತಿಹಾಸವಿದೆ. ವರ್ಷದಿಂದ ವರ್ಷಕ್ಕೆ ಇದು ತನ್ನ ಪ್ರಚಾರವನ್ನು ಹೆಚ್ಚಿಸಿಕೊಳ್ಳುತ್ತಿದೆ. ಜಾತ್ರೆಯ ಮೊದಲ ದಿನ ವಿವಿಧ ಕಲಾವಿದರಕೈಯಲ್ಲಿ ಅರಳುವ ಹಲವು ರೀತಿಯ ವೈವಿಧ್ಯಮಯವಾದ ಕಲಾಕೃತಿಗಳ ವೀಕ್ಷಣೆಗೆ ಇಲ್ಲಿ ಜನರ ನೂಕು ನುಗ್ಗಲು ನಡೆಯುತ್ತದೆ.
ಕಾರವಾರ ನಗರದ ಮಾರುತಿ ಗಲ್ಲಿ, ಬ್ರಾಹ್ಮಣ ಗಲ್ಲಿ, ಹೆಸ್ಕಾಂ ರಸ್ತೆ ಹಾಗೂ ಸಬನೀಸ ಛಾಳಗಳ ರಸ್ತೆಗಳು ವಾಹನ ಓಡಾಟದಿಂದ ಮುಕ್ತಗೊಂಡು ಜನರ ಓಡಾಟದಿಂದ ತುಂಬಿರುತ್ತದೆ.ಸಂಜೆಯಾಗುತ್ತಿದ್ದಂತೆ ಈ ರಸ್ತೆಗಳ ಎಡುಬದಿಯಲ್ಲಿರುವ ಮನೆಗಳು ದೀಪಾಲಂಕಾರದಿಂದ ಶೃಂಗಾರಗೊಂಡು ಮನೆಯ ಮುಂದೆ ಬಣ್ಣ ಬಣ್ಣದ ಹಿಟ್ಟಿನಿಂದ ಕಲಾವಿದರ ಕಲ್ಪನೆಗೆ ತಕ್ಕಂತೆಕಲಾಕೃತಿಗಳು ಅರಳಿ ನಿಲ್ಲುತ್ತವೆ. ಇದರ ಜೊತೆಗೆ ಮಾರುತಿ ದೇವರ ಹರಕೆ ಪೂಜೆ ಸಲ್ಲಿಕೆ ಫಲಾವಳಿಗಳ ಲೀಲಾವುಗಳು ಇನ್ನೊಂದು ಕಡೆಯಿಂದ ಮುಂದುರಿಯುತ್ತದೆ.
ಏಕದಳ-ದ್ವಿದಳ ಧಾನ್ಯಗಳು, ಹೂವು-ಎಲೆಗಳು, ಹಣ್ಣು-ತರಕಾರಿಗಳಿಂದ ಮತ್ತು ಬಣ್ಣ ಬಣ್ಣದ ಪುಡಿಗಳನ್ನು ಬಳಸಿಕೊಂಡು ಸಾಂಪ್ರದಾಯಿಕ ಶೈಲಿಯ ಚುಕ್ಕಿ ರಂಗೋಲಿಯಿಂದ ಹಿಡಿದುಕಲಾಕೃತಿಗಳು, ವ್ಯಕ್ತಿ ಚಿತ್ರಣಗಳು, ಪ್ರಸ್ತುತ ವಿದ್ಯಮಾನದಲ್ಲಿರುವ ಚಿತ್ರನಟರುಗಳು, ರಾಜಕೀಯ ವ್ಯಕ್ತಿಗಳು, ದೇವರ ಕಲಾಕೃತಿಗಳು ಕಲಾಕಾರರ ಕಲ್ಪನೆಯಲ್ಲಿ ಮೂಡಿದಂತವುಗಳು. ಇಲ್ಲಿ ಬಣ್ಣದಹಿಟ್ಟಿನಲ್ಲಿ ವೈವಿಧ್ಯಮಯ ಕಲೆಯ ಚಿತ್ತಾರವಾಗಿ ಅರಳುತ್ತದೆ.