ಬಾಗಲಕೋಟೆ: ತನ್ನ ಬಸ್ಸುಗಳಲ್ಲಿ ಸಂಚರಿಸುವ ವೇಳೆ ಚಿಲ್ಲರೆ ಕೇಳುವುದನ್ನು ‘ಸಾರ್ವಜನಿಕ ಸೇವಕನ ಕರ್ತವ್ಯಕ್ಕೆ ಅಡ್ಡಿಪಡಿಸುವುದು’ ಎಂದು ಭಾವಿಸಲಾಗುವುದು ಹಾಗೂ ತಪ್ಪಿತಸ್ಥರೆಂದು ಕಂಡು ಬಂದಲ್ಲಿ ಮೂರು ವರ್ಷಗಳವರೆಗೂ ಜೈಲು ಶಿಕ್ಷೆಯಾಗುವ ಸಾಧ್ಯತೆ ಇರುವುದಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪೋಸ್ಟರ್ಗಳನ್ನು ತನ್ನೆಲ್ಲಾ ವಾಹನಗಳ ಮೇಲೆ ಅಂಟಿಸಿದೆ.
“ಭಾರತೀಯ ದಂಡ ಸಂಹಿತೆಯ ಅಡಿ, ವಾ.ಕ.ರ.ಸಾ.ಸಂನಲ್ಲಿ ಕೆಲಸ ಮಾಡುವ ಚಾಲಕರು ಹಾಗೂ ಕಂಡಕ್ಟರ್ಗಳನ್ನು ಸುಪ್ರೀಂ ಕೋರ್ಟ್ ಸಾರ್ವಜನಿಕ ಸೇವಕರೆಂದು ಪರಿಗಣಿಸಿದೆ. ಹೀಗಾಗಿ ಅವರ ಕರ್ತವ್ಯಕ್ಕೆ ಭಂಗ ತರುವುದು, ಅಥವಾ ಚಾಲಕನ ಮೇಲೆ ಹಲ್ಲೆ ಮಾಡುವುದು ಅಥವಾ ಕಂಡಕ್ಟರ್ ತನ್ನ ಕೆಲಸ ಮಾಡದಂತೆ ತಡೆಯುವುದು ಮಾಡುವುದು ಶಿಕ್ಷಾರ್ಹ ಅಪರಾಧ. ಸೆಕ್ಷನ್ 332 ಹಾಗೂ 353ರ ಅಡಿ, ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ಐಪಿಸಿಯ ಸೆಕ್ಷನ್ 186ರ ಅಡಿ ಮೂರು ತಿಂಗಳ ಸೆರೆವಾಸವನ್ನು ಈ ನಿಯಮ ಪಾಲಿಸದಿದ್ದರೆ ನೀಡಬಹುದಾಗಿದೆ,” ಎಂದು ಕನ್ನಡದಲ್ಲಿ ಬರೆದಿರುವ ನೋಟ್ನಲ್ಲಿ ತಿಳಿಸಲಾಗಿದೆ.
ಬಸ್ಸುಗಳಲ್ಲಿ ಟಿಕೆಟ್ ಪಡೆಯುವ ವೇಳೆ ಚಿಲ್ಲರೆಗಾಗಿ ಪ್ರಯಾಣಿಕರು ಹಾಗೂ ಕಂಡಕ್ಟರ್ಗಳ ನಡುವೆ ಮಾತಿನ ಚಕಮಕಿ ನಡೆಯುವುದು ಸಹಜ. ಕೆಲವೊಂದು ಮುಖಬೆಲೆಯ ನಾಣ್ಯಗಳು ಸಿಗದೇ ಇದ್ದಾಗ ಕಂಡಕ್ಟರ್ಗಳು ಹಾಗೂ ಪ್ರಯಾಣಿಕರ ನಡುವೆ ಜಗಳಗಳು ಸಂಭವಿಸುವುದು ಸರ್ವೇ ಸಾಮಾನ್ಯ. ಇದರಿಂದ ಕೆಲವೊಂದು ಬಸ್ಸುಗಳ ಸಂಚಾರವೇ ಗಂಟೆಗಳ ಕಾಲ ನಿಲ್ಲುವ ಸಾಧ್ಯತೆಗಳೂ ಇವೆ.
ರಾಜ್ಯದ ಆರು ಜಿಲ್ಲೆಗಳಲ್ಲಿ ಎಂಟು ವಿಭಾಗಗಳನ್ನು ಹೊಂದಿರುವ ವಾ.ಕ.ರ.ಸಾ.ಸಂ, 4,428 ಗ್ರಾಮಗಳಿಗೆ ತನ್ನ ಸೇವೆ ಒದಗಿಸುತ್ತಿದೆ.
ಈ ಪೋಸ್ಟರ್ ಅನ್ನು ಓದಿದ ಬಾಗಲಕೋಟೆ ಜಿಲ್ಲೆಯ ಕೆಂಪಣ್ಣ ಹವಾಲ್ದಾರ್ “ನನ್ನ ಬಳಿ ಸರಿಯಾದ ಚಿಲ್ಲರೆ ಇದೆಯೇ ಎಂದು ಖಾತ್ರಿ ಪಡಿಸಿಕೊಳ್ಳಲು ಪರ್ಸ್ ಚೆಕ್ ಮಾಡಿದೆ. ಖಾತ್ರಿಯಾದ ಬಳಿಕವೇ ನಾನು ಬಸ್ ಏರಲು ನಿರ್ಧರಿಸಿದೆ. ಚಿಲ್ಲರೆ ಇಲ್ಲದೇ ಇದ್ದರೆ ಮೂರು ವರ್ಷಗಳ ಜೈಲು, ನಿಜಕ್ಕೂ? ಈ ಆರ್ಟಿಸಿ ಈ ನಿಯಮ ಪಾಲಿಸಿದಲ್ಲಿ ಜನರು ಖಾಸಗಿ ಬಸ್ಸುಗಳತ್ತ ಸಾಗುತ್ತಾರೆ,” ಎಂದಿದ್ದಾರೆ.
ಚಿಲ್ಲರೆ ಪರದಾಟಕ್ಕೆ ಅಂತ್ಯ ಹಾಡಲು ಕರ್ನಾಟಕದಲ್ಲಿರುವ ಆರ್ಟಿಸಿಗಳ ಅನೇಕ ಬಸ್ಸುಗಳು ನಗದುರಹಿತವಾಗುತ್ತಿದ್ದು, ಡಿಜಿಟಲ್ ಪಾವತಿಗಳಿಗೆ ಅವಕಾಶ ಕಲ್ಪಿಸಲು ಆರಂಭಿಸಿವೆ. ಆದರೆ ಇದನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರಲು ಸಮಯ ಹಿಡಿಯುತ್ತದೆ.
ಈ ಕುರಿತು ಪ್ರತಿಕ್ರಿಯಿಸಿದ ವಾ.ಕ.ರ.ಸಾ.ಸಂನ ಹುಬ್ಬಳಿ ಘಟಕದ ಮುಖ್ಯ ಸಂಚಾರಿ ನಿರ್ವಾಹಕರು, ಶೀಘ್ರದಲ್ಲೇ ಈ ಪೋಸ್ಟರ್ಗಳನ್ನು ಹಿಂದಕ್ಕೆ ಪಡೆಯಲಾಗುವುದು ಎಂದಿದ್ದು, ಸರಿಯಾದ ಚಿಲ್ಲರೆ ಕೊಟ್ಟು ಸಹಕರಿಸಿ ಎಂದು ಕಂಡಕ್ಟರ್ಗಳು ಪ್ರಯಾಣಿಕರ ಬಳಿ ಮನವಿ ಮಾಡಬಹುದಾಗಿದೆ ಅಷ್ಟೇ ಎಂದಿದ್ದಾರೆ.