ಹುಬ್ಬಳ್ಳಿ: ವಿಧಾನ ಪರಿಷತ್ ಚುನಾವಣೆಯ ಉಸ್ತುವಾರಿ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ರಾಣೆಬೆನ್ನೂರು ಶಾಸಕ ಅರುಣಕುಮಾರ ಪೂಜಾರ ಹಾಗೂ ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ ನಡುವೆ ಸಭೆಯಲ್ಲೇ ಜಟಾಪಟಿ ನಡೆದಿದೆ. ಇಲ್ಲಿನ ಕ್ಯುಬಿಕ್ಸ್ ಹೋಟೆಲ್ನಲ್ಲಿ ಬಿಜೆಪಿ ಪ್ರಮುಖರ ಸಭೆ ನಡೆಯುತ್ತಿದೆ.
ಮೊದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಿ ಹೋದರು. ಬಳಿಕ ನಡೆದ ಇನ್ನೊಂದು ಸಭೆಯಲ್ಲಿ ಈ ಘಟನೆ ನಡೆದಿದೆ. ಗಲಾಟೆ ಜೋರಾಗುತ್ತಿದ್ದಂತೆ ಇಬ್ಬರೂ ಶಾಸಕರ ಬೆಂಬಲಿಗರು ಶಾಸಕ ಜಗದೀಶ ಶೆಟ್ಟರ್ ಸಮ್ಮುಖದಲ್ಲೇ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದರು.
ನಾನು ರಾಜೀನಾಮೆ ಕೊಡುವೆ ಎಂದು ಅರುಣಕುಮಾರ ಪೂಜಾರ ಹೇಳಿದರು ಎಂದು ಅವರ ಆಪ್ತರೊಬ್ಬರು ತಿಳಿಸಿದರು. ಆಗ ಪಕ್ಷದ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜು ಕಲಕೋಟೆ ಸಮಾಧಾನ ಪಡಿಸಿದರು.
ಆಗ ಮಧ್ಯ ಪ್ರವೇಶಿಸಿದ ಕೆಲ ಕಾರ್ಯಕರ್ತರು ಹಾಗೂ ಜಗದೀಶ ಶೆಟ್ಟರ್ ಎಲ್ಲರನ್ನೂ ಸಮಾಧಾನ ಪಡಿಸಿದರು.
ಘಟನೆ ಬಳಿಕ ಕೆಲ ಹೊತ್ತು ಹೋಟೆಲ್ ನ ಕೊಠಡಿಯಲ್ಲಿ ಕುಳಿತು ಆರ್. ಶಂಕರ್ ನಿರ್ಗಮಿಸಿದರು. ಈ ವೇಳೆ ಪ್ರತಿಕ್ರಿಯಿಸಿ ‘ ಯಾವ ಗಲಾಟೆಯೂ ಆಗಿಲ್ಲ. ಅರುಣ ರಾಜೀನಾಮೆ ಕೊಡುವುದಾದರೆ ಕೊಡಲಿ; ಅದನ್ನು ಅಂಗೀಕಾರ ಮಾಡಬೇಕು’ ಎಂದು ಕಾರು ಹತ್ತಿಕೊಂಡು ಹೊರಟು ಹೋದರು.