ಕೆ.ಆರ್.ಪೇಟೆ: ಠಾಣೆಯ ಮುಂಭಾಗದಲ್ಲಿದ್ದ ಖಾಲಿ ಜಾಗಕ್ಕೊಂದು ಹೊಸ ರೂಪ ನೀಡುವ ಮೂಲಕ ಪಿಎಸ್ಐ ಸುರೇಶ್ ಹಾಗೂ ಸಿಪಿಐ ದೀಪಕ್ ಅವರು ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇವರು ಇಲ್ಲಿಗೆ ವರ್ಗಾವಣೆಯಾಗಿ ಬಂದು ಕೇವಲ ಒಂದು ತಿಂಗಳಿನಲ್ಲಿಯೇ ಸಾರ್ವಜನಿಕರು ಮತ್ತು ಉನ್ನತ ಅಧಿಕಾರಿಗಳ ಪ್ರಶಂಶೆಗೆ ಪಾತ್ರರಾಗುವಂತಹ ಕೆಲಸವನ್ನು ಮಾಡುವ ಮೂಲಕ ಗಮನಸೆಳೆದಿದ್ದಾರೆ. ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ವೃತ್ತ ನಿರೀಕ್ಷಕರ ಕಚೇರಿ ಎರಡೂ ಕೂಡ ಒಂದೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಮಾಂತರ ಪಿಎಸ್ಐ ಸುರೇಶ್ ಹಾಗೂ ಸಿಪಿಐ ದೀಪಕ್ ಅವರು ಖಾಲಿಯಾಗಿದ್ದ ಜಾಗವನ್ನು ಬಳಕೆ ಮಾಡಿಕೊಂಡು ಉದ್ಯಾವನ ನಿರ್ಮಿಸಿದ್ದಾರೆ.
ಮೊದಲು ಇಲ್ಲಿನ ಪೊಲೀಸ್ ಠಾಣೆಯ ಆವರಣ ಮಳೆ ಬಂದರೆ ಕೆಸರಿನ ಗದ್ದೆಯಂತಾಗುತ್ತಿತ್ತು. ಈ ಜಾಗವನ್ನು ಇದುವರೆಗೆ ಯಾರೂ ಕೂಡ ಸಮರ್ಪಕವಾಗಿ ಬಳಸಿಕೊಂಡಿರಲಿಲ್ಲ, ಆದರೆ ಪಿಎಸ್ಐ ಸುರೇಶ್ ಮತ್ತು ಸಿಪಿಐ ದೀಪಕ್ರವರ ಪರಿಶ್ರಮದ ಫಲವಾಗಿ ಈಗ ಠಾಣೆಯ ಆವರಣ ಹೊಸ ರೂಪ ಪಡೆದುಕೊಂಡಿದೆ. ಇದೀಗ ಇಲ್ಲಿ ಸಾರ್ವಜನಿಕರಿಗೆ ವಿಶ್ರಾಂತಿ ಕೊಠಡಿ, ಆವರಣದ ಸುತ್ತಲೂ ಡಾಂಬರೀಕರಣ ಮಾಡಿ ಠಾಣೆಯ ಮುಂಭಾಗದಲ್ಲಿ ಕಣ್ಮನ ಸೆಳೆಯುವಂತಹ ಉದ್ಯಾನ, ಠಾಣೆಯ ಕಾಂಪೌಂಡ್ಗೆ ಬಣ್ಣ ಬಳಿಸಿ ಅಲ್ಲಿ ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಹಾಗೂ ಅಸ್ಪೃಶ್ಯತೆ, ಬಾಲ್ಯವಿವಾಹ, ಫೋಕ್ಸೋ ಕಾಯಿದೆ ಬಗ್ಗೆ ಮಾಹಿತಿ, ಕೊಲೆ, ಸುಲಿಗೆ, ದರೋಡೆ ಇವುಗಳ ಬಗ್ಗೆ ಸೂಕ್ತವಾದ ಅರಿವು ಮಾಡಿಸುವ ಗೋಡೆ ಬರಹಗಳನ್ನು ಬರೆಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಇಲ್ಲಿನ ಪೊಲೀಸ್ ಠಾಣೆ ಇತರೆ ಪೊಲೀಸ್ ಠಾಣೆಗಳಿಗೆ ಮಾದರಿಯಾಗಿರುವುದಂತು ನಿಜ.