ಧಾರವಾಡ: ಖ್ಯಾತ ಹಿಂದುಸ್ತಾನಿ ಗಾಯಕ ಪಂ. ರಾಜಶೇಖರ ಮನಸೂರ (80) ಭಾನುವಾರ ಬೆಂಗಳೂರಿನಲ್ಲಿ ನಿಧನ ಹೊಂದಿದರು. ಅವರಿಗೆ ಪತ್ನಿ, ಮೂವರು ಪುತ್ರಿಯರು ಇದ್ದಾರೆ.ಪಂ. ರಾಜಶೇಖರ ಅವರು ಮೂಲತಃ ಧಾರವಾಡ ತಾಲೂಕಿನ ಮನಸೂರ ಗ್ರಾಮದವರು. ಹಿಂದುಸ್ತಾನಿ ಸಂಗೀತ ದಿಗ್ಗಜ ಪಂ.
ಮಲ್ಲಿಕಾರ್ಜುನ ಮನಸೂರ ಅವರ 8 ಜನ ಮಕ್ಕಳಲ್ಲಿ ಏಕೈಕ ಪುತ್ರರಾಗಿ 1942ರ ಡಿ. 16ರಂದು ಜನಿಸಿದ ರಾಜಶೇಖರ ಧಾರವಾಡದ ಸೇಂಟ್ ಜೋಸೆಫ್ ಹೈಸ್ಕೂಲ್, ನಂತರ ಕರ್ನಾಟಕ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. 18ನೇ ವಯಸ್ಸಿನಲ್ಲಿ ಸಂಗೀತ ವಿಶಾರದ ಪರೀಕ್ಷೆಯಲ್ಲಿ ಚಿನ್ನದ ಪದಕ ಗೆದ್ದರು. ಆಕಾಶವಾಣಿ ಯುವ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿ ವೇತನದಲ್ಲಿ ವೇಲ್ಸ್ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಮತ್ತು ಭಾಷಾಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿದ್ದರು.
ರಾಜಶೇಖರ 20ನೇ ವಯಸ್ಸಿನಲ್ಲೇ ತಂದೆಯೊಂದಿಗೆ ಸಂಗೀತ ಕಛೇರಿಗಳಲ್ಲಿ ಭಾಗವಹಿಸಲು ಆರಂಭಿಸಿದರು. ಪೂರ್ಣಕಾಲಿಕ ಸಂಗೀತಗಾರನಾಗುವ ಬದಲು ಉದ್ಯೋಗ ಹೊಂದಬೇಕು ಎಂಬುದು ತಂದೆಯ ಆಶಯವಾಗಿತ್ತು. ಹಾಗಾಗಿ ಅವರು ಸುಮಾರು 35 ವರ್ಷಗಳ ಕಾಲ ಸಾಹಿತ್ಯ ಮತ್ತು ಭಾಷಾಶಾಸ್ತ್ರ ಕಲಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಹಾಡುಗಾರಿಕೆಯನ್ನೂ ಮುಂದುವರಿಸಿದ್ದ ಅವರು, ತಂದೆಯ ಗಾಯನಕ್ಕೆ ಬೆಂಬಲ ನೀಡಿದ್ದರು. ಹಲವಾರು ಪ್ರತಿಷ್ಠಿತ ಸಂಗೀತ ಉತ್ಸವ, ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಸ್ವತಂತ್ರವಾಗಿ ಭಾಗವಹಿಸಿದ್ದರು. ಸರಳ ಸಜ್ಜನಿಕೆಯ ಸ್ವಭಾವದವರಾಗಿದ್ದ ಮನಸೂರ, ಸಂಗೀತ ಶುದ್ಧತೆಗೆ, ಶಾಸ್ತ್ರದ ಬದ್ಧತೆಗೆ ಸಮರ್ಪಿಸಿಕೊಂಡಿದ್ದರು. ಸಂಗೀತ ಸೂಕ್ಷ್ಮಗ್ರಹಿಕೆಗೆ ಮಹತ್ವ ನೀಡುತ್ತ ಪ್ರಬುದ್ಧ ಗಾಯನವನ್ನು ಉಣಬಡಿಸುತ್ತಿದ್ದರು.
ಪ್ರಬುದ್ಧ ಗಾಯನ: ಆಕಾಶವಾಣಿ ಉನ್ನತ ದರ್ಜೆಯ ಗಾಯಕರಾಗಿದ್ದರು. ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ (1997)ಗೆ ಭಾಜನರಾಗಿದ್ದರು. 2005-2008ರವರೆಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿ ನಾಮನಿರ್ದೇಶನಗೊಂಡಿದ್ದರು. ಕರ್ನಾಟಕ ಕಲಾಶ್ರೀ ಗೌರವ ಪ್ರಶಸ್ತಿ (2009)ಗೆ ಭಾಜನರಾಗಿದ್ದರು. ಅವರ ಸಂಗೀತದ ಧ್ವನಿಮುದ್ರಿಕೆಗಳನ್ನು ಭೋಪಾಲ್ನ ಇಂದಿರಾ ಗಾಂಧಿ ಮಾನವ ಸಂಗ್ರಹಾಲಯದ ಆರ್ಕೆವ್ನಲ್ಲಿ ಸಂರಕ್ಷಿಸಲಾಗಿದೆ. 2009ರಲ್ಲಿ 60ನೇ ಜನ್ಮದಿನದಂದು ಅವರ ಸಂಗೀತ ಆಲ್ಬಂ ‘ಇನ್ ದಿ ಫುಟ್ ಸ್ಟೆಪ್ಸ್ ಆಂಡ್ ಬಿಯಾಂಡ್’ ಬಿಡುಗಡೆಗೊಂಡಿತು. 2012ರಲ್ಲಿ ಅತ್ಯುನ್ನತ ‘ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ’, 2016ರಲ್ಲಿ ‘ರಾಷ್ಟ್ರೀಯ ಸಂಗೀತ ಅಕಾಡೆಮಿ ಪ್ರಶಸ್ತಿ’ಗೆ ಭಾಜನರಾದರು. ಚೆನ್ನೈನ ತಾನಸೇನ್ ಸಂಗೀತ ಅಕಾಡೆಮಿಯಿಂದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಮತ್ತು ಪಂಡಿತ್ ಸಣ್ಣ ಭರಮಣ್ಣ ಸ್ಮಾರಕ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾದರು.