ಮಂಡ್ಯ: 2020 ಅಕ್ಟೋಬರ್ ತಿಂಗಳ ಸಕಾಲ ಸಪ್ತಾಹವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಅಡಿಯಲ್ಲಿ ರಾಜ್ಯದಾದ್ಯಂತ ನವೆಂಬರ್ 30 ರಿಂದ ಡಿಸೆಂಬರ್ 05 ವರೆಗೆ ಆಚರಿಸಲಿದ್ದು, ವೀಡಿಯೋ ಕಾನ್ಫರೆನ್ಸ್ನ ಮೂಲಕ ಸಕಾಲ ಸಭೆಯನ್ನು ಸಕಾಲ ಸಚಿವರು ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಕಾಲ ವಿಲೇವಾರಿ ಪ್ರಮಾಣದಲ್ಲಿ ಮಂಡ್ಯ ಜಿಲ್ಲೆ ಉತ್ತಮ ಪ್ರದರ್ಶನ ಹಾಗೂ ಸಕಾಲ ಸಪ್ತಾಹದಲ್ಲಿ ಮಂಡ್ಯ ಪ್ರಥಮ ಸ್ಥಾನ ಪಡೆದ ಹಿನ್ನಲೆಯಲ್ಲಿ ಸಚಿವರು ಜಿಲ್ಲಾಧಿಕಾರಿಗಳಿಗೆ ಅಭಿನಂದನೆ ತಿಳಿಸಿದರು.
ಸಕಾಲ ಅಡಿಯಲ್ಲಿ ಒಟ್ಟು 98 ಇಲಾಖೆಗಳು ಮತ್ತು 1025 ಸೇರ್ಪೆಡೆಯಾದ ಸೇವೆಗಳಿದ್ದು, ಸಕಾಲ ಅರ್ಜಿಗಳ ವಿಲೇವಾರಿ ಪ್ರಮಾಣವು ಅಕ್ಟೋಬರ್ 2020 ಮಾಹೆಯಲ್ಲಿ ಶೇ.95.78ರಷ್ಟು ಆಗಿದೆ. ಈ ತಿಂಗಳಲ್ಲಿ 22,21,919 ಅರ್ಜಿಗಳು ಸ್ವೀಕೃತಗೊಂಡು, 22,41,057 ಅರ್ಜಿಗಳು ವಿಲೇವಾರಿಯಾಗಿವೆ ಮತ್ತು 21,46,380 ಅರ್ಜಿಗಳು ನಿಗದಿತ ಸಮಯದಲ್ಲಿ ವಿಲೇವಾರಿಗೊಂಡಿವೆ.
ಸಕಾಲ ಸಪ್ತಾಹ ಕುರಿತು ಮಾತನಾಡಿದ ಸಕಾಲ ಸಚಿವರು ರಾಜ್ಯದ 30 ಜಿಲ್ಲೆಯಲ್ಲಿ,್ಲ ಮಂಡ್ಯ ಜಿಲ್ಲೆಯು ಸಕಾಲ ಸಪ್ತಾಹದಲ್ಲಿ ಉತ್ತಮ ಪ್ರದರ್ಶನ ತೋರಿ ಪ್ರಥಮ ಸ್ಥಾನವನ್ನು ಪಡೆದಿದೆ, ಎರಡನೇ ಸ್ಥಾನವು ಚಿಕ್ಕಮಗಳೂರು, ಮೂರನೇ ಸ್ಥಾನ ಚಿಕ್ಕಬಳ್ಳಾಪುರ ಪಡೆದಿದೆ ಮತ್ತು ಕೊನೆಯ ಸ್ಥಾನವನ್ನು ಬೆಂಗಳೂರು ನಗರ ಪಡೆದಿದ್ದು, ಬೀದರ್ ಜಿಲ್ಲೆಯು 29ನೇ ಸ್ಥಾನ, ರಾಯಚೂರು ಜಿಲ್ಲೆಯು 28ನೇ ಸ್ಥಾನವನ್ನು ಪಡೆದಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿಗಳಾದ ಎಂ.ವಿ.ವೆಂಕಟೇಶರವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಯ ಮುಖ್ಯಸ್ಥರುಗಳ ಜೊತೆ ಸಭೆ ನಡೆಸಿ ಸಕಾಲ ಸಪ್ತಾಹ ಕುರಿತು ಚರ್ಚಿಸಿದರು.
ವೀಡಿಯೋ ಕಾನ್ಫರೆನ್ಸ್ ಸಭೆಯ ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು ಮಂಡ್ಯ ಜಿಲ್ಲೆಯು ಮೊದಲನೇ ಸ್ಥಾನ ಪಡೆದಿರುವುದು ಸಂತೋಷದ ವಿಷಯವಾಗಿದೆ. ಜಿಲ್ಲೆಯ ವಿವಿಧ ಇಲಾಖೆಗಳು ಸಕಾಲ ಸಪ್ತಾಹದಡಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು ಇದನ್ನು ನಿರಂತರವಾಗಿ ಉಳಿಸಿಕೊಂಡು ಹೋಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶೈಲಜಾ, ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿಗಳಾದ ಡಿ.ಪ್ರಕಾಶ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.