ಬೆಂಗಳೂರು: ಕಾಂಗ್ರೆಸ್ ಹಲವು ಗ್ಯಾರಂಟಿಗಳನ್ನು ಈಗಾಗಲೇ ಘೋಷಿಸಿದ್ದು ಹೊಸದಾಗಿ ಪ್ರತಿ ತಾಲೂಕಿನಲ್ಲಿ ತಾಯಿ- ಮಗು ಆಸ್ಪತ್ರೆ ನಿರ್ಮಿಸುವುದಾಗಿ ಘೋಷಿಸಿದ್ದಾರೆ.
ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ , ಹೆಣ್ಣುಮಕ್ಕಳಿಗಾಗಿ ಪ್ರತಿ ತಾಲೂಕಿನಲ್ಲೂ ತಾಯಿ-ಮಗು ಆಸ್ಪತ್ರೆಯನ್ನ ಹೊಸದಾಗಿ ನಿರ್ಮಿಸಿ, ಉಚಿತವಾಗಿ ಹೆರಿಗೆ ಸೌಲಭ್ಯ ಸಿಗುವಂತೆ ಮಾಡುತ್ತೇವೆ. ಎಲ್ಲರನ್ನೂ ಸಮಾನತೆಯಿಂದ ನೋಡುತ್ತೇವೆ. ಮಕ್ಕಳಿಗೆ ಗ್ರಾಮೀಣ ಭಾಗದಲ್ಲೇ ಉತ್ತಮ ಶಿಕ್ಷಣ ವ್ಯವಸ್ಥೆ ಕಲ್ಪಿಸಿ, ಬೆಂಗಳೂರಿನಂತಹ ನಗರಗಳಿಗೆ ಬರುವುದನ್ನು ತಪ್ಪಿಸುತ್ತೇವೆ ಎಂದು ಹೇಳಿದ್ದಾರೆ.
ಬೆದರಿಕೆಗೆ ಬಗ್ಗಲ್ಲ: `ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ ಕೇಂದ್ರದ ಯೋಜನೆಗಳಿಗೆ ಬ್ರೇಕ್’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಮಿಸ್ಟರ್ ನಡ್ಡಾಜಿ, ಡೋಂಟ್ ತ್ರೆಟನ್ ಅಸ್, ಏನ್ ಹೆದರಿಸ್ತೀರಾ? ಕೇಂದ್ರದ ಯೋಜನೆಗಳನ್ನು ನಿಲ್ಲಿಸ್ತೇವೆ ಅಂತ ಹೆದರಿಸ್ತೀರಾ? ಇಂತಹ ಬ್ಲ್ಯಾಕ್ಮೇಲ್ಗೆ ಹೆದರಲ್ಲ. ನಿಮ್ಮ ಶಾಸಕರು ಸಂಸದರು ಮಕ್ಕಳ ತರಹ ಸುಮ್ಮನಿರಬಹುದು. ಕಾಂಗ್ರೆಸ್ ನಾಯಕರು ನಿಮ್ಮ ಬೆದರಿಕೆಗೆ ಹೆದರೋದಿಲ್ಲ. ನಿಮ್ಮ ಪ್ರಧಾನಿಯನ್ನ ಬೀದಿ ಬೀದಿ ಅಲೆಯೋ ತರಹ ಮಾಡಿರೋದು ನೀವು ಎಂದು ತಿರುಗೇಟು ನೀಡಿದ್ದಾರೆ.