ಧಾರವಾಡ: ನಮ್ಮ ಪಕ್ಷ ಜಾರಿಗೆ ತಂದ ಕೆಲವೊಂದಿಷ್ಟು ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ನಾವು ಎಡವಿದ್ದೇವೆ ಎಂದೆನಿಸುತ್ತಿದೆ. ಇದನ್ನು ನಮ್ಮ ಪಕ್ಷದ ವಲಯದಲ್ಲಿ ಕುಳಿತು ಗಂಭೀರವಾಗಿ ಚರ್ಚೆ ಮಾಡಬೇಕಿದೆ. ಕಾಂಗ್ರೆಸ್ ನೀಡಿದ ಗ್ಯಾರಂಟಿ ಕಾರ್ಡ್ಗಳು ಜನರ ದಾರಿ ತಪ್ಪಿಸಿವೆ. ನೋಡೋಣ… ಅವರು ಎಷ್ಟರ ಮಟ್ಟಿಗೆ ಗ್ಯಾರಂಟಿಗಳನ್ನು ಈಡೇರಿಸುತ್ತಾರೋ ಕಾದು ನೋಡೋಣ ಎಂದು ಅರವಿಂದ ಬೆಲ್ಲದ ಹೇಳಿದರು.
ತಮ್ಮ ಗೆಲುವಿನ ಬಳಿಕ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಅವರು, ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಸರಳ ಮತ್ತು ಸಜ್ಜನಿಕೆಯಿಂದ ಕೆಲಸ ಮಾಡಿಕೊಂಡು ಬಂದಿದ್ದೇವೆ. ನಮ್ಮ ಬಿಜೆಪಿ ಸರ್ಕಾರ ನೀಡಿದ ಯೋಜನೆಗಳನ್ನು ಜನರಿಗೆ ತಲುಪಿಸಿದ್ದೇನೆ. ಈ ಗೆಲುವು ನನ್ನ ಗೆಲುವಲ್ಲ, ನನ್ನ ಕಾರ್ಯಕರ್ತರು ಹಾಗೂ ಮತದಾರರ ಗೆಲುವು ಎಂದರು.