ಕಾಸರಗೋಡು: ಸ್ಥಳದ ಕುರಿತು ನೀಡಿದ್ದ ದೂರಿಗೆ ಪರಿಹಾರ ಕಲ್ಪಿಸದಿರುವುದನ್ನು ಪ್ರತಿಭಟಿಸಿ ವೃದ್ಧರೋರ್ವರು ಮೊಬೈಲ್ ಟವರ್ ಮೇಲೇರಿ ಆತ್ಮಹತ್ಯೆ ಬೆದರಿಕೆಯೊಡ್ಡಿದ ಘಟನೆ ಸೋಮವಾರ ಬೆಳಗ್ಗೆ ಬದಿಯಡ್ಕದಲ್ಲಿ ನಡೆದಿದೆ.
ನಾರಂಪಾಡಿ ನೆಲ್ಯಡ್ಕದ ಮೋಹನ್ ದಾಸ್ ಎಂಬವರು ಬೆಳಗ್ಗೆ ಬದಿಯಡ್ಕ ಪೇಟೆಯಲ್ಲಿನ ಟವರ್ ಗೇರಿ ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳಕ್ಕೆ ತಲಪಿದ ಪೊಲೀಸರು ಹಾಗೂ ಕಂದಾಯ ಅಧಿಕಾರಿ ಕೆಳಗಿಳಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ಗಂಟೆಗಳ ಕಾಲ ಪೊಲೀಸ್ , ಅಗ್ನಿಶಾಮಕ ದಳ ಹಾಗೂ ಕಂದಾಯ ಅಧಿಕಾರಿಗಳನ್ನು ಸುಸ್ತಾಗಿಸುವಂತೆ ಮಾಡಿತು. ಕೊನೆಗೆ ಜಿಲ್ಲಾಧಿಕಾರಿಯವರ ಜೊತೆ ಮಾತುಕತೆ ನಡೆಸುವ ಅನುಮತಿ ನೀಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮೋಹನ್ ದಾಸ್ ಕೆಳಗಿಳಿದರು.
ಎರಡು ವರ್ಷಗಳ ಹಿಂದೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ ಆವರಣದ ಟವರ್ ಗೇರಿ ಆತ್ಮಹತ್ಯೆ ಬೆದರಿಕೆಯೊಡ್ಡಿದ್ದರು.
ಮೋಹನ್ ದಾಸ್ ಅವರ ಸ್ಥಳವೊಂದು ಕಂದಾಯ ಅಧಿಕಾರಿಗಳು ತಾಂತ್ರಿಕ ಕಾರಣವೊಡ್ಡಿ ಜಫ್ತಿ ನಡೆಸಿದ್ದು, ಇದನ್ನು ಪಡೆಯಲು ಮೋಹನ್ ದಾಸ್ ಹಲವು ಬಾರಿ ಕಚೇರಿಗಳಿಗೆ ಅಲೆದಾಡಿದರೂ ಪ್ರಯೋಜನವಾಗಲಿಲ್ಲ. ಇದರಿಂದ ಬೇಸತ್ತು ಮೋಹನ್ ದಾಸ್ ಟವರ್ ಹತ್ತಿ ಪ್ರತಿಭಟನೆಗೆ ಮುಂದಾಗಿದ್ದಾರೆ.