ಮಡಿಕೇರಿ: ಕೊಡವ ಮುಸ್ಲಿಂ ಅಸೋಸಿಯೇಷನ್(ಕೆ.ಎಂ.ಎ.)ನ 40ನೇ ವರ್ಷಾಚರಣೆಯ ಸಮಾರೋಪ ಸಮಾರಂಭ ಜು.7 ರಂದು ವೀರಾಜಪೇಟೆಯಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಮೈಸೂರು ಸಂಸ್ಥಾನದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ತಮ್ಮ 23ನೇ ವಯಸ್ಸಿನಲ್ಲೇ ಮೈಸೂರು ಸಂಸ್ಥಾನದ 27ನೇ ಮಹಾರಾಜರಾಗಿ ಸಿಂಹಾಸನವೇರಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪ್ರಪ್ರಥಮ ಬಾರಿಗೆ ವೀರಾಜಪೇಟೆಗೆ ಆಗಮಿಸುತ್ತಿದ್ದಾರೆ ಎಂದು ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದರೊಂದಿಗೆ ಕೆ.ಎಂ.ಎ. ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿ (ಕೆ.ಎಂ.ಇ.ಎಫ್.)ಯ ಸಹಯೋಗದಲ್ಲಿ ಪ್ರತಿ ವರ್ಷ ಜನಾಂಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ನಡೆಯುವ ‘ಕೆ.ಎಂ.ಎ. ಪ್ರತಿಭಾ ಪುರಸ್ಕಾರ-2019’ ವಿತರಣೆ ಮತ್ತು 40ನೇ ವರ್ಷಾಚರಣೆಯ ಅಂಗವಾಗಿ ಜನಾಂಗದ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮವೂ ಜರುಗಲಿದೆ ಎಂದು ಅವರು ಹೇಳಿದರು.
ಅಂದು ಬೆಳಗ್ಗೆ 10:30ರಿಂದ ವೀರಾಜಪೇಟೆಯ ಕಾವೇರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಡೆಯುವ ಸಮಾರಂಭವನ್ನು ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಅವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಕರ್ನಾಟಕ ಸರಕಾರದ ದೆಹಲಿಯ ವಿಶೇಷ ಪ್ರತಿನಿಧಿ ಸೈಯದ್ ಮೋಹಿದ್ ಅಲ್ತಾಫ್, ಕರಾಟೆ ಅಸೋಸಿಯೇಷನ್ ಅಫ್ ಇಂಡಿಯಾದ ಉಪಾಧ್ಯಕ್ಷರೂ ಆಗಿರುವ ವಿಧಾನಪರಿಷತ್ ಮಾಜಿ ಸದಸ್ಯ ಚೆಪ್ಪುಡಿರ ಅರುಣ್ ಮಾಚಯ್ಯ ಅವರು ಪಾಲ್ಗೊಳ್ಳಲಿದ್ದು, ಕೊಡಗು ಜಿ.ಪಂ.ನ ಮಾಜಿ ಸದಸ್ಯ ವಿ.ಪಿ.ಶಶಿಧರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕೊಡವ ಮುಸ್ಲಿಂ ಅಸೋಸಿಯೇಷನ್ನ ಸ್ಥಾಪಕಾಧ್ಯಕ್ಷ ಕುವೇಂಡ ವೈ. ಹಂಝತುಲ್ಲಾ ಅವರು ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ವಿವರಿಸಿದರು.
