ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿದ ಪಿಕ್ಅಪ್ ವಾಹನವೊಂದು ಮಗುಚಿದ ಪರಿಣಾಮ 21 ಕಾರ್ಮಿಕರು ಗಾಯಗೊಂಡು ನಾಲ್ವರ ಸ್ಥಿತಿ ಗಂಭೀರವಾಗಿರುವ ಘಟನೆ ವಿರಾಜಪೇಟೆ ಕೊಡವ ಸಮಾಜದ ಬಳಿ ನಡೆದಿದೆ.
ತೋಟದ ಕೆಲಸ ಮುಗಿಸಿ ತಮ್ಮ ತಮ್ಮ ಮನೆಗಳಿಗೆ ಕಾರ್ಮಿಕರು ಪಿಕ್ಅಪ್ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದ್ದು, ಚಾಲಕ ಪಾನಮತ್ತನಾಗಿದ್ದುದೇ ಘಟನೆಗೆ ಕಾರಣವೆಂದು ತಿಳಿದು ಬಂದಿದೆ. ಅಸ್ಸಾಂ ಮೂಲದ 21 ಕಾರ್ಮಿಕರನ್ನು ಕಕ್ಕಬ್ಬೆಯಲ್ಲಿರುವ ತೋಟವೊಂದರಿಂದ ವಿರಾಜಪೇಟೆಯಲ್ಲಿರುವ ಮನೆಗಳಿಗೆ ಕರೆ ತರಲಾಗುತ್ತಿತ್ತು. ಈ ಸಂದರ್ಭ ಕಾವೇರಿ ಶಾಲೆ ಬಳಿ 5.55 ಗಂಟೆ ಸುಮಾರಿಗೆ ಏರು ದಾರಿಯಲ್ಲಿ ಪಿಕ್ಅಪ್ ಮಗುಚಿಕೊಂಡಿದೆ.
ಈ ಸಂದರ್ಭ ಪಿಕ್ಅಪ್ ಅಡಿಗೆ ಸಿಲುಕಿಕೊಂಡ 21 ಕಾರ್ಮಿಕರು ತೀವ್ರವಾಗಿ ಗಾಯಗೊಂಡರು. ತಂಡೋಪ ತಂಡವಾಗಿ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಕಾರ್ಮಿಕರನ್ನು ಹೊರತೆಗೆಯಲು ಹರಸಾಹಸ ಪಟ್ಟರು. ಗಾಯಾಳುಗಳಿಗೆ ವಿರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ 6 ಆಂಬ್ಯುಲೆನ್ಸ್ ವಾಹನದಲ್ಲಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಕರೆ ತಂದು ದಾಖಲಿಸಲಾಯಿತು.
ವೈದ್ಯರು ಮತ್ತು ದಾದಿಯರ ತಂಡ ತುರ್ತು ಚಿಕಿತ್ಸೆ ನೀಡಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿಯೇ ಇದೆ. ಕಾರ್ಮಿಕರು ರಕ್ತ ಸುರಿಸುತ್ತಾ ಕಣ್ಣೀರಿಡುತ್ತಿದ್ದ ದೃಶ್ಯ ಕಂಡು ಬಂತು. ವಿವಿಧ ಸಂಘ ಸಂಸ್ಥೆಗಳು ಕಾರ್ಮಿಕರ ನೆರವಿಗೆ ಮುಂದಾಗಿವೆ. ಒಂದೇ ಪಿಕ್ಅಪ್ ನಲ್ಲಿ 21 ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಚಾಲಕ ಪಾನಮತ್ತನಾಗಿದ್ದ. ಮಧ್ಯಾಹ್ನ ಗೆಳೆಯನ ಕೊಠಡಿಯಲ್ಲಿ ಪಾರ್ಟಿ ಮಾಡಿ ಪಾನಮತ್ತನಾಗಿದ್ದ ಚಾಲಕ ಅದೇ ಗುಂಗಿನಲ್ಲಿ ಸಂಜೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಚಾಲಕ ಕೂಡ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ. ವಿರಾಜಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೂವರು ಮಂಗಳೂರು ಆಸ್ಪತ್ರೆಗೆ ರವಾನೆ
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿರುವ ರುಕಿಯಾ, ರುಸಂದರ್ ಹಾಗೂ ಮುಸ್ಲಿಮಾದಿನ್ ಅವರುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಉಳಿದಂತೆ ಪಜಿದಾ, ನಸೀಮ, ರಸೀಮಾ, ಅಲ್ಮಿನ್, ತೌಸಿಲ್ ಅಬ್ದುಲ್ ರೆಹಮಾನ್, ಬಾನು, ಶಹಿರಾನ್ ಫೈಜಲ್, ಸುಪಿಆ, ಜಹೀದ್, ಮಜೀದ್, ಮುಸ್ತಾಕ್, ಸಂತೂರ್ ಸಾಲಿ ಸೇರಿದಂತೆ 21 ಮಂದಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಹಾಗೂ ನಗರ ಕಾಂಗ್ರೆಸ್ ಕಾರ್ಯಕರ್ತರು ಗಾಯಾಳುಗಳಿಗೆ ಸಹಾಯ ಹಸ್ತ ಚಾಚಿದ್ದು, ಸಾಂತ್ವನ ಹೇಳುತ್ತಿದ್ದಾರೆ. ಪಿಕ್ಅಪ್ ಚಾಲಕ ಬೋಪಣ್ಣ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.