ಮಡಿಕೇರಿ: ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಕಬ್ಬಿಣದ ಏಣಿಗೆ ವಿದ್ಯುತ್ ತಂತಿ ತಗುಲಿ ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ನೆಲ್ಯಹುದಿಕೇರಿಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ನಲ್ವತೇಕ್ರೆಯ ಬರಡಿ ಗ್ರಾಮದ ರಾಜನ್ (45) ಎಂಬವರೆ ಸಾವನ್ನಪ್ಪಿರುವ ದುರ್ದೈವಿ. ನೆಲ್ಲಿಹುದಿಕೇರಿ ಗ್ರಾಮದ ಪ್ರಕಾಶ್ ಎಂಬವರ ಅತ್ತಿಮಂಗಲ ಕಾಫಿ ತೋಟದಲ್ಲಿ ಕಬ್ಬಿಣದ ಏಣಿಯೊಂದಿಗೆ ರಾಜನ್ ಕಾರ್ಯನಿರ್ವಹಿಸುತ್ತಿದ್ದರು.
ಈ ಸಂದರ್ಭ ಇವರು ಹಿಡಿದಿದ್ದ ಏಣಿಗೆ 11 ಕೆ.ವಿ. ವಿದ್ಯುತ್ ತಂತಿ ಸ್ಪರ್ಶಿಸಿ ದುರ್ಘಟನೆ ಸಂಭವಿಸಿದೆ. ಕೂಡಲೇ ಪಕ್ಕದ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರು ಸ್ಥಳಕ್ಕಾಗಮಿಸಿ ರಾಜನ್ ಜೀವ ರಕ್ಷಣೆಗೆ ಮುಂದಾದರು ಅದು ಫಲಕಾರಿಯಾಗಲಿಲ್ಲ.
ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ ಬೋಜಪ್ಪ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.