ಸಾಧಕರಿಗೆ ಸನ್ಮಾನ: ಸಂಸ್ಥೆಯ ವತಿಯಿಂದ ಪ್ರತಿ ವರ್ಷ ಜನಾಂಗದ ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತಿದ್ದು, ಅದರಂತೆ ಜನಾಂಗದ ಪ್ರಥಮ ಮಹಿಳಾ ಪಿ.ಹೆಚ್.ಡಿ. ಪದವೀಧರೆ ಮತ್ತು ಇದೀಗ ಮಂಡ್ಯದ ವಿ.ಸಿ.ಪಾರಂನ ಕೃಷಿ ಮಹಾವಿದ್ಯಾಲಯದಲ್ಲಿ ಬೇಸಾಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಪ್ರಾಧ್ಯಾಪಕಿ ಡಾ. ಪುಡಿಯಂಡ ಎಸ್. ಫಾತೀಮ ಅವರನ್ನು ಸಂಸ್ಥೆಯ 40ನೇ ವರ್ಷಾಚರಣೆಯ ಅಂಗವಾಗಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಗುವುದು. ಕೊಡಗು ಜಿಲ್ಲಾ ಖಜಾನಾಧಿಕಾರಿಗಳಾಗಿ ನಿವೃತ್ತರಾದ ವೀರಾಜಪೇಟೆ ಸಮೀಪದ ನಲ್ವತ್ತೊಕ್ಲುವಿನ ದುದ್ದಿಯಂಡ ಎಂ.ಉಸ್ಮಾನ್ ಹಾಜಿ ಮತ್ತು ಕನ್ನಡಿಯಂಡ ಎ.ಆಲಿ ಹಾಜಿ ಅವರನ್ನು ಅವರ ಸಾಧನೆಗಾಗಿ ಸಂಸ್ಥೆಯ ವತಿಯಿಂದ ಜನಾಂಗದ ಪರವಾಗಿ ಸನ್ಮಾನಿಸಿ ಗೌರವಿಸಲಾಗುವುದು. ಅಲ್ಲದೆ ವಿಜ್ಞಾನ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿರುವ ಮಡಿಕೇರಿಯ ಜವಾಹರ್ ನವೋದಯ ವಿದ್ಯಾಲಯದ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿ ದುದ್ದಿಯಂಡ ಎಂ. ಮೊಹಮ್ಮದ್ ಝಿಯಾನ್ ಮತ್ತು ಕಿರಿಯ ವಯಸ್ಸಿನಲ್ಲೇ ಕರಾಟೆಯಲ್ಲಿ ಸಾಧನೆಗೈದ ಬೆಂಗಳೂರಿನ ಜಯನಗರ ಕಾಲೇಜಿನ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿ ದುದ್ದಿಯಂಡ ಹೆಚ್. ಉವೈಸ್ ಅವರನ್ನು ‘ಯುವ ಸಾಧಕ’ರೆಂದು ಗುರುತಿಸಿ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗುವುದು ಡಿ.ಹೆಚ್. ಸೂಫಿ ತಿಳಿಸಿದರು.
ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕೆ.ಎಂ.ಎ. ಹಿರಿಯ ಉಪಾಧ್ಯಕ್ಷ ಆಲೀರ ಎ.ಅಹಮದ್ ಹಾಜಿ ಅವರು ಮಾತನಾಡಿ, ಕಾರ್ಯಕ್ರಮದಲ್ಲಿ ಕಳೆದ ದ್ವಿತೀಯ ಪಿ.ಯು.ಸಿ., ಎಸ್.ಎಸ್.ಎಲ್.ಸಿ. ಹಾಗೂ ಮದರಸಾ ವಿಭಾಗದ 5ನೇ, 7ನೇ ಮತ್ತು 10ನೇ ತರಗತಿಯ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದು ತೇರ್ಗಡೆ ಹೊಂದಿರುವ ಜನಾಂಗದ ಒಟ್ಟು 35 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕೆ.ಎಂ.ಎ. ಪ್ರತಿಭಾ ಪುರಸ್ಕಾರವನ್ನು ಪಾರಿತೋಷಕ ಮತ್ತು ನಗದು ಬಹುಮಾನಗಳೊಂದಿಗೆ ನೀಡಿ ಶೈಕ್ಷಣಿಕವಾಗಿ ಅವರನ್ನು ಉತ್ತೇಜಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಚಿಮ್ಮಿಚ್ಚೀರ ಕೆ. ಇಬ್ರಾಹಿಂ (ಉಮ್ಣಿ), ಕರ್ತೊರೆರ ಕೆ. ಮುಸ್ತಫಾ ಮತ್ತು ಪೊಯಕೆರ ಎಸ್. ಮೊಹಮ್ಮದ್ ರಫೀಕ್ ಅವರು ಉಪಸ್ಥಿತರಿದ್ದರು.