ಮಂಡ್ಯ: ಜಮೀನು ಸ್ವಾಧೀನಕ್ಕೆ ಪೊಲೀಸ್ ರಕ್ಷಣೆ ನೀಡಲು ರೈತನಿಂದ 22 ಸಾವಿರ ಲಂಚ ಸ್ವೀಕಾರ ಮಾಡುತ್ತಿದ್ದ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಎ.ಎಸ್.ಐ ಈರೇಗೌಡ ಅವರನ್ನು ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಲಂಚದ ಹಣದ ಸಮೇತ ಬಂಧಿಸಿರುವ ಘಟನೆ ಕೆ.ಆರ್.ಪೇಟೆಯಲ್ಲಿ ನಡೆದಿದೆ.
ತಾಲೂಕಿನ ಶೀಳನೆರೆ ಹೋಬಳಿಯ ಹೆಮ್ಮನಹಳ್ಳಿ ಗ್ರಾಮದ ರೈತ ಉಮೇಶಗೌಡ ಅವರು ಹೆಮ್ಮನಹಳ್ಳಿ ಗ್ರಾಮದಲ್ಲಿರುವ ತಮ್ಮ ಜಮೀನನ್ನು ಅಳತೆ ಮಾಡಿ ಸ್ವಾಧೀನಕ್ಕೆ ಪಡೆದುಕೊಳ್ಳಲು ಯಾವುದೇ ತಂಟೆ ತಕರಾರು ಬಾರದಂತೆ ಪೊಲೀಸ್ ರಕ್ಷಣೆ ನೀಡುವಂತೆ ಕೆ.ಆರ್.ಪೇಟೆ ತಹಸೀಲ್ದಾರ್ ಅವರು ಕಳೆದ ಆಗಸ್ಟ್ 31ರಂದು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ರೈತ ಉಮೇಶಗೌಡ ಅವರು ರಕ್ಷಣೆ ನೀಡುವಂತೆ ಎ.ಎಸ್.ಐ ಈರೇಗೌಡ ಅವರಲ್ಲಿ ಹಲವು ಬಾರಿ ಮನವಿ ಮಾಡಿದ್ದರು. ತಕರಾರು ಇರುವ ಜಮೀನಿಗೆ ರಕ್ಷಣೆ ನೀಡಬೇಕಾದರೆ 30ಸಾವಿರ ಲಂಚ ನೀಡಬೇಕು ಎಂದು ಕೇಳಿದ್ದಾರೆ. ಇದಕ್ಕೆ ನಿರಾಕರಿಸಿದ ರೈತನಿಗೆ ಕಳೆದ ಒಂದೂವರೆ ತಿಂಗಳಿನಿಂದಲೂ ರಕ್ಷಣೆ ನೀಡಲು ಒಂದಲ್ಲ ಒಂದು ಸಬೂಬು ಹೇಳುತ್ತಾ ಬಂದಿದ್ದರು.
ಕೊನೆಗೆ ರೈತ ಉಮೇಶಗೌಡ ಅವರು ನನ್ನ ಬಳಿ ಹಣವಿಲ್ಲ ಸಾಲಮಾಡಿ 20ಸಾವಿರ ಕೊಡುತ್ತೇನೆ ದಯಮಾಡಿ ಜಮೀನು ಸ್ವಾಧೀನಕ್ಕೆ ಪಡೆಯಲು ರಕ್ಷಣೆ ಕೊಡಿ ಎಂದು ಗೋಗರೆದು ಕೇಳಿಕೊಂಡಿದ್ದಾನೆ. ಆದರೂ ಸಹ ಎ.ಎಸ್.ಐ ಈರೇಗೌಡ ಅವರು 25ಸಾವಿರಕ್ಕೆ ಒಪ್ಪಿಕೊಂಡು ಅಡ್ವಾನ್ಸ್ ಆಗಿ 22ಸಾವಿರ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇದರಿಂದ ರೋಸಿಹೋದ ರೈತ ಉಮೇಶಗೌಡ ಅವರು ವಿಧಿಯಿಲ್ಲದೆ ಭ್ರಷ್ಟ ಪೊಲೀಸ್ ಅಧಿಕಾರಿಗೆ ಬುದ್ದಿ ಕಲಿಸಬೇಕೆಂದು ತೀರ್ಮಾನಿಸಿ ಮಂಡ್ಯ ಭ್ರಷ್ಠಾಚಾರ ನಿಗ್ರಹ ದಳ (ಎಸಿಬಿ) ಇಲಾಖೆಗೆ ಅ.21ರಂದು ಬೆಳಗ್ಗೆ ದೂರು ನೀಡಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ಅ.21 ರಂದು ಸೋಮವಾರ ಸಂಜೆ ಸುಮಾರು 5.30ಗಂಟೆ ಸಮಯದಲ್ಲಿ ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರ ಕಚೇರಿಯ ದ್ವಾರದ ಮುಂಭಾಗದಲ್ಲಿ ರೈತ ಉಮೇಶಗೌಡ ಅವರಿಂದ ಎ.ಎಸ್.ಐ ಈರೇಗೌಡ ಅವರು 22ಸಾವಿರ ರೂಗಳನ್ನು ಲಂಚ ಸ್ವೀಕರಿಸುತ್ತಿದ್ದಾಗ ದಿಢೀರ್ ದಾಳಿ ನಡೆಸಿದ ಭ್ರಷ್ಠಾಚಾರ ನಿಗ್ರಹ ದಳ ಇಲಾಖೆಯ ಎಸ್.ಪಿ ಜಿ.ಕೆ.ರಶ್ಮಿ ಅವರ ಮಾರ್ಗದರ್ಶನದಲ್ಲಿ ಎಸಿಬಿ ಡಿ.ಎಸ್.ಪಿ ಮಂಜುನಾಥ್, ಇನ್ಸ್ಪೆಕ್ಟರ್ ರವರಾದ ಸತೀಶ್, ರವಿಶಂಕರ್, ಸಿಬ್ಬಂದಿ ವೆಂಕಟೇಶ್, ಮಹಾದೇವ್, ಪಾಪಣ್ಣ, ಮಹೇಶ್ ನೇತೃತ್ವದ ಎಸಿಬಿ ಅಧಿಕಾರಿಗಳ ತಂಡವು ಈರೇಗೌಡ ಅವರನ್ನು ಲಂಚದ ಹಣ ಸಮೇತ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆ ಕುರಿತು ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.