ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಂದಿನ ರಾಷ್ಟ್ರಪತಿ ಹುದ್ದೆ ಅಲಂಕರಿಸಲಿದ್ದಾರೆ ಎಂದು ದಕ್ಷಿಣ ಭಾರತದ ಅತಿ ದೊಡ್ಡ ಜೈನ ಮಂದಿರ ದೇವನಹಳ್ಳಿಯ ಸಿದ್ಧಾಚಲ ಸ್ಥೂಲಭದ್ರಧಾಮದ ಜೈನ ಆಚಾರ್ಯ ಶ್ರೀ ಚಂದ್ರಯೇಶ ಸೂರೀಶ್ವರ್ಜಿ ಮಹಾರಾಜ್ ಭವಿಷ್ಯ ನುಡಿದಿದ್ದಾರೆ.
ದೇವನಹಳ್ಳಿಯ ಸಿದ್ಧಾಚಲ ಸ್ಥೂಲಭದ್ರಧಾಮದ ಆವರಣದಲ್ಲಿ ಶ್ರೀ ಸ್ಥೂಲಭದ್ರ ಸುರೀಶ್ವರ್ ಜಿ ಮಹಾರಾಜ್ ಸಾಹಬ್ ಅವರ 19 ನೇ ಪುಣ್ಯತಿಥಿ ಹಾಗೂ “ಚಂದ್ರ ಹಿಲ್ಸ್ ಅಂತರರಾಷ್ಟ್ರೀಯ ಜೈನ ಶಾಲೆ ನಿರ್ಮಾಣ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಪಾಲರಿಗೆ ಆಶಿರ್ವಾದ ನೀಡಿದ ಸ್ವಾಮೀಜಿ, ನಿಮಗೆ ಮುಂದಿನ ರಾಷ್ಟ್ರಪತಿ ಹುದ್ದೆಗೇರುವ ಯೋಗ ಇದೆ. ಇಷ್ಟರಲ್ಲೇ ನಿಮಗೆ ಶುಭ ಸಮಾಚಾರ ದೊರೆಯಲಿದೆ ಎಂದು ಹೇಳಿದರು.
ದೇಶದ ಅತಿ ದೊಡ್ಡ ಹಾಗೂ ಸಂಸ್ಕೃತಿ, ಶಿಕ್ಷಣ ನೀಡುವ 30 ಕೋಟಿ ರೂಪಾಯಿ ವೆಚ್ಚದ ಜೈನ ಶಾಲೆ ನಿರ್ಮಾಣ ಯೋಜನೆಗೆ ನಿಮ್ಮ ಅಮೃತ ಹಸ್ತದಿಂದ ಚಾಲನೆ ನೀಡಿದ್ದೀರಿ. ನೀವು ರಾಷ್ಟ್ರಪತಿ ಹುದ್ದೆಗೇರಿದ ನಂತರ ಈ ಶಾಲೆಯನ್ನು ನೀವು ಉದ್ಘಾಟಿಸಲಿದ್ದೀರಿ. ನಾವು ಮತ್ತೊಮ್ಮೆ ನಿಮ್ಮನ್ನು ಇಲ್ಲಿಗೆ ಕರೆಸಿಕೊಳ್ಳುವ ಯೋಗ ಕೂಡಿ ಬರಲಿದೆ. ಎರಡು ಮೂರು ಬಾರಿ ನೀವು ರಾಷ್ಟ್ರಪತಿ ಹುದ್ದೆಗೇರಲಿದ್ದೀರಿ ಎಂಬ ಆಚಾರ್ಯರ ಭವಿಷ್ಯದ ಬಗ್ಗೆ ಮುಗುಳು ನಗೆ ಬೀರಿದ ರಾಜ್ಯಪಾಲರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಮೌಲ್ಯಗಳು ಕುಸಿಯುತ್ತಿದ್ದು, ಸಂಸ್ಕಾರ, ಸಂಸ್ಕೃತಿಯನ್ನು ಪುನರ್ ಸ್ಥಾಪಿಸುವ ಅಗತ್ಯವಿದೆ. ಭಾರತೀಯ ಶಿಕ್ಷಣ ಪದ್ಧತಿ, ಸಂಸ್ಕೃತಿ ವಿಶ್ವಮಾನ್ಯವಾಗಿದ್ದು, ವಸುದೈವ ಕುಟುಂಬಕಂ ನಮ್ಮ ಬದುಕಿನ ಜೀವಾಳವಾಗಿದೆ. ಇಡೀ ಬ್ರಹ್ಮಾಂಡವೇ ನಮ್ಮ ಪರಿವಾರವಾಗಿದೆ ಎಂದರು.
ಬೆಂಗಳೂರು ದೇವನಹಳ್ಳಿಯ ಪುಣ್ಯಕ್ಷೇತ್ರದಲ್ಲಿ, ಶ್ರೀ ಸಿದ್ಧಾಚಲ ಸ್ಥೂಲಭದ್ರ ಧಾಮ ಗಿರಿಮಾಲವು ಅದ್ಭುತವಾದ ಕರಕುಶಲ ಕಲೆಯಾಗಿದೆ. ದಕ್ಷಿಣ ಕೇಶರಿ ಆಚಾರ್ಯ ಶ್ರೀ ಸ್ಥೂಲಭದ್ರ ಸೂರೀಶ್ವರ್ಜಿ ಮಹಾರಾಜ್ ಸಾಹೇಬರ ಆಶೀರ್ವಾದ ಮತ್ತು ನಿಮ್ಮ ಶಿಷ್ಯರಾದ ಆಚಾರ್ಯ ಶ್ರೀ ಚಂದ್ರಾಯಶ ಸೂರೀಶ್ವರ್ಜಿ ಮಹಾರಾಜ್ ಸಾಹೇಬರ ಮಹಾನ್ ದೃಷ್ಟಿ ಮತ್ತು ದಿವ್ಯ ಚಿಂತನೆಯ ಪ್ರಭಾವದಿಂದ ಜಿನಾಲಯಗಳ ದರ್ಶನ ಮತ್ತು ತೀರ್ಥಯಾತ್ರೆಗಳು ನಡೆಯುತ್ತಿವೆ ಎಂದು ಹೇಳಿದರು.
ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರಗಳ ಜ್ಞಾನವು ಮಾನವೀಯ, ಸದ್ಗುಣ, ಉತ್ತಮ ಚಿಂತನೆಗಳು ಮತ್ತು ಪರೋಪಕಾರಿ ಶಿಕ್ಷಣದೊಂದಿಗೆ ಬರುತ್ತದೆ. ಆಧುನಿಕ ಜ್ಞಾನವನ್ನು ಮೌಲ್ಯಗಳೊಂದಿಗೆ ಸಂಯೋಜಿಸುವ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ, ಅದು ಜಗತ್ತಿಗೆ ಹೊಸ ದಿಕ್ಕನ್ನು ನೀಡುವುದಲ್ಲದೆ ಇಡೀ ಮಾನವಕುಲಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ತಿಳಿಸಿದರು.
ಪ್ರಧಾನ ಟ್ರಸ್ಟಿ ಶ್ರೀ ಪ್ರಕಾಶ್ ಜಿ ಕೊಠಾರಿ, ಟ್ರಸ್ಟಿಗಳಾದ ಜೈಲಶ್ ಶಾ, ಶ್ರೀ ಇಂದರಚಂದ್ ಜಿ ಬೋಹ್ರಾ, ಶ್ರೀ ಧರ್ಮಿಚಂದ್ ಜಿ ಧೋಕಾ, ಮಂಗಿಲಾಲ್ ಜಿ ವೇದಮುತ, ಚಂಪಾಲಾಲ್ ಜಿ, ಗೌತಮ್ ಕುಮಾರ್ ಬಂದಮುತ, ನೇಮಿಚಂದ್ ಜಿ, ಚಿಕ್ಕಪೇಟೆ ಒಕ್ಕೂಟದ ಅಧ್ಯಕ್ಷ ಗೌತಮ್ ಸೋಲಂಕಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.