ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮೀಸಲು ಅರಣ್ಯ ಮತ್ತು ಸಾಗುವಾನಿ ನೆಡುತೋಪುಗಳಲ್ಲಿ ಥಿನ್ನಿಂಗ್ ಹೆಸರಿನಲ್ಲಿ ಸಾವಿರಾರು ಮರಗಳನ್ನು ಧರೆಗುರುಳಿಸುತ್ತಿದ್ದ ಜಿಲ್ಲಾ ಅರಣ್ಯ ಇಲಾಖೆಯ ಕೃತ್ಯಕ್ಕೆ ಕಡಿವಾಣ ಬಿದ್ದಿದೆ. ತಕ್ಷಣದಿಂದಲೇ ಥಿನ್ನಿಂಗ್ ಅಥವಾ ಇನ್ನಿತರ ಹೆಸರಿನಲ್ಲಿ ಯಾವುದೇ ರೀತಿಯ ಮರಗಳನ್ನು ಕಡಿಯದಂತೆ ಹಿರಿಯ ಅರಣ್ಯ ಅಧಿಕಾರಿಗಳು ಆದೇಶ ನೀಡಿದ್ದಾರೆ.
ಥಿನ್ನಿಂಗ್’ ಹೆಸರಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೀಸಲು ಅರಣ್ಯ, ಕಿರು ಅರಣ್ಯ ಹಾಗೂ ನೆಡುತೋಪುಗಳಲ್ಲಿ ಸಾಗುವಾನಿ ಮರಗಳನ್ನು ಸದ್ದಿಲ್ಲದೆ ಕಡಿದು ಅರಣ್ಯ ಬೋಳು ಮಾಡಿತ್ತು. ಸಾಗುವಾನಿ ಮರಗಳನ್ನು ಕಡಿಯುವುದಕ್ಕೆ ಪರಿಸರಾಸಕ್ತರು ಮತ್ತು ಸ್ಥಳೀಯ ಪರಿಸರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ನೆಡುತೋಪುಗಳಲ್ಲಿ ತಾಂತ್ರಿಕವಾಗಿ ಥಿನ್ನಿಂಗ್ ಮಾಡುವುದು ಇಲಾಖೆ ಕಾರ್ಯ ಯೋಜನೆಯಲ್ಲಿ ಇತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಜಿಲ್ಲೆಯ ಅರಣ್ಯಗಳಲ್ಲಿ ಕೈಗೊಂಡಿದ್ದ ಮರ ಕಡಿಯುವ ಕಾರ್ಯಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಸತ್ಯಾಸತ್ಯತೆ ಪರಿಶೀಲಿಸಿ ವರದಿ ನೀಡುವಂತೆ ವಿಚಕ್ಷಣ ದಳಕ್ಕೆ ಹಿರಿಯ ಅರಣ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಥಿನ್ನಿಂಗ್ ಹೆಸರಿನಲ್ಲಿ ಬೆಲೆಬಾಳುವ ಸಾಗುವಾನಿ ಮರಗಳನ್ನು ಬುಡಸಮೇತ ಕಡಿಯುತ್ತಿರುವ ಕೃತ್ಯವನ್ನು ಸ್ಥಳೀಯ ಸಂಘಟನೆಗಳು ಮತ್ತು ಪರಿಸರಾಸಕ್ತರು ವಿರೋಧಿಸುತ್ತಿದ್ದರೆ ಅದನ್ನು ಇಲಾಖೆಯ ಕೆಲವು ಅಧಿಕಾರಿಗಳು ಸವಾಲಾಗಿ ತೆಗೆದುಕೊಂಡಿದ್ದರು. ರಾಜಕೀಯ ಒತ್ತಡ ಮತ್ತು ಟಿಂಬರ್ ಮಾಫಿಯಾದ ಆಮಿಷಕ್ಕೂ ಹಿರಿಯ ಅಧಿಕಾರಿಗಳು ಮಣಿದು, ಅರಣ್ಯ ಬಲಿಕೊಡಲು ಹೊರಟಿದ್ದಾರೆ’ ಎಂದು ಸ್ಥಳೀಯರು ಆರೋಪಿಸಿದರು.
ಅರಣ್ಯ ಸಂರಕ್ಷಣೆ ಮತ್ತು ಪರಿಸರದ ಹಿತದೃಷ್ಟಿಯಿಂದ ಮರಗಳ ಕಡಿಯಬಾರದು. ಆದರೆ, ಕಡಿತಲೆಗೆ ಆಯ್ದುಕೊಂಡಿರುವ ಸಾಗುವಾನಿ ನೆಡುತೋಪುಗಳಲ್ಲಿ ಅಧಿಕಾರಿಗಳೇ ಮೊಕ್ಕಾಂ ಮಾಡಿ, ಜಿದ್ದಿಗೆ ಬಿದ್ದವರಂತೆ ನಿನ್ನೆ ದೇವದಾನ ಮೀಸಲು ಅರಣ್ಯ ಮತ್ತು ಬಸವನಕೋಟೆಮೀಸಲು ಅರಣ್ಯದಲ್ಲಿ ಮರಗಳನ್ನು ಕಡಿಸಿದ್ದರು ಒಟ್ಟಾರೆಯಾಗಿ ಚಿಕ್ಕಮಗಳೂರು ವೃತ್ತದ ವ್ಯಾಪ್ತಿಯ ಮೀಸಲು ಅರಣ್ಯ ಮತ್ತು ಸಾಗುವಾನಿ ನೆಡುತೋಪುಗಳಲ್ಲಿ ಮರಗಳ ಥಿನ್ನಿಂಗ್ ನಡೆಸಲು ರಾಜ್ಯ ಸರ್ಕಾರ ಅರಣ್ಯ ಇಲಾಖೆಗೆ 5ಕೋಟಿ ಅನುದಾನ ಬಿಡುಗಡೆ ಮಾಡಿದೆ. ಅಭಿವೃದ್ದಿ ಹೆಸರಿನಲ್ಲಿ ಮರಗಳ ಹನನ ನಡೆಯುತ್ತಿದ್ದ ಕಾರ್ಯಕ್ಕೆ ಸದ್ಯ ಬ್ರೇಕ್ ಬಂದಿರುವುದು ಪರಿಸರಾಸ್ತಕರು ಸೇರಿದಂತೆ ಸ್ಥಳೀಯರಲ್ಲಿ ಹರ್ಷ ಮೂಡಿಸಿದೆ.