ಮಡಿಕೇರಿ: ಕೊಡವರನ್ನು ಬುಡಕಟ್ಟು ಜನಾಂಗವೆಂದು ಗುರುತಿಸುವುದಕ್ಕಾಗಿ ಆರಂಭಗೊಂಡಿದ್ದ ಕೊಡವ ಕುಲಶಾಸ್ತ್ರ ಅಧ್ಯಯನವನ್ನು ತಡೆಹಿಡಿಯಲಾಗಿದ್ದು, ಇದನ್ನು ಮತ್ತೆ ಆರಂಭಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಗರದ ಕೋಟೆ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಿತು.
ಸಿಎನ್ಸಿ ಅಧ್ಯಕ್ಷರಾದ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ನಡೆದ ಸತ್ಯಾಗ್ರಹದಲ್ಲಿ ಸಿಎನ್ಸಿ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಕೊಡವ ಕುಲಶಾಸ್ತ್ರದ ಅಧ್ಯಯನವನ್ನು ಪುನರ್ ಆರಂಭಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾಚಪ್ಪ ಆಗ್ರಹಿಸಿದರು.
ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ 340 ಮತ್ತು 342ನೇ ವಿಧಿ ಪ್ರಕಾರ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಿ ರಾಜ್ಯಾಂಗ ಖಾತ್ರಿ ನೀಡಬೇಕೆಂದು ಒತ್ತಾಯಿಸಿ ಸಿಎನ್ಸಿ ಸಂಘಟನೆ ನಿರಂತರವಾಗಿ ನಡೆಸಿಕೊಂಡು ಬಂದ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ಕೊಡವರ ಸಮಗ್ರ ಕುಲಶಾಸ್ತ್ರ ಅಧ್ಯಯನಕ್ಕೆ ನಿರ್ದೇಶನ ನೀಡಿತ್ತು. ಇದಕ್ಕೆ ಸ್ಪಂದಿಸಿದ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಮಂತ್ರಾಲಯ ಅಧ್ಯಯನದ ಜವಾಬ್ದಾರಿಯನ್ನು ಮೈಸೂರಿನ ಬುಡಕಟ್ಟು ಸಂಶೋಧನಾ ಸಂಸ್ಥೆ, ಟ್ರೈಬಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಗೆ ವಹಿಸಿತ್ತು. ಈ ಸಂಸ್ಥೆಯು 2016 ನವೆಂಬರ್ 16 ರಿಂದ ಕೊಡಗಿನಲ್ಲಿ ಸರ್ವೇ ಕಾರ್ಯವನ್ನು ಆರಂಭಿಸಿತ್ತು. ಆದರೆ, ಡಿಸೆಂಬರ್ 16 ರಂದು ಮುಖ್ಯಮಂತ್ರಿಗಳ ದಿಢೀರ್ ಮೌಖಿಕ ಆದೇಶದ ಹಿನ್ನೆಲೆಯಲ್ಲಿ ಅಧ್ಯಯನ ಕಾರ್ಯ ಸ್ಥಗಿತಗೊಂಡಿತ್ತು. ಪಟ್ಟಭದ್ರ ಹಿತಾಸಕ್ತಿಗಳು ಷಡ್ಯಂತ್ರ ಹೂಡಿ, ಮುಖ್ಯಮಂತ್ರಿಗಳ ಮೇಲೆ ಪ್ರಭಾವ ಬೀರಿದ ಕಾರಣ ಈ ಬೆಳವಣಿಗೆ ಆಗಿದೆ ನಡೆದಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು.
ವಿಧಾನ ಮಂಡಲದಲ್ಲಿ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಸಚಿವರು ಮರು ಸರ್ವೇ ಕಾರ್ಯದ ಬಗ್ಗೆ ಭರವಸೆ ನೀಡಿದ್ದರು. ಆದರೆ, ತಿಂಗಳುಗಳು ಉರುಳಿದರು ಸರ್ವೇ ಪುನರಾರಂಭಗೊಳ್ಳದೆ ಇರುವುದರಿಂದ ಧರಣಿ ಸತ್ಯಾಗ್ರಹ ಆರಂಭಿಸಿರುವುದಾಗಿ ಎನ್.ಯು.ನಾಚಪ್ಪ ತಿಳಿಸಿದರು.
ಈ ಬೇಡಿಕೆಯೊಂದಿಗೆ ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್ ಗೆ ಸೇರಿಸುವಂತೆ ಅವರು ಒತ್ತಾಯಿಸಿದರು. ದೇಶದ 22 ಭಾಷೆಗಳನ್ನು 8ನೇ ಶೆಡ್ಯೂಲ್ ಗೆ ಸೇರಿಸಿದಂತೆ ಕೊಡವ ಭಾಷೆಯನ್ನು ಕೂಡ ಸೇರ್ಪಡೆಗೊಳಿಸಬೇಕೆಂದು ಅವರು ಹೇಳಿದರು.
ಈ ಸಂದರ್ಭ ಸಿಎನ್ಸಿಯ ಪದಾಧಿಕಾರಿಗಳು ಹಾಜರಿದ್ದು ಹಕ್ಕೋತ್ತಾಯ ಮಂಡಿಸಿದರು.