ಬೆಂಗಳೂರು: ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಸುಸ್ಥಿರ ಗುರಿಗಳ ಸಹಕಾರ ಕೇಂದ್ರ ಹಾಗೂ ಗಿವ್ ಇಂಡಿಯಾ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿದ್ದ ವ್ಯಾಕ್ಸಿನೇಟ್ ಇಂಡಿಯಾ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಇಂದು ರಾಜಭವನದಲ್ಲಿ ಚಾಲನೆ ನೀಡಿದರು.
ಸಾಂಕೇತಿಕವಾಗಿ ಇಬ್ಬರು ಮಹಿಳೆಯರಿಗೆ ವ್ಯಾಕ್ಸಿನ್ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಪರಾಷ್ಟ್ರಪತಿಗಳು, ಸಾರ್ವಜನಿಕರು ಮೈ ಮರೆಯಬಾರದು, ಕಡ್ಡಾಯವಾಗಿ ಆರು ಅಡಿ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸುವುದು, ಕೈ ತೊಳೆಯುಯುವುದನ್ನು ಕಡ್ಡಾಯವಾಗಿ ಪಾಲಿಸಬೇಕೆಂದರು. ವ್ಯಾಕ್ಸಿನ್ ಹಾಕಿಸಿಕೊಳ್ಳುವುದು ಕಡ್ಡಾಯ. ವ್ಯಾಕ್ಸಿನ್ ಗೆ ಪರ್ಯಾಯ ಯಾವುದೂ ಇಲ್ಲ. ಸಾಧ್ಯವಾದಷ್ಟು ಜಂಕ್ ಫುಡ್ ಸೇವಿಸದೆ, ಭಾರತೀಯ ಸಾಂಪ್ರದಾಯಕ ಆಹಾರ ಸೇವಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು,, ಬಡವರು, ಕೆಳ ಹಂತದ ವರ್ಗದವರಿಗೆ ಲಸಿಕೆ ನೀಡುವುದು ನಮ್ಮ ಗುರಿ ಎಂದು ತಿಳಿಸಿದರು. ದಾನಿಗಳು ಹಾಗೂ ಖಾಸಗಿ ಸಂಸ್ಥೆಗಳು ಸಿಎಸ್ಆರ್ ನಿಧಿ ಮೂಲಕ ಲಸಿಕೆ ನೀಡಲು ಮುಂದಾಗಬೇಕು ಎಂದರು.