ಕಾಸರಗೋಡು: ಡಿಸೆಂಬರ್ 26ರಂದು ನಡೆಯುವ ಸೂರ್ಯ ಗ್ರಹಣವನ್ನು ಸ್ಪಷ್ಟವಾಗಿ ವೀಕ್ಷಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತೆ ವ್ಯವಸ್ಥೆ ಏರ್ಪಡಿಸಲಿದೆ.
ಅತ್ಯಂತ ಸ್ಪಷ್ಟವಾಗಿ ಈ ಗ್ರಹಣವನ್ನು ವೀಕ್ಷಿಸಬಹುದಾದ ಜಗತ್ತಿನ ಮೂರು ಪ್ರಮುಖ ಸ್ಥಳಗಳಲ್ಲಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಚೆರುವತ್ತೂರು, ಕಾಡಂಗೋಡಿನ ಸಾರ್ವಜನಿಕ ಪ್ರದೇಶದಲ್ಲಿ ವೀಕ್ಷಣೆಗಿರುವ ಸರ್ವ ಸಿದ್ಧತೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿ ದ್ದಾರೆ.
ಬೆಳಗ್ಗೆ 8.04ಕ್ಕೆ ಆರಂಭಗೊಳ್ಳುವ ಭಾಗಶಃ ಗ್ರಹಣ 9.25ರ ವೇಳೆಗೆ ಪೂರ್ಣ ರೂಪ ತಲಪಲಿದೆ. ಮೂರು ನಿಮಿಷ, 12 ಸೆಕಂಡ್ ವರೆಗೆ ಮುಂದುವರಿದು 11.04ರ ವೇಳೆಗೆ ಸಮಾಪ್ತಿಗೊಳ್ಳಲಿದೆ. ಮಂಗಳೂರಿನಿಂದ ಬೇಪೂರು ವರೆಗಿನ ವಲಯಗಳಲ್ಲಿ ಅರ್ಧಾಂಶವಾಗಿ ಗೋಚರಿಸಲಿದೆ. ಖತಾರ್, ಯು.ಎ.ಇ., ಒಮಾನ್ ದೇಶಗಳಲ್ಲಿ ಗ್ರಹಣ ಆರಂಭಗೊಳ್ಳಲಿದೆ. ಕಣ್ಣೂರು ವಯನಾಡ್ ಜಿಲ್ಲೆಗಳ ಮಾತಮಂಗಲಂ, ಪನ್ನಿಯೂರು, ಪೇರಾವೂರು, ಮೀನಾಂಗಾಡಿ, ಚುಳ್ಳಿಯೋಡ್ ಪ್ರದೇಶಗಳಲ್ಲಿ ಈ ದೃಶ್ಯ ಕಾಣಬಹುದಾಗಿದೆ. ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲೂ, ಕೋಟೆಪಟ್ಟಣಂ ಮೂಲಕ ದೇಶವನ್ನೂ ದಾಟಿ ಶ್ರೀಲಂಕಾ, ಮಲೇಷ್ಯಾ, ಸಿಂಗಾಪುರ ಸಹಿತ ದೇಶಗಳಲ್ಲೂ ಈ ದೃಶ್ಯವಿಸ್ಮಯ ಗೋಚರವಾಗಲಿದೆ.
ಭಾರತದಲ್ಲಿ ಪ್ರಥಮ ಬಾರಿಗೆ ಕಾಣಿಸಲಿರುವುದು ಜಿಲ್ಲೆಯ ಚೆರುವತ್ತೂರಿನಲ್ಲಿ ಎಂಬುದು ವಿಶೇಷ. ಈ ಪ್ರದೇಶದ ಭೌಗೋಲಿಕ ವಿಶೇಷತೆಯಿಂದಾಗಿ ಈ ದೃಶ್ಯ ಇಲ್ಲಿ ಸ್ಪಷ್ಟವಾಗಿ ಗೋಚರವಾಗಲು ಕಾರಣ ಎಂದು ತಾಂತ್ರಿಕ ಸೌಲಭ್ಯಗಳೊಂದಿಗೆ ಗ್ರಹಣವೀಕ್ಷಣೆಗೆ ವ್ಯವಸ್ಥೆ ಏರ್ಪಡಿಸುವ ಸ್ಪೇಸ್ ಇಂಡಿಯಾ ಸಂಸ್ಥೆಯ ಸಿ.ಎಂ.ಡಿ.ಸಚಿನ್ ಬಂಬೆ ತಿಳಿಸಿದರು.
ಜ್ಯೋತಿರ್ ವಿಜ್ಞಾನ ಕುರಿತು ಸಾರ್ವಜನಿಕ ವಲಯದಲ್ಲಿ ಹರಡಿಕೊಂಡಿರುವ ತಪ್ಪುಕಲ್ಪನೆ ವಿರುದ್ಧ ಜಾಗೃತಿ ಮೂಡಿಸುವ ಮತ್ತು ಆಸ್ಟ್ರೋ ಟ್ಯುರಿಸಂ ಪ್ರಚಾರಕರಾಗಿ ಸಚಿನ್ ಬಂಬೆ ಚಟುವಟಿಕೆ ನಡೆಸುತ್ತಿದ್ದಾರೆ.
ನೇರ ಕಂಗಳಿಂದ ಸೂರ್ಯಗ್ರಹಣ ನೋಡದಿರಿ
ಸೂರ್ಯಗ್ರಹಣವನ್ನು ನೇರವಾಗಿ ನಮ್ಮ ಕಣ್ಣುಗಳಿಂದ ವೀಕ್ಷಿಸಬಾರದು ಎಂದು ಸ್ಪೇಸ್ ಇಂಡಿಯಾ ಸಂಸ್ಥೆಯ ಸಿ.ಎಂ.ಡಿ.ಸಚಿನ್ ಬಂಬೆ ಮುನ್ನೆಚ್ಚರಿಕೆ ನೀಡಿದ್ದಾರೆ. ಪೂರ್ಣಗ್ರಹಣ ವೇಳೆ ಹಬ್ಬುವ ಕತ್ತಲ ಸಂದರ್ಭ ಸಾರ್ವಜನಿಕರು ತಮ್ಮ ತಮ್ಮ ತಾಣಗಳಿಂದ ಹೊರಗಿಳಿಯಬಾರದು ಎಂದವರು ನುಡಿದರು. ಪೂರ್ಣಗ್ರಹಣ ಕೊನೆಗೊಂಡ ವೇಳೆ ಸೂರ್ಯ ಕಿರಣಗಳು ದೊಡ್ಡ ಪ್ರಮಾಣದಲ್ಲಿ ನೇರವಾಗಿ ಕಣ್ಣಿಗೆ ತಾಕುವ ಭೀತಿಯಿದೆ. ಬೆಳಕು ಕಡಿಮೆಯಿರುವ ಸಂದರ್ಭ ಕಂಗಳ ಒಳಭಾಗ ವಿಕಸಿತಗೊಂಡಿರುವ ವೇಳೆ ದೊಡ್ಡ ಪ್ರಮಾಣದಲ್ಲಿ ರವಿಕಿರಣಗಳು ಕಂಗಳಿಗೆ ಬಿದ್ದರೆ ದೃಷ್ಟಿಗೆ ತೊಂದರೆಯುಂಟಾಗುವ ಭೀತಿಯಿದೆ ಎಂದವರು ತಿಳಿಸಿದರು.
ಕಂಗಳಿಗೆ ರಕ್ಷಣೆನೀಡಬಲ್ಲ ಉಪಕರಣಗಳನ್ನು ಬಳಸಿ ಮಾತ್ರ ಸೂರ್ಯಗ್ರಹಣ ವೀಕ್ಷಣೆ ನಡೆಸುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸಾರ್ವಜನಿಕರಿಗೆ ಸಲಹೆ ಮಾಡಿದ್ದಾರೆ. ಗ್ರಹಣ ವೀಕ್ಷಣೆಗೆ ಚೆರುವತ್ತೂರಿನ ಕಾಡಂಗೋಡಿನಲ್ಲಿ ವೈಜ್ಞಾನಿಕ ರೀತಿಯ ಸೌಲಭ್ಯ ಏರ್ಪಡಿಸಿದ್ದು, ಸಾರ್ವಜನಿಕರು ಈ ಸೌಲಭ್ಯ ಬಳಸುವಂತೆ ಮನವಿ ಮಾಡಲಾಗಿದೆ.