ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಒಂದಾಗಿರುವ ಜೊಯಿಡಾ ತಾಲೂಕಿನಲ್ಲಿ ಬುಡಕಟ್ಟು ಜನರ ಗೆಡ್ಡೆ ಗೆಣಸು ಮೇಳ ಬುಧವಾರ ನಡೆಯಿತು. ಗ್ರಾಮೀಣ ಜನರು ಬೆಳೆದ ಅಪರೂಪದ ಗಡ್ಡೆ ಗೆಣಸುಗಳು ನೋಡುಗರ ಗಮನ ಸೆಳೆದವು.
ಜಿಲ್ಲೆಯ ಗ್ರಾಮೀಣ ಹಾಗೂ ಗುಡ್ಡಗಾಡು ಜನರಿಗೆ ಗೆದ್ದೆ ಗೆಣಸುಗಳೇ ಮುಖ್ಯ ಆಹಾರ. ಇದಕ್ಕಾಗಿ ಮಾರುಕಟ್ಟೆ ಕಲ್ಪಿಸುವ ದೃಷ್ಟಿಯಿಂದ ಜಿಲ್ಲೆಯ ಜೊಯಿಡಾ ತಾಲೂಕಿನಲ್ಲಿ ಗೆಣಸು ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ 50 ಕ್ಕೂ ಹೆಚ್ಚು ಬಗೆಯ ಗೆಡ್ಡೆ ಗೆಣಸುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು.
ಜೊಯಿಡಾದ ಕುಣುಬಿ ಜನಾಂಗದವರು ಕಾಡು ಹಾಗೂ ಮನೆಯ ಹಿತ್ತಲಿನಲ್ಲಿ ಬೆಳೆದ ಅಪರೂಪದ ಗಡ್ಡೆಗೆಣಸುಗಳನ್ನು ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತದೆ. ಕಳೆದ ಐದು ವರ್ಷಗಳಿಂದ ಜೊಯಿಡಾದಲ್ಲಿ ನಡೆಸುತ್ತಿರುವ ಗಡ್ಡೆ ಗೆಣಸು ಮೇಳ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಸಾಕಷ್ಟು ಹೆಸರು ಪಡೆದಿದೆ.
ಮೇಳದಲ್ಲಿ 140ಕ್ಕೂ ಅಧಿಕ ಕೃಷಿಕರು 50 ಬಗೆಯ ಗೆಣಸುಗಳನ್ನು ಮೇಳದಲ್ಲಿ ಮಾರಾಟ ಮಾಡಿದರು. ಅಪರೂಪದಲ್ಲಿಯೇ ಅಪರೂಪವಾದ ಗೆಡ್ಡೆ- ಗೆಣಸು ಈ ಮೇಳದಲ್ಲಿ ಸಿಗುವುದರಿಂದ ಬೇರೆ ಬೇರೆ ಭಾಗಗಳಿಂದ ನೂರಾರು ಜನರು ಖರೀದಿಗಾಗಿ ಆಗಮಿಸಿದ್ದಾರೆ. ಗಡ್ಡೆಗಳನ್ನು ಕಾಡು ಪ್ರಾಣಿಗಳಿಂದ ರಕ್ಷಿಸುವುದೇ ರೈತರಿಗೆ ದೊಡ್ಡ ಕೆಲಸ. ನೈಸರ್ಗಿಕವಾಗಿ ದೊರೆಯುವ ಉತ್ಪನ್ನಗಳನ್ನು ಮಾರುಕಟ್ಟೆ ವ್ಯವಸ್ಥೆಗೆ ತರಲು ಪ್ರತಿ ವರ್ಷ ಜೊಯಿಡಾದಲ್ಲಿ ನಡೆಯುವ ಗಡ್ಡೆ ಗೆಣಸಿನ ಮೇಳ ವೇದಿಕೆ ಕಲ್ಪಿಸಿದೆ ಎನ್ನುವುದು ಇಲ್ಲಿಯ ಸ್ಥಳೀಯರ ಅಭಿಪ್ರಾಯವಾಗಿದೆ.
ಮೇಳದಲ್ಲಿ ಗೆಣಸುಗಳು ಮಾತ್ರವಲ್ಲದೇ ಬೆತ್ತದಿಂದ ತಯಾರಿಸಲಾದ ಮೊರ, ಚಾಪೆ, ಜೇನುತುಪ್ಪ, ವಾಟೆಹುಳಿ, ಶುಂಠಿ, ಅರಶಿನ ಕೊಂಬು, ಮೊಗೆಕಾಯಿ, ಈರುಳ್ಳಿ, ಕೆಂಪು ಗೆಣಸು, ಬಿಳಿ ಗೆಣಸು, ಮುಳ್ಳಿ, ಕೋನ್, ಜಾಡ ಕಣಗ, ಕಾಟೇ ಗಣಗ, ಕಾಸರಾಳು, ರಳದ್, ಮುಡ್ಲಿ, ಸವತೆ, ತೇರೋ, ಆನೆಬಾಳೆ, ಥೈಪಳ್, ಕರಂದೆ, ಕಣಗೆ, ಅಂಬಾಡಿ, ಕೆಸು, ಅಪ್ಪೆಮಿಡಿ, ಕೆಂಪು ಹರಿವೆ ಬೀಜ, ಮುಳ್ಳುಕೋನ, ಚಿಕ್ಕು, ಮೌವಳಿ, ಹಲಸು, ಎಲಕ್ಕಿ, ಮುರುಗಲು, ಬೆಟ್ಟದ ನೆಲ್ಲಿಕಾಯಿಗಳನ್ನು ತಂದು ಮಹಿಳೆಯರು ಮಾರಾಟ ಮಾಡಿದರು.
ಜನರ ಜೀವನಾಧಾರವೇ ಗೆಡ್ಡೆ ಗೆಣಸು:
ಬುಧವಾರ ನಡೆದ ಗೆಣಸು ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಲ್ಲಾಪುರ ವಿಶ್ವವಿದ್ಯಾಲಯದ ವನಸ್ಪತಿ ವಿಭಾಗದ ಶ್ರೀರಂಗ ಯಾದವ, ಹಿಂದೆ ಜಗತ್ತಿನಲ್ಲಿ ಜನ, ಜಾನುವಾರುಗಳ ಮೂಲ ಆಹಾರವೇ ಗೆಡ್ಡೆ ಗೆಣಸುಗಳು, ಈ ಗಡ್ಡೆ ಗೆಣಸುಗಳು ಈಗಿನ ಬೆಳೆಗಳಂತೆ ಅಕಾಲಿಕ ಮಳೆಗೆ ಹಾಳಾಗುವುದಿಲ್ಲ. ಜನರ ಜೀವನಾಧಾರ ಈ ಗಡ್ಡೆ ಗೆಣಸು ಗಳಾಗಿದ್ದವು ಎಂದರು.
ಬೆಂಗಳೂರಿನ ವಿಜ್ಞಾನಿ ಸುಭಾಶ್ಚಂದ್ರ ಮಾತನಾಡಿ ಜೀವ ವೈವಿಧ್ಯ ದಾಖಲಾತಿ ಯಲ್ಲಿ ಈ ಗಡ್ಡೆ ಗೆಣಸುಗಳನ್ನು ಸೇರಿಸಲಾಗುತ್ತದೆ ಎಂದರು. ನಾಣಿಜದ ವಿ ವಿ ವೆರ್ಣೇಕರ್, ಶಿರಸಿಯ ಬಾಲಚಂದ್ರ ಹೆಗಡೆ ಮೇಳದ ಕುರಿತು ಮಾತನಾಡಿದರು. ಡಾ. ಜಯಾನಂದ ಡೇರೇಕರ್ ಮೇಳ ಆರಂಭದಿಂದ ಇಲ್ಲಿಯ ವರೆಗೂ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ಜಿ.ಪಂ. ಸದಸ್ಯ ರಮೇಶ ನಾಯ್ಕ ಊರಿನ ಹಿರಿಯ ವಿನೋದ ಮಿರಾಶಿ ಇದ್ದರು. ಪ್ರಸನ್ನ ಗಾವುಡ ವಂದಿಸಿದರು. ಗಡ್ಡೆ ಗೆಣಸು ಮೇಳದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಗಡ್ಡೆ ಗೆಣಸು ತಂದು ಮಾರಾಟ ಮಾಡಿದರು.ಹಲವಾರು ವಿಧದ ಗಡ್ಡೆಗಳು ಬೆಟ್ಟದ ನೆಲ್ಲಿಕಾಯಿ, ವಿವಿಧ ಜಾತಿಯ ತರಕಾರಿಗಳು ನೆರೆದ ಸಾವಿರಾರು ಜನರನ್ನು ಆಕರ್ಷಿಸುವಂತಿದ್ದವು. ಗಡ್ಡೆ ಗೆಣಸಿನಿoದ ತಯಾರಿಸಿದ ತಿಂಡಿಗಳು ಖಾದ್ಯಗಳು ಜನರನ್ನು ಮೆಚ್ಚಿಸಿದ್ದವು.