ಹುಬ್ಬಳ್ಳಿ: ಚುನಾವಣೆ ಹೊತ್ತಿನಲ್ಲಿ ಇಷ್ಟೊಂದು ಓಡಾಡುವ ಸ್ಥಿತಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಯಾಕೆ ಬಂದಿದೆ? ಇಬ್ಬರು ರಾಷ್ಟ್ರೀಯ ನಾಯಕರು ಯಾಕೆ ಕರ್ನಾಟಕದಲ್ಲಿ ಬೀಡು ಬಿಟ್ಟಿದ್ದಾರೆ? ಎಂದು ಕಾಂಗ್ರೆಸ್ ಮುಖಂಡ ಹಾಗೂ ರಾಜಸ್ಥಾನ ಸಿಎಂ ಅಶೋಕ್ ಗೆಹೋಟ್ ಪ್ರಶ್ನೆ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳಿರುವ ರಾಜ್ಯಗಳನ್ನು ಹೋಲಿಸಿ ನೋಡಿ. ಯಾವ ರಾಜ್ಯದಲ್ಲಿ ಉತ್ತಮ ಆಡಳಿತವಿದೆ ಎಂದು ಮೋದಿ ಗಮನಿಸಲಿ. ರಾಜ್ಯದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಈ ನಡುವೆ ಧರ್ಮಗಳ ನಡುವೆ ಒಡುಕು ಹುಟ್ಟಿಸಲಾಗುತ್ತಿದೆ. ಆದರೆ ಧರ್ಮ ಮತ್ತು ಜಾತಿ ಹೆಸರಲ್ಲಿ ರಾಜಕೀಯ ಬಹಳದಿನ ನಡೆಯಲ್ಲ. ಹಿಟ್ಲರ್ ಕೂಡ ಧರ್ಮದ ಹೆಸರು ಹೇಳಿಕೊಂಡು ಬಹಳ ಜನಪ್ರಿಯವಾಗಿದ್ದ. ಆ ನಂತರ ಹಿಟ್ಲರ್ ಜರ್ಮನಿಯನ್ನು ಹಾಳು ಮಾಡಿದ ಎಂದು ಗೆಹೋಟ್ ವ್ಯಂಗ್ಯವಾಡಿದ್ದಾರೆ.
ಕರ್ನಾಟಕದ ಜನರು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಈಗಾಗಲೇ ತೀರ್ಮಾನಿಸಿದ್ದಾರೆ. ಪ್ರಮುಖ ಪಕ್ಷಗಳ ನಾಯಕರ ಬಗ್ಗೆ ಭ್ರಷ್ಟರ ಗುಂಪು ಎಂದು ಪಿಎಮ್ ಕರೆಯುತ್ತಾರೆ. ಆರ್ಎಸ್ಎಸ್ ಮೋದಿಯವರ ಬಾಯಿ ಮುಚ್ಚಿಸಿದೆ. ಬಿಜೆಪಿಗೆ ಕಡಿಮೆ ಸೀಟ್ ಬಂದರೆ ಕುದುರೆ ವ್ಯಾಪಾರ ಮಾಡುವುದೇ ಕೆಲಸವಾಗಿದೆ. ದೇಶದಲ್ಲಿ ಒಂದೇ ಸರ್ಕಾರವಿರಲಿ ಅನ್ನೋ ಹುನ್ನಾರ ಮಾಡುತ್ತಿದ್ದಾರೆ. ಎಲ್ಲಾ ವಿರೋಧ ಪಕ್ಷಗಳ ಮೇಲೆ ಐಟಿ, ಇಡಿ, ಸಿಬಿಐ ರೇಡ್ ಮಾಡಿಸ್ತಾರೆ.
ರಾಜಸ್ತಾನದ ಪ್ರಣಾಳಿಕೆಯಲ್ಲಿ ಹೇಳಿದ್ದೆಲ್ಲ ಕೊಟ್ಟಿದ್ದೇವೆ. ಫ್ರೀ ಕೊಟ್ಟರೆ ದಿವಾಳಿ ಆಗುವುದಾದರೆ ನಮ್ಮ ರಾಜ್ಯ ದೇಶದಲ್ಲಿ ಯಾಕೆ ಆರ್ಥಿಕವಾಗಿ ಉನ್ನತ ಸ್ಥಾನದಲ್ಲಿದೆ. ಸಾಮಾಜಿಕ ಸಾಮರಸ್ಯ ಹದಗೆಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ಹೇಳಿದೆ. ಭಜರಂಗದಳ ನಿಷೇಧ ವಿಚಾರದಲ್ಲಿ ಕೋರ್ಟ್ ನಿಲುವೇ ನಮ್ಮ ನಿಲುವು ಎಂದು ಅಶೋಕ್ ಗೆಹೋಟ್ ಹೇಳಿದರು.