ಕಾರವಾರ: ಗ್ರಾಮ ಪಂಚಾಯತ್ಗಳ 2ನೇ ಹಂತದ ಸಾರ್ವತ್ರಿಕ ಚುನಾವಣೆಯ ಅಧೀಸೂಚನೆ ಪ್ರಕಟಿಸಲಾಗಿದ್ದು ನಾಮಪತ್ರ ಸ್ವೀಕರಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಕೆ. ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಗ್ರಾಮ ಪಂಚಾಯತ್ ಚುನಾವಣೆಯ 2ನೇ ಹಂತದ ಅಧಿಸೂಚನೆಯ ಈಗಾಗಲೇ ಹೊರಡಿಸಲಾಗಿದ್ದು 2ನೇ ಹಂತದಲ್ಲಿ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ದಾಂಡೇಲಿ ಹಾಗೂ ಜೋಯಿಡಾ ತಾಲೂಕುಗಳ 126 ಗ್ರಾಮ ಪಂಚಾಯತಿಗಳಿಗೆ ಒಟ್ಟು 665 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ ಎಂದರು.
2ನೇ ಹಂತದ ಚುನಾವಣೆಗಾಗಿ ಶುಕ್ರವಾರ ಚುನಾವಣೆ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಡಿ.16 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಡಿ.17 ರಂದು ನಾಮಪತ್ರಗಳನ್ನು ಪರಿಶೀಲಿಸುವ ದಿನವಾಗಿದ್ದರೆ ಡಿ.19 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಡಿ.27 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರಗೆ ಮತದಾನ ನಡೆಯಲಿದ್ದು ಡಿ. 30 ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಸಲಾಗುವುದು ಎಂದರು.
ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಏಳು ತಾಲೂಕಿನಲ್ಲಿ ಒಟ್ಟು 396780 ಜನ ಮತದಾರರಿದ್ದು ಇವರಲ್ಲಿ 202621 ಪುರುಷ ಹಾಗೂ 194155 ಮಹಿಳಾ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆಗೂ ಸಹ ಎಸ್ಓಪಿ ಹೋರಡಿಸಿ ಮಾರ್ಗಸೂಚಿ ಅನುಸರಿಸಲು ಕಡ್ಡಾಯಗೊಳಿಸಿರುತ್ತದೆ. ಹೀಗಾಗಿ ಅಭ್ಯರ್ಥಿಗಳು ಕೇವಲ ಐದು ಜನ ಬೆಂಬಲಿಗರೊಂದಿಗೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಚುನಾವಣೆಯ ಪ್ರಚಾರ ಕೈಗೊಳ್ಳಬೇಕು. ಕೋವಿಡ್-19 ಸೋಂಕಿತ ಮತದಾರರು ಸಹ ಪಿಪಿಇ ಕಿಟ್ ದರಿಸಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಸದಚಾರ ಸಂಹಿತೆಯನ್ನು ಪಾಲಿಸಬೇಕಾಗುತ್ತದೆ. ಅಲ್ಲದೇ ಯಾವುದೇ ಅಭ್ಯರ್ಥಿಯು ಸಮಾಜ ಅಥವಾ ಸಾಮಾಜಿಕ ಜಾಲತಣಗಳಲ್ಲಿ ವಿವಿಧ ಜಾತಿ ಮತ್ತು ಸಮುದಾಯಗಳ ಮಧ್ಯೆ ಅಥವಾ ಮತೀಯ ಸಮೂಹದ ಮಧ್ಯೆ ವೈಮನಸತ್ವವನ್ನು ಕೆರಳಿಸುವ ಅಥವಾ ಪರಸ್ಪರ ದ್ವೇಷ ಹುಟ್ಟಿಸುವ ಯಾವುದೇ ಚಟುವಟಿಕೆಗಳಲ್ಲಿ ತೊಡಗಬಾರದು. ಜೊತೆಗೆ ಬೇರೆ ಅಭ್ಯರ್ಥಿಯ ಖಾಸಗಿ ನಡತೆ ಅಥವಾ ಶೀಲಗಳ ಬಗ್ಗೆ ಸುದ್ದಿಯನ್ನು ಪ್ರಚಾರ ಮಾಡತಕ್ಕದ್ದಲ್ಲ ಎಂದರು.
ಅಭ್ಯರ್ಥಿಗಳು ಮತಗಟ್ಟೆಯಿಂದ 100 ಮೀಟರ್ಗಳ ಅಂತರ ಪ್ರದೇಶದ ಒಳಗೆ ಮತಕ್ಕಾಗಿ ಪ್ರಚಾರ ಮಾಡುವಂತಿಲ್ಲ. ಅಭ್ಯರ್ಥಿ ಪರವಾಗಿ ಮತಗಟ್ಟೆಗಳಿಗೆ ಮತದಾರರನ್ನು ವಾಹನದಲ್ಲಿ ಕರೆತರುವುದು ಹಾಗೂ ಅಲ್ಲಿಂದ ವಾಪಸ್ಸು ಕರೆದುಕೊಂಡು ಹೋಗುವಂತಿಲ್ಲ. ಮತ ಗಳಿಕೆಗಾಗಿ ಅಭ್ಯರ್ಥಿ ಅಥವಾ ಅಭ್ಯರ್ಥಿಯ ಪರವಾಗಿ ಯಾವುದೇ ನಿಕಾಯ ಅಥವಾ ವ್ಯಕ್ತಿಗಳು ಧಾರ್ಮಿಕ ಚಿಹ್ನೆಗಳು ಮತ್ತು ಧಾರ್ಮಿಕ ವ್ಯಕ್ತಿಗಳನ್ನು ಬಳಸಿಕೊಳ್ಳವಂತಿಲ್ಲ. ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಯಾವುದೇ ಮೀತಿ ಇಲ್ಲ. ಆದರೆ ಈ ಕುರಿತು ಲೆಕ್ಕವನ್ನು ನೀಡಬೇಕಾಗಿದೆ ಎಂದರು.
ಚುನಾವಣಾ ನೀತಿ ಸಂಹಿತೆಗೆ ಸಂಬಂಧಿಸಿದಂತೆ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ನೀತಿ ಸಂಹಿತಿ ಜಾರಿಯಲ್ಲಿ ಇರಲಿದೆ. ನಗರ ಪ್ರದೇಶದಲ್ಲಿ ನೀತಿ ಸಂಹಿತೆ ಅನ್ವಯವಾಗುವುದಿಲ್ಲ. ಇದರಿಂದ ಅಭಿವೃದ್ಧಿಗೆ ಯಾವುದೇ ತೊಂದರೆ ಇಲ್ಲ. ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಧಾರ್ಮಿಕ ಚಿನ್ಹೆ ಅಥವಾ ಧಾರ್ಮಿಕತೆಗೆ ಸಂಬಂಧಿಸಿದ ವ್ಯಕ್ತಿಯನ್ನು ಪ್ರಚಾರಕ್ಕೆ ಬಳಕೆ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹೆಚ್ಚುತ್ತಿರುವ ಸಾಮಾಜಿಕ ಜಾಲತಾಣಗಳ ಹಾವಳಿ
ಪ್ರಸ್ತುತ ದಿನದಲ್ಲಿ ಸಾಮಾಜಿಕ ಜಾಲತಾಣಗಳ ಹಾವಳಿ ಹೆಚ್ಚಿದೆ. ಇದರ ಮೂಲಕ ಗ್ರಾಪಂ ಸ್ಪರ್ಧಿಗಳ ತೇಜೋವಧೆ ಮಾಡುವ ಸಾಮಾಜಿಕ ಜಾಲತಾಣದ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾವುದು. ಅಲ್ಲದೆ ಯೂಟ್ಯೂಬ್ ಚಾಲನೆಗಳ ಪ್ರಮಾಣವು ಹೆಚ್ಚಿದ್ದು ಅವುಗಳನ್ನು ದುರ್ಬಳಕೆ ಮಾಡುವವರ ಮೇಲೂ ನಿಗಾ ಇರಿಸಲಾಗಿದೆ ಎಂದರು.