ಬೆಂಗಳೂರು, ; ಐಷಾರಾಮಿ ಜೀವನ ನಡೆಸಲು ಹಾಗೂ ಮೋಜು ಮಸ್ತಿಗಾಗಿ ವಿಮಾನದಲ್ಲಿ ಬೆಂಗಳೂರಿಗೆ ಬಂದು ಮನೆ ಕಳ್ಳತನ ಮಾಡುತ್ತಿದ್ದ ಮೂವರು ಕುಖ್ಯಾತ ಅಂತರ್ರಾಜ್ಯ ಕಳ್ಳರನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿ 1.80 ಕೋಟಿ ರೂ. ಮೌಲ್ಯದ ಹಣ,ಆಭರಣ, ಲ್ಯಾಪ್ಟಾಪ್ ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪಶ್ಚಿಮಬಂಗಾಳ ಮೂಲದ ಬಿಲಾಲ್ಮಂಡಲ್ಶಜಾನ್ಮಂಡಲ್ (33), ಮಹರಾಷ್ಟ್ರದ ಸಲೀಂ ರಫಿಕ್ ಶೇಕ್ (43) ಮತ್ತು ಬಿಹಾರದ ಮೊಹಮ್ಮದ್ ಜಾಲೀಕ್ (36) ಬಂಧಿತ ಆರೋಪಿಗಳು.
ಬಂಧಿತರಿಂದ ಒಟ್ಟು 27 ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಸುಮಾರು 60 ಸಾವಿರ ಮೌಲ್ಯದ ಒಂದು ದ್ವಿಚಕ್ರ ವಾಹನ, ಎರಡು ಲಕ್ಷ ಮೌಲ್ಯದ ವಿವಿಧ ಕಂಪೆನಿಯ 24 ವಾಚ್ಗಳು, 50 ಸಾವಿರ ಮೌಲ್ಯದ ಲ್ಯಾಪ್ಟಾಪ್, 46700ರೂ. ನಗದು ಹಾಗೂ ಸುಮಾರು 1.64 ಕೋಟಿ ರೂ. ಮೌಲ್ಯದ 3ಕೆಜಿ 286 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣಗಳು, 12.60 ಲಕ್ಷ ರೂ. ಮೌಲ್ಯದ 18 ಕೆಜಿ ವಿವಿಧ ಮಾದರಿಯ ಬೆಳ್ಳಿ ಸಾಮಾನುಗಳು ಒಳಗೊಂಡಂತೆ ಬರೋಬ್ಬರಿ 1.80 ಕೋಟಿ ರೂ. ಮೌಲ್ಯದ ಕಳವು ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ದಕ್ಷಿಣ ವಿಭಾಗದಲ್ಲಿ ಇತ್ತೀಚೆಗೆ ಹಗಲು ಮತ್ತು ರಾತ್ರಿ ಕನ್ನಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದ ಬಗ್ಗೆ ಉಪ ಪೊಲೀಸ್ ಆಯುಕ್ತ ಹರೀಶ್ಪಾಂಡೆ ಅವರು ಇತ್ತೀಚಿನ ಸಭೆಯಲ್ಲಿ ಚರ್ಚಿಸಿದ್ದರು. ಬಸವನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳೆ ಕನಕಪುರ ರಸ್ತೆಯಲ್ಲಿ ನಡೆದ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಿ ಕಳವು ಮಾಡಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳುವಂತೆ ಸೂಕ್ತ ಸೂಚನೆ ನೀಡಿದ್ದರು.ಅದರಂತೆ ಈ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಿ ಕಳವು ಮಾಲನ್ನು ವಶಪಡಿಸಿಕೊಳ್ಳಲು ಬಸವನಗುಡಿ ಠಾಣೆ ಇನ್ಸ್ಪೆಕ್ಟರ್ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.ಈ ತಂಡ ಸಿಸಿ ಟಿವಿ ಕ್ಯಾಮೆರಾದ ಸುಳಿವನ್ನು ಆಧರಿಸಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ, ಆರೋಪಿಗಳು ಕಳ್ಳತನ ಮಾಡುವ ಉದ್ದೇಶಕ್ಕಾಗಿಯೇ ವಿಮಾನದ ಮೂಲಕ ಬೆಂಗಳೂರಿಗೆ ಬರುತ್ತಿದ್ದರು ಎಂಬುದು ಗೊತ್ತಾಗಿದೆ. ನಗರದ ವಿವಿಧ ಕಡೆಗಳಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇರುತ್ತಿದ್ದ ಆರೋಪಿಗಳು ಬೀಗ ಹಾಕಿದ ಮನೆಗಳನ್ನು ಗಮನಿಸುತ್ತಿದ್ದರು.
ನಂತರದಲ್ಲಿ ಕಳ್ಳತನ ಮಾಡಲು ಸಂಚು ರೂಪಿಸಿ ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದರು. ಕಳ್ಳತನ ಮಾಡಿದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಮುಂಬೈ ಹಾಗೂ ಹೈದರಾಬಾದ್ ನಗರದ ವಿವಿಧ ಚಿನ್ನಾಭರಣ ಮಳಿಗೆಗಳಲ್ಲಿ ಮಾರಾಟ ಮಾಡಿ ಹಣವನ್ನು ಹಂಚಿಕೊಳ್ಳುತ್ತಿದ್ದರು. ಇನ್ನು ಕೆಲವು ಒಡವೆಗಳನ್ನು ಚಿನ್ನಾಭರಣ ಅಂಗಡಿಯಲ್ಲಿ ಕೊಟ್ಟು ಕರಗಿಸಿ ತಮಗೆ ಬೇಕಾದ ರೀತಿಯಲ್ಲಿ ಮಾರ್ಪಾಟು ಮಾಡಿಕೊಂಡು ಮುತ್ತೂಟ್ಫೈನಾನ್ಸ್ ಹಾಗು ಇನ್ನಿತರ ಸಹಕಾರಿ ಬ್ಯಾಂಕುಗಳಲ್ಲಿ ತಮ್ಮ ಹೆಸರಿನಲ್ಲಿ ಖಾತೆ ತೆರೆದು ಒಡವೆಗಳನ್ನು ಅಡಮಾನ ಮಾಡುತ್ತಿದ್ದರು ಎಂಬುದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ.ಆರೋಪಿಗಳು ಕಳ್ಳತನ ಮಾಡಿದ ಒಡವೆಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ತಮ್ಮ ಐಷಾರಾಮಿ ಮೋಜು-ಮಸ್ತಿಗಾಗಿ ಬಳಸುತ್ತಿದ್ದರು. ಈ ಆರೋಪಿಗಳು ತಮ್ಮ ಊರುಗಳಲ್ಲಿ ನಾವು ಬೆಂಗಳೂರಿನಲ್ಲಿ ಬಿಸಿನೆಸ್ ಮಾಡುತ್ತಿರುವುದಾಗಿ ಬಿಂಬಿಸಿಕೊಂಡಿದ್ದರು. ಕಳೆದ ಮೂರು ವರ್ಷಗಳಿಂದ ಇದೇ ರೀತಿ ಆರೋಪಿಗಳು ಕಳ್ಳತನ ಮಾಡುತ್ತಿದ್ದದ್ದು ವಿಚಾರಣೆಯಿಂದ ಗೊತ್ತಾಗಿದ್ದು, ಸುಮಾರು 12ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಗಳ ಬೆರಳು ಮುದ್ರೆಗಳು ದೊರೆತಿದ್ದು, ಇದೇ ಮೊದಲ ಬಾರಿಗೆ ಬಸವನಗುಡಿ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಹರೀಶ್ಪಾಂಡೆ ಅವರ ಮಾರ್ಗದರ್ಶನದಲ್ಲಿ ಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಬಸವನಗುಡಿ ಠಾಣೆ ಇನ್ಸ್ಪೆಕ್ಟರ್ ರಮೇಶ್ ಹಾಗೂ ಸಬ್ಇನ್ಸ್ಪೆಕ್ಟರ್ಗಳಾದ ಪ್ರಸನ್ನಕುಮಾರ್, ಪ್ರವೀಣ್ ಹೊಸೂರ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಉತ್ತಮ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತ ಕಮಲ್ಪಂಥ್ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತರು ಪ್ರಶಂಸಿರುತ್ತಾರೆ.