ಚಿಕ್ಕಮಗಳೂರು: ವರದಕ್ಷಿಣೆಗಾಗಿ ಕಿರುಕುಳ ನೀಡಿ ಚಿತ್ರ ಹಿಂಸೆ ಕೊಟ್ಟು ಹೆಂಡತಿಯನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ನೀಡಿದೆ.
ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಎಸ್ಗಲ್ ಗ್ರಾಮದ ನಿವಾಸಿ ಆರೋಪಿ ರಾಜೇಂದ್ರನಿಗೆ 2012 ರ ಡಿ.29 ರಂದು ಕುಮಾರಗಿರಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎನ್.ಎಂ.ಡಿ.ಸಿ ಕೈಮರ ವಾಸಿಯಾದ ದೊರೆ ಎಂಬವರು ವರದಕ್ಷಿಣೆ ಮತ್ತು ಬಂಗಾರದ ಆಭರಣಗಳನ್ನು ನೀಡಿ ತಮ್ಮ ಮಗಳಾದ ಸುಧಾಳನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದರು.
ಆದರೆ ಆರೋಪಿ ರಾಜೇಂದ್ರನು ಮೂರು ತಿಂಗಳವರೆಗೆ ಹೆಂಡತಿಯನ್ನು ಚೆನ್ನಾಗಿ ನೋಡಿಕೊಂಡಿದ್ದು, ನಂತರ ಹೆಚ್ಚಿನ ವರದಕ್ಷಿಣೆ ತರಬೇಕೆಂದು ಪೀಡಿಸುತ್ತಿದ್ದನು. ಈ ಹಿನ್ನೆಲೆ ಮೃತಳ ತಂದೆ ಒಮ್ಮೆ ರೂ.50000 ಹಾಗೂ ರೂ.20,000 ಗಳನ್ನು ನೀಡದ್ದರೂ, ಅತೀ ಆಸೆಯಿಂದ ಪುನಃ ಆಕೆಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದರಿಂದ ಆಕೆ 2013 ರ ಡಿ.12 ರಂದು ಮಧ್ಯಾಹ್ಮ 3 ಗಂಟೆಗೆ ಸೀರೆಯಿಂದ ನೇಣು ಹಾಕಿಕೊಂಡು ಗಂಡನ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಳು ಆದ್ದರಿಂದ ಮೂಡಿಗೆರೆ ಪೋಲಿಸ್ ಠಾಣೆಯವರು ಪ್ರಕರಣವನ್ನು ದಾಖಲಿಸಿಕೊಂಡು ಕಲಂ 498-ಎ ರ ಅನ್ವಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಡಿ. ಕಂಬೇಗೌಡ ಅವರು ಆರೋಪಿ ರಾಜೇಂದ್ರನಿಗೆ ಕಲಂ 498-ಎ ರ ಅಪರಾಧಕ್ಕೆ 1 ವರ್ಷ ಜೈಲು ಶಿಕ್ಷೆ ಹಾಗೂ ರೂ. 5,000 ದಂಡ, ಕಲಂ 304-ಬಿ 7 ವರ್ಷಗಳ ಜೈಲು ಶಿಕ್ಷೆ ವರದಕ್ಷಿಣೆ ಕಿರುಕುಳ ಕಾಯ್ದೆಯ ಕಲಂ 3 ಕ್ಕೆ 5 ವರ್ಷಗಳ ಶಿಕ್ಷೆ ಹಾಗೂ ರೂ.15,000 ದಂಡ, ಕಲಂ 4 ಮತ್ತು 6 ಕ್ಕೆ ತಲಾ 6 ತಿಂಗಳು ಜೈಲು ಶಿಕ್ಷೆ ರೂ.5000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎ.ಎಂ ಸುರೇಶ್ ಕುಮಾರ್ ಮೊಕದ್ದಮೆಯನ್ನು ನಡೆಸಿದರು.