ಮಡಿಕೇರಿ: ಪ್ರತಿಯೊಬ್ಬರೂ ನನ್ನಿಂದ ಮಾತ್ರ ಸಾದ್ಯ ಎಂದಾಗಲೇ ಅದ್ವಿತೀಯವಾದುದನ್ನು ಸಾಧಿಸಲು ಸಾದ್ಯವಾಗುತ್ತದೆ ಎಂದು ಜೇಸೀಸ್ ವಲಯ ಅದ್ಯಕ್ಷ ಭರತ್ ಆಚಾರ್ಯ ಅವರು ಹೇಳಿದರು.
ಸೋಮವಾರಪೇಟೆಯಲ್ಲಿ ಮಂಗಳವಾರ ಆಯೋಜಿಸಿದ್ದ, ಪುಷ್ಪಗಿರಿ ಜೇಸೀಸ್ ನೂತನ ಪದಾದಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಸಮಾಜ ಸೇವೆ ಮಾಡುವಾಗ ಇತರರು ಮಾಡಲಿ ನಂತರ ನಾವು ಕೈ ಜೋಡಿಸೋಣ ಎಂದು ನಿರೀಕ್ಷಿಸುವುದೇ ತಪ್ಪು. ಬದಲಿಗೆ ನಾನೆ ಮೊದಲು ಮಾಡುತೇನೆ ಎಂದು ಹೊರಟರೆ ಖಂಡಿತಾ ಉತ್ತಮ ಸೇವೆ ಮಾಡಬಹುದು ಎಂದರು.
ಜೇಸೀಸ್ ಸಂಸ್ಥೆಯು ತನ್ನ ಸದಸ್ಯರಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವರಲ್ಲಿ ನಾಯಕರನ್ನಾಗಿ ಬೆಳೆಸಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸುತ್ತಿರುವ ಜಗತ್ತಿನ ಏಕೈಕ ಸಂಸ್ಥೆ. ಜೇಸೀ ಮಾಜಿ ವಲಯ ಉಪಾಧ್ಯಕ್ಷೆ ಮಮತ ಹರೀಶ್ ಅವರು ಮಾತನಾಡಿ ಕಳೆದ ೪ ದಶಕಗಳ ಜೇಸೀ ಅದ್ಯಕ್ಷರಲ್ಲಿ ಹಿಂದಿನ ಅದ್ಯಕ್ಷರಾದ ಉಷಾ ರಾಣಿ ಅವರು ಅಭೂತಪೂರ್ವ ಸಾಧನೆ ಮೆರೆದಿದ್ದು ಹೆಚ್ಚಿನ ಬಹುಮಾನ ಪದಕಗಳನ್ನು ಪಡೆಯಲು ಕಾರಣಕರ್ತರಾಗಿದ್ದಾರೆ ಎಂದು ಶ್ಲಾಘಿಸಿದರು.
ಅಲ್ಲದೆ ಮಂಡ್ಯದಲ್ಲಿಯೂ ನೂತನ ಘಟನವೊಂದನ್ನು ತೆರೆಯುವಲ್ಲಿ ಯಶಸ್ವಿಯಾಗಿರುವ ಪುಷ್ಪಗಿರಿ ಜೇಸಿ ಸಂಸ್ಥೆಯನ್ನು ಅಭೀನಂದಿಸಿದರು. ಜೇಸೀ ವಲಯ ಅದ್ಯಕ್ಷ ಬಾಬು ರಾವ್ ಅವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ನೂತನ ಅದ್ಯಕ್ಷೆಯಾಗಿ ಆಯ್ಕೆಯಾದ ಮಾಯಾ ಗಿರೀಶ್ ಅವರು ಮಾತನಾಡಿ ಈ ಸಾಲಿನಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜಿಸಿದ್ದು ಎಲ್ಲರ ಸಹಕಾರವನ್ನು ಕೋರಿದರು.