ಮಡಿಕೇರಿ: ಮೈಕ್ರೋ ಫೈನಾನ್ಸ್ಗಳು ಸಾಲ ಮರುಪಾವತಿಸುವಂತೆ ಕಾರ್ಮಿಕ ವರ್ಗಕ್ಕೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿರುವ ಮಾನವ ಹಕ್ಕುಗಳ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಅಪ್ಪನೆರವಂಡ ಶಾಂತಿ ಅಚ್ಚಪ್ಪ, ಕಿರುಕುಳದ ವಿರುದ್ಧ ನ.18 ರಂದು ವೀರಾಜಪೇಟೆ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ಗಳು ಸಂಘದ ರೂಪದಲ್ಲಿ ಕಾರ್ಮಿಕ ವರ್ಗಕ್ಕೆ ಹಣ ನೀಡಿ, ವಾರದ ಕಂತಿನಲ್ಲಿ ಶೇ.18 ರಿಂದ 23ರಷ್ಟು ಬಡ್ಡಿದರವನ್ನು ವಸೂಲಿ ಮಾಡುತ್ತಿದೆ. ಇದನ್ನು ನೀಡಲು ಸಾಧ್ಯವಾಗದೆ ಇರುವ ಕಾರ್ಮಿಕರಿಗೆ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿದರು.
ಮೈಕ್ರೋ ಫೈನಾನ್ಸ್ ಕಂಪೆನಿಯ ಸಿಬ್ಬಂದಿಗಳು ಕಾರ್ಮಿಕರಿರುವ ಸ್ಥಳಕ್ಕೆ ತೆರಳಿ ಮತ್ತು ಮನೆಯ ಮುಂದೆ ನಿಂತು ಹಣ ನೀಡುವಂತೆ ಒತ್ತಡ ಹೇರುತ್ತಿರುವುದಲ್ಲದೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಜಿಲ್ಲೆಯ ಕಾರ್ಮಿಕ ವರ್ಗ ಸಂಕಷ್ಟವನ್ನು ಎದುರಿಸುತ್ತಿದ್ದರು ಸರ್ಕಾರ ಸಾಲ ಮರುಪಾವತಿಗೆ ಒತ್ತಡ ಹೇರಬಾರದೆಂದು ಹೇಳಿದ್ದರು ಕಿರುಕುಳ ಮುಂದುವರೆದಿದೆ. ಇದನ್ನು ಖಂಡಿಸಿ ನ.18 ರಂದು ಬೆಳಗ್ಗೆ 10 ಗಂಟೆಗೆ ವೀರಾಜಪೇಟೆಯ ಮಾರಿಯಮ್ಮ ದೇವಸ್ಥಾನದ ಬಳಿಯಿಂದ ತಹಶೀಲ್ದಾರ್ ಕಛೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದೆಂದು ಶಾಂತಿ ಅಚ್ಚಪ್ಪ ತಿಳಿಸಿದರು.
ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ಗಳ ಧೋರಣೆಯಿಂದ ಕಾರ್ಮಿಕ ಸಮೂಹ ಬೇಸತ್ತಿದ್ದು, ಇವುಗಳಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಬಡವರ್ಗದ ಮಂದಿಗೆ ಸಾಲ ನೀಡಿ ಶೋಷಣೆ ಮಾಡುತ್ತಿರುವ ಮೈಕ್ರೋ ಫೈನಾನ್ಸ್ಗಳು ನೋಂದಣಿಯಾಗಿವೆಯೇ ಎನ್ನುವ ಬಗ್ಗೆ ಪ್ರತಿಭಟನೆಯ ಮೂಲಕ ಈ ಹಿಂದೆ ಮಾಹಿತಿ ಬಯಸಿದ್ದೆವು. ಆದರೆ ಇಲ್ಲಿಯವರೆಗೂ ಯಾವುದೇ ಮಾಹಿತಿಯನ್ನು ಮೈಕ್ರೋ ಫೈನಾನ್ಸ್ಗಳು ನೀಡಿಲ್ಲ ಮತ್ತು ಈ ಬಗ್ಗೆ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲವೆಂದು ಶಾಂತಿಅಚ್ಚಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಸಮಿತಿಯ ಜಿಲ್ಲಾ ಅಧ್ಯಕ್ಷೆ ಪಡಿಕಲ್ ಕುಸುಮಾವತಿ ಮಾತನಾಡಿ, ಮೈಕ್ರೋ ಫೈನಾನ್ಸ್ಗಳು ಪ್ರಮುಖವಾಗಿ ಬಡವರ್ಗದವರನ್ನು ಗುರಿಯಾಗಿಸಿಕೊಂಡು ಮಹಿಳೆಯರಿಗೆ ಮಾತ್ರ ಸಾಲವನ್ನು ಒದಗಿಸುತ್ತದೆ ಮತ್ತು ಹೆಚ್ಚಿನ ಬಡ್ಡಿ ಹಣವನ್ನು ವಸೂಲಿ ಮಾಡಲು ನಂತರದ ದಿನಗಳಲ್ಲಿ ಕಿರುಕುಳವನ್ನು ನೀಡುತ್ತಿರುವುದಾಗಿ ಆರೋಪಿಸಿದರು.
ಸಮಿತಿಯ ಪ್ರಮುಖರಾದ ಪರ್ಮಾಲೆ ಗಣೇಶ್ ಮಾತನಾಡಿ, ಪ್ರಸ್ತುತ ಜಿಲ್ಲಾ ವ್ಯಾಪ್ತಿಯಲ್ಲಿ ಕಾಫಿ, ಕರಿಮೆಣಸು ಮೊದಲಾದ ಕೃಷಿ ಚಟುವಟಿಕೆಗಳಿಗೆ ಹವಾಮಾನ ವೈಫರೀತ್ಯಗಳಿಂದ ಹಿನ್ನಡೆಯಾಗಿದೆ. ಇದರಿಂದ ಕಾರ್ಮಿಕರಿಗೆ ಅಗತ್ಯ ಕೆಲಸ ದೊರಕುತ್ತಿಲ್ಲವಾದ್ದರಿಂದ ಪಡೆದ ಸಾಲವನ್ನು ಸಕಾಲದಲ್ಲಿ ಪಾವತಿಸಲು ತೊಡಕುಂಟಾಗುತ್ತಿದೆ. ಇಂತಹ ಸಂದರ್ಭ ಸಾಲ ಮರುಪಾವತಿಗೆ ಕಿರುಕುಳ ನೀಡುವುದು ಸರಿಯಲ್ಲ, ಕನಿಷ್ಠ ನಾಲ್ಕೈದು ತಿಂಗಳ ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿದರು.
ಸುದ್ದಿ ಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಪುಷ್ಪ ಹಾಗೂ ಮನು ಗೌಡ ಉಪಸ್ಥಿತರಿದ್ದರು.