ಚಾಮರಾಜನಗರ: ವಿಶಿಷ್ಟ ಆಚರಣೆ, ಉತ್ಸವ ಹಾಗೂ ಸೇವೆಗಳಿಂದ ಕೂಡಿದ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಜಾತ್ರೆಯು ಮುತ್ತತ್ತಿರಾಯನ ಸೇವೆಯೊಂದಿಗೆ ಜಾತ್ರೆಗೆ ತೆರೆ ಬಿದ್ದಿದೆ.
ಮಳವಳ್ಳಿ ತಾಲೂಕು ಮುತ್ತತ್ತಿ ಕಾವೇರಿ ತೀರದಲ್ಲಿರುವ ಹನುಮಂತ ಹಾಗೂ ಸಿದ್ದಪ್ಪಾಜಿ ಸ್ನೇಹದ ಸಂಕೇತವಾಗಿ ಮುತ್ತತ್ತಿರಾಯನ ಸೇವೆ ನಡೆಯುತ್ತದೆ. ಸ್ನೇಹದ ಕುರುಹಾಗಿ ಸಿದ್ದಪ್ಪಾಜಿ ದೇವಾಲಯದ ಪಕ್ಕದಲ್ಲಿ ಹನುಮಂತನ ದೇವಾಲಯ ನಿರ್ಮಿಸಿ ಪೂಜಿಸಲಾಗುತ್ತಿದೆ.
ನಾಲ್ಕು ದಿನಗಳ ಕಾಲ ವಿಭೂತಿ ಧರಿಸಿ ಸಿದ್ದಪ್ಪಾಜಿ ಸೇವೆ ಮಾಡುವ ನೀಲಗಾರರು ಜಾತ್ರೆಯ ಕೊನೆಯ ದಿನ ನಾಮಧರಿಸಿ ಮುತ್ತತ್ತಿರಾಯನ ಸೇವೆಯನ್ನು ಮಾಡುತ್ತಾರೆ ಭಾವೈಕ್ಯತೆಯ ಪ್ರತೀಕವಾದ ಈ ಆಚರಣೆಯು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಸಿದ್ದಪ್ಪಾಜಿ ದೇವಸ್ಥಾನದ ಧರ್ಮದರ್ಶಿ ಪ್ರಭುದೇವರಾಜೇ ಅರಸ್ ಮುತ್ತತ್ತಿರಾಯನಿಗೆ ಪೂಜೆ ಸಲ್ಲಿಸಿದ ಬಳಿಕ ಭಕ್ತರ ದರ್ಶನಕ್ಕೆ ಮುಕ್ತಗೊಳಿಸಲಾಯಿತು. ತೆಳ್ಳನೂರು ಗ್ರಾಮದ ಮಾಯೇಗೌಡ ನೇತೃತ್ವದಲ್ಲಿ ಗೋವಿಂದೇಗೌಡ, ಮಹೇಶ್, ಕೆಂಚೇಗೌಡ, ಮುತ್ತುರಾಜು, ವೆಂಕಟರಾಜು ಮತ್ತಿತರರು ಸಂಪ್ರದಾಯದಂತೆ ಮುತ್ತುರಾಯನ ಸೇವೆ ಮಾಡಿದರು. ಹನುಮಂತ ಹಾಗೂ ಸಿದ್ದಪ್ಪಾಜಿಯು ನೂರಾರು ಭಕ್ತರು ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಣೆ ಮಾಡಿದರು. ನೀಲಗಾರರು ಸೇರಿದಂತೆ ನೂರಾರು ಭಕ್ತರು ಭಾಗವಹಿಸಿ ಜಾತ್ರೆಯನ್ನು ಯಶಸ್ವಿಗೊಳಿಸಿದರಲ್ಲದೆ ನಾಡಿನ ಜನತೆಗೆ ಒಳ್ಳೆಯದು ಮಾಡುವಂತೆ ಪ್ರಾರ್ಥಿಸಿದರು.