News Kannada
Tuesday, March 28 2023

ಕರ್ನಾಟಕ

ಡಿಸಿ ಕಚೇರಿ ತಲುಪಿದ ಪಾಲೇಮಾಡು ನಿವಾಸಿಗಳ ಪಾದಯಾತ್ರೆ : ಬಡವರ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ

Photo Credit :

ಡಿಸಿ ಕಚೇರಿ ತಲುಪಿದ ಪಾಲೇಮಾಡು ನಿವಾಸಿಗಳ ಪಾದಯಾತ್ರೆ : ಬಡವರ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ

ಮಡಿಕೇರಿ: ಹೊದ್ದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಾಲೇಮಾಡು ಕಾನ್ಶಿರಾಂ ನಗರದಲ್ಲಿ ಅಂಬೇಡ್ಕರ್ ಜಯಂತಿ ಸಂದರ್ಭ ನಡೆದ ಅಹಿತಕರ ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬಹುಜನ ಸಮಾಜ ಪಕ್ಷ ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಪಾಲೇಮಾಡಿನ ನಿವಾಸಿಗಳು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದರು.   

ಮೇ 2 ರಂದು ಪಾಲೇಮಾಡಿನಿಂದ ಆರಂಭಿಸಿದ ಪಾದಯಾತ್ರೆ ಇಂದು ಬೆಳಗ್ಗೆ ಮೇಕೇರಿಯಿಂದ ಆರಂಭಗೊಂಡು ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗ ಧರಣಿ ಸತ್ಯಾಗ್ರಹದೊಂದಿಗೆ ಮುಕ್ತಾಯಗೊಂಡಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಪ್ರಮುಖರಾದ ಸಿರಿಮನೆ ನಾಗರಾಜು ಮಾತನಾಡಿ, ಪಾಲೇಮಾಡು ನಿವಾಸಿಗಳ ನೈಜ ಬೇಡಿಕೆಗಳನ್ನು ಗೌರವಿಸಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪಾಲೇಮಾಡಿನ ಸ್ಮಶಾನದ ಜಾಗವನ್ನು ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ನೀಡಲು ಕಾಳಜಿ ತೋರಿದ ಜಿಲ್ಲಾಡಳಿತ ಕನಿಷ್ಠ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರವನ್ನು ನೀಡಲು ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಲು  ಸಾಧ್ಯವಾಗಿಲ್ಲವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ದಿಡ್ಡಳ್ಳಿಯಲ್ಲಿ ಹೋರಾಟಗಳನ್ನು ನಾವು ರೂಪಿಸಿಲ್ಲ. ಬದಲಾಗಿ, ಅಲ್ಲಿನ ನಿವಾಸಿಗಳು ತಮ್ಮ ನೋವನ್ನು ಹೊರಹಾಕಲು ಕಂಡುಕೊಂಡ ಪ್ರತಿಭಟನೆಯನ್ನು ನಾವು ಬೆಂಬಲಿಸಿದ್ದೇವೆ ಎಂದು ಸಿರಿಮನೆ ನಾಗರಾಜು ಸಮರ್ಥಿಸಿಕೊಂಡರು. ದಿಡ್ಡಳ್ಳಿಯ ಜಾಗ ಅರಣ್ಯದ್ದೆಂದು ಹೇಳುವ ಆಡಳಿತ ವ್ಯವಸ್ಥೆ ಇಲ್ಲಿಯವರೆಗೆ ಅದನ್ನು ಸಾಬೀತು ಪಡಿಸುವ ಕಾಗದ ಪತ್ರವನ್ನು ಹೊಂದಿಲ್ಲವೆಂದು ಆರೋಪಿಸಿದರು.

ಬಹುಜನ ಸಮಾಜ ಪಕ್ಷದ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಮಾತನಾಡಿ, ಅಂಬೇಡ್ಕರ್ ಜಯಂತಿಯಂದು ವಿವಿಧ ನಾಯಕರ ನಾಮಫಲಕಗಳನ್ನು ಕಿತ್ತು ಹಾಕಿ, ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿರುವುದನ್ನು ಖಂಡನೀಯವೆಂದರು. ಬಡಜನರ ಸಮಸ್ಯೆಗಳನ್ನು ಅರ್ಥೈಸಿಕೊಂಡು ಪರಿಹಾರ ಸೂಚಿಸಲಾಗದ ಶ್ರೀಮಂತ ಮನೆತನದ ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಂ ಅವರಿಗೆ ಬಡವರ ನೋವಿನ ಕೂಗು ಕೇಳಿಸುತ್ತಿಲ್ಲವೆಂದು ಟೀಕಿಸಿದರು.

ಅಂಬೇಡ್ಕರ್ ಸಂವಿಧಾನದ ಮೂಲ ಆಶಯ ಪ್ರತಿಯೊಬ್ಬ ಪ್ರಜೆಗೂ ಶಿಕ್ಷಣ, ಆರೋಗ್ಯ, ಬದುಕಿಗೊಂದು ನೆಲೆಯನ್ನು ಬದಗಿಸಬೇಕೆನ್ನುವುದೇ ಆಗಿದೆ. ಆದರೆ, ಇಲ್ಲಿನ ಬಡವರ್ಗದ ಮಂದಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳಿಂದಲೆ ವಂಚಿತರಾಗಿದ್ದಾರೆ. ಪಾಲೆೇಮಾಡಿನ ಸ್ಮಶಾನ ಜಾಗಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವರು ಸಮಸ್ಯೆ ಬಗೆಹರಿಸಿ ಬಡಮಂದಿಯ ಸಂಕಷ್ಟಕ್ಕೆ ಸ್ಪಂದಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು ಅವರು ಆ ಕೆಲಸವನ್ನು ಮಾಡಿಲ್ಲವೆಂದು ಮಾರಸಂದ್ರ ಮುನಿಯಪ್ಪ ಆರೋಪಿಸಿದರು.

ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಮಿನ್ ಮೊಹಿಸಿನ್ ಮಾತನಾಡಿ, ಬಡವರ್ಗ,  ದಲಿತರು ಮತ್ತು ಅಲ್ಪಸಂಖ್ಯಾತರ ಸಮಸ್ಯೆಗಳು ಬೇರೆ ಬೇರೆಯಲ್ಲ. ನಮ್ಮೆಲ್ಲ ಸಮಸ್ಯೆಗಳ ಬಗೆಹರಿಕೆಗೆ ನಿರಂತರವಾಗಿ ಹೋರಾಟಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ನಿರಂತರ ದೌರ್ಜನ್ಯ ನಡೆಸುವ ಮೂಲಕ ಬಡವರ ತಾಳ್ಮೆಯನ್ನು ಪರೀಕ್ಷಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಾದಯಾತ್ರೆ ಮತ್ತು ಧರಣಿಯಲ್ಲಿ ಪಾಲೇಮಾಡಿನ ನಿವಾಸಿ ಹಾಗೂ ಬಿಎಸ್ಪಿಯ ಕೆ. ಮೊಣ್ಣಪ್ಪ, ಬಿಎಸ್ಪಿ ರಾಜ್ಯಾಧ್ಯಕ್ಷ ಮಹೇಶ್, ಜಿಲ್ಲಾ ಅಧ್ಯಕ್ಷ ಪ್ರೇಂ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಕುಂಞಿ, ಮೋಹನ್ ಮೌರ್ಯ , ಎಸ್ಡಿಪಿಐನ ಮನ್ಸೂರ್, ಅಬ್ದುಲ್ ಅಡ್ಕಾರ್, ಕೆ.ಜಿ. ಪೀಟರ್, ದಸಂಸದ ಜಯಪ್ಪ ಹಾನಗಲ್ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.

See also  ಟ್ಯೂಷನ್ ಸೆಂಟರ್ ನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ: ಆರೋಪಿಗೆ 7 ವರ್ಷ ಜೈಲು

ಬೇಡಿಕೆಗಳು:
ಪಾದಯಾತ್ರೆ ಮತ್ತು ಧರಣಿ ಸತ್ಯಾಗ್ರಹದ ಮೂಲಕ ಪ್ರಮುಖ ನಾಲ್ಕು ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು. ಪಾಲೇಮಾಡು ಕಾನ್ಶಿರಾಂ ನಗರದ ನಿವಾಸಿಗಳಿಗೆ ಹಕ್ಕುಪತ್ರ ಮತ್ತು ನಾಗರಿಕ ಸೌಲಭ್ಯಗಳನ್ನು ಒದಗಿಸಬೇಕು, 2009ರಲ್ಲಿ ಸರ್ಕಾರದಿಂದ ಮಂಜೂರಾಗಿರುವ 4 ಏಕರೆ ಸ್ಮಶಾನ ಭೂಮಿಯನ್ನು ಕಾನ್ಶಿರಾಂ ನಗರದ ನಿವಾಸಿಗಳಿಗೆ ಬಿಟ್ಟುಕೊಡಬೇಕು. ಹೋರಾಟಗಾರ ಕೆ.ಮೊಣ್ಣಪ್ಪ ಮತ್ತಿತರರ ಮೇಲೆ ಹಾಕಿರುವ ಎಲ್ಲಾ ಸುಳ್ಳು ಕೇಸುಗಳನ್ನು ಹಿಂತೆಗೆದುಕೊಳ್ಳಬೇಕು, ಅಂಬೇಡ್ಕರ್ ಮತ್ತು ರಾಷ್ಟ್ರನಾಯಕರ ನಾಮಫಲಕ ಕಿತ್ತು ಹಾಕಿದ ಹೊದ್ದೂರು ಗ್ರಾಪಂ ಪಿಡಿಒ, ಸಿಐ, ಎಸ್ಐ ಅವರ ಮೇಲೆ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕರ್ತವ್ಯದಿಂದ ವಜಾಗೊಳಿಸಬೇಕೆಂದು ಆಗ್ರಹಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು