ಕಾಸರಗೋಡು: ಕನ್ನಡ ಮಾಧ್ಯಮ ತರಗತಿಗೆ ಕನ್ನಡ ಬಲ್ಲ ಅಧ್ಯಾಪಕರನ್ನೇ ನೇಮಕ ಮಾಡಬೇಕು, ಕನ್ನಡ ಮಾಧ್ಯಮ ಪ್ಲಸ್ ವನ್ ಸಮತ್ವ ಪರೀಕ್ಷೆಯನ್ನು ಕನ್ನಡದಲ್ಲಿಯೇ ನಡೆಸಬೇಕೆಂದು ಆಗ್ರಹಿಸಿ ಕಾಸರಗೋಡು ಜಿಲ್ಲಾ ಪಂಚಾಯತು ನಿಯೋಗ ರಾಜ್ಯ ಶಿಕ್ಷಣ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ರಾಜ್ಯ ಕಲೋತ್ಸವದ ಸ್ವಾಗತ ಸಮಿತಿ ಸಭೆಗೆಂದು ಕಾಂಞಂಗಾಡಿಗೆ ತಲುಪಿದ ರಾಜ್ಯ ಶಿಕ್ಷಣ ಸಚಿವ ರವೀಂದ್ರನಾಥ್ ಅವರನ್ನು ಕಾಸರಗೋಡು ಜಿ.ಪಂ.ಅಧ್ಯಕ್ಷ ಎಜಿಸಿ ಬಶೀರ್ ನೇತೃತ್ವದ ಜಿ.ಪಂ.ಸದಸ್ಯರ ತಂಡ ಭೇಟಿ ಮಾಡಿ , ಜಿಲ್ಲೆಯ ಕನ್ನಡ ಭಾಷಾ ವಿದ್ಯಾರ್ಧಿಗಳು ಅನುಭವಿಸುವ ಸಮಸ್ಯೆಗಳನ್ನು ಗಮನಕ್ಕೆ ತಂದರು. ಕನ್ನಡ ತರಗತಿಗೆ ಕನ್ನಡ ಅರಿಯದ ಅಧ್ಯಾಪಕರನ್ನು ನೇಮಕ ಮಾಡುವ ಪಿಎಸ್ ಸಿ ಪ್ರಕ್ರಿಯೆಯನ್ನು ತಡೆಹಿಡಿಯುವಂತೆಯೂ, ಕನ್ನಡ ಮಾಧ್ಯಮ ಹೈಯ್ಯರ್ ಸೆಕೆಂಡರಿ ಸಮತ್ವ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿಯೇ ನಡೆಸುವಂತೆ ಆಗ್ರಹಿಸಲಾಯಿತು.
ನಿಯೋಗದಲ್ಲಿ ಉಪಾಧ್ಯಕ್ಷೆ ಶಾಂತಮ್ಮ ಪಿಲಿಫ್, ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಶಾನವಾಜ್ ಪಾದೂರ್, ಸದಸ್ಯರಾದ ಶ್ರೀಕಾಂತ್, ನಾರಾಯಣನ್, ಇ.ಪದ್ಮಾವತಿ, ಝುಬೈದಾ, ಜಿ.ಪಂ.ಕಾರ್ಯದರ್ಶಿ ನಂದಕುಮಾರ್ ಜತೆಗಿದ್ದರು. ಸಮತ್ವ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿಯೇ ನಡೆಸಲು ಕ್ರಮ ಕೈಗೊಳ್ಳಲಾಗುವುದೆಂದು ಅವರು ಭರವಸೆ ನೀಡಿದರು.
ಕನ್ನಡ ಭಾಷೆ ಅರಿಯದ ಅಧ್ಯಾಪಕರ ನೇಮಕಾತಿಯ ಕುರಿತು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದರು.