ಬೆಂಗಳೂರು: ವೀಕೆಂಡ್ ಕರ್ಫ್ಯೂ ರದ್ದು ನಿರ್ಧಾರ ಒತ್ತಡದಿಂದ ಮಾಡಿದ್ದಲ್ಲ, ಕೇಸ್ ಗಳು ಜಾಸ್ತಿ ಇದ್ರೂ ಆಸ್ಪತ್ರೆ ದಾಖಲಾತಿ ಕಮ್ಮಿ ಇದೆ, ಇಂಥ ಸಂದರ್ಭದಲ್ಲಿ ಹೇಗೆ ನಿರ್ವಹಣೆ ಮಾಡಬೇಕೆಂಬುದರ ಬಗ್ಗೆ ತಜ್ಞರು ವಿಶ್ವಾಸ ಮೂಡಿಸಿದ್ದಾರೆ , ಜನರಿಗೂ ಸಮಸ್ಯೆ ಆಗಬಾರದು ಅಂತ ಈ ನಿರ್ಧಾರ ಮಾಡಿದ್ದೇವೆಂದು ಆರ್ ಟಿ ನಗರದ ನಿವಾಸದ ಬಳಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಕೃಷ್ಣಾ ಸೇರಿದಂತೆ ಅಂತಾರಾಜ್ಯ ಜಲ ವಿವಾದಗಳ ಬಗ್ಗೆ ರಾಜ್ಯದ ವಾದ ಮಂಡಿಸುವ ತಜ್ಞರೊಂದಿಗೆ ಸಭೆ ಮಾಡುತ್ತಿದ್ದೇವೆ, ನಮ್ಮ ಕಾನೂನು ತಜ್ಞರ ತಂಡ ಕೂಡ ವರ್ಚುವಲ್ ಸಭೆಯಲ್ಲಿ ಭಾಗವಹಿಸುತ್ತಿದೆ. ನಮ್ಮ ಜಲವ್ಯಾಜ್ಯಗಳನ್ನು ಪರಿಣಾಮಕಾರಿಯಾಗಿ ಗಂಭೀರವಾಗಿ ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆ ಮಾಡುತ್ತೇವೆಂದರು.
ಹಾಲು, ನೀರು, ವಿದ್ಯುತ್ ದರ ಏರಿಕೆ ಪ್ರಸ್ತಾಪಗಳ ವಿಚಾರವಾಗಿ ಮಾತನಾಡಿದ ಇವರು, ದರ ಏರಿಕೆಗಳ ಬಗ್ಗೆ ಯಾವುದೇ ತೀರ್ಮಾನಗಳು ಆಗಿಲ್ಲ, ಅವಸರದ ನಿರ್ಧಾರಗಳನ್ನು ಸರ್ಕಾರ ಕೈಗೊಳ್ಳಲ್ಲ. ಎಲ್ಲಾ ಆಯಾಮಗಳಿಂದಲೂ ಚರ್ಚೆ ನಡೆಸ್ತೇವೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